ದೇವರಾಜ್ ನಿಸರ್ಗತನಯ ರವರ ಕವನಗಳು


ದೇವರಾಜ್ ನಿಸರ್ಗತನಯ ಬಂಗಾರಪೇಟೆ.
ಮೊ.9845527597
ಕಛೇರಿ ವಿಳಾಸ : ಸಂಪನ್ಮೂಲ ವ್ಯಕ್ತಿ
ಬಿ.ಆರ್.ಸಿ. ಕೆ.ಜಿ.ಎಫ್ ತಾಲ್ಲೂಕು



ವಿದ್ಯಾಗಮ

ಮಕ್ಕಳ ಬಳಿಗೆ ಶಿಕ್ಷಕರು
ಬರ್ತಾರೆ ಕೇಳ್ರಣ್ಣಾ
ವಿದ್ಯಾಗಮ ಯೋಜನೆಯ
ತರ್ತಾರೆ ನೋಡ್ರಣ್ಣಾ 

ಶಾಲೆಯನ್ನು ತೆರೆಯೋಕೆ
ಕೊರೋನಾ ಬಿಡದಣ್ಣಾ
ಆದರೂನು ಮಕ್ಕಳಿಗೆ
ಪಾಠ ನಿಲ್ಲಬಾರ್ದಣ್ಣಾ 

ಕಾಲ್ಪನಿಕ ತರಗತಿಗೆ
ಮಕ್ಕಳನ್ನು ಕರೆಯುವರು
ದೈಹಿಕ ಅಂತರ ಕಾಪಾಡಿ
ಮಾರ್ಗದರ್ಶನ ನೀಡುವರು

ತಂತ್ರಜ್ಞಾನ ಬಳಕೆಯಿಂದ
ಸಂಪರ್ಕ ಮಾಡುವರು
ಟಿ.ವಿ. ಮೊಬೈಲ್ ಮೂಲಕ
ಬೋಧನೆ ನೀಡುವರು

ಮಕ್ಕಳ ಕಲಿಕೆ ನಿರಂತರ
ಸಾಗುತದೆ ಕೇಳ್ರಣ್ಣಾ
ಸರ್ಕಾರಿ ಮಕ್ಕಳ ಬಗ್ಗೆ
ಕಾಳಜಿ ಉಂಟಣ್ಣಾ 

ನಾವು ನೀವು ಎಲ್ಲ ಕೂಡಿ
ಕೈಜೋಡಿಸ ಬೇಕ್ರಣ್ಣಾ
ಬಡಮಕ್ಕಳ ಶಿಕ್ಷಣಕೆ
ಸಹಕಾರ ನೀಡ್ರಣ್ಣಾ

ಬನ್ನಿರಣ್ಣಾ ಬನ್ನಿರಕ್ಕ
ಬರಮಾಡಿಕೊಳ್ಳೋಣ
ವಿದ್ಯಾಗಮ ಯೋಜನೆಯ
ಸಾಕಾರಗೊಳಿಸೋಣ 

*ದೇವರಾಜ್ ನಿಸರ್ಗತನಯ*
*ಬಂಗಾರಪೇಟೆ* 



ಕಂದ ಮತ್ತು ಕಾಮನ ಬಿಲ್ಲು 

ಕಾಮನ ಬಿಲ್ಲೆ ಕಾಮನ ಬಿಲ್ಲೆ
ಕಾಡುತಿರುವೆಯಾ ?
ಕದ್ದು ಮುಚ್ಚಿ ಕದ್ದು ಮುಚ್ಚಿ
ಓಡುತಿರುವೆಯಾ ?

ಕಾಮನ ಬಿಲ್ಲೆ ನನ್ನ ಜೊತೆಗೆ
ಆಡಲು ಬರುವೆಯಾ ?
ನಿನ್ನ ಹಾಗೆ ನನಗೂ ಕೂಡ
ಬಣ್ಣ ಬಳಿವೆಯಾ ?

ಕಾಮನ ಬಿಲ್ಲೆ ದೂರದಲ್ಲೇ
ನಿನ್ನ ಪಹರೆಯಾ ?
ತೋರು ಬಾ ನನಗೂ ಕೂಡ
ನಿನ್ನ ಚಹರೆಯಾ !

ಕಾಮನ ಬಿಲ್ಲೆ ಏಳು ಬಣ್ಣ
ನಿನ್ನ ಒಡವೆಯಾ ?
ನಿನ್ನ ಜೊತೆಗೆ ನಾನು ಬರುವೆ
ನನಗೂ ಕೊಡುವೆಯಾ ?

ಕಾಮನಬಿಲ್ಲೆ ಅಪ್ಪ ಅಮ್ಮ
ಬಿಸಿಲು ಮಳೆಯಾ?
ಇಂದಿನಿಂದ ನಾನು ಕೂಡ
ನಿನ್ನ ಗೆಳೆಯಾ !

ಕಾಮನ ಬಿಲ್ಲೆ ಬಾನಿನಿಂದ
ನೀನು ಬಾರೆಯಾ ?
ಚಂದಮಾಮನನ್ನು ನೀನು
ಕರೆದು ತಾರೆಯಾ ?

ದೇವರಾಜ್ ನಿಸರ್ಗತನಯ
ಬಂಗಾರಪೇಟೆ