ಪ್ರಮುಖ ಸ್ಥಳಗಳ ಮತ್ತೊಂದು ಹೆಸರುಗಳು

ನಮ್ಮ ದೇಶದಲ್ಲಿ ಇರುವ ಪ್ರತಿಯೊಂದು ಊರಿಗೂ ಒಂದೊಂದು ಇತಿಹಾಸವಿದೆ.ಇತಿಹಾಸದಿಂದ  ಊರಿಗೆ ನಾಮಕರಣವಾಗಿ ಕಡೆಗೆ ವ್ಯುತ್ಪತ್ತಿಯಾಗಿ ಮತ್ತೊಂದು ಹೆಸರನ್ನು ಗಳಿಸುತ್ತದೆ. 

ಬನ್ನಿ ಈ ವಾರ ನಮ್ಮ ಕರ್ನಾಟಕದ ಊರುಗಳ ಹೆಸರಿನ ಹಿಂದಿನ ಹೆಸರ ಬಗ್ಗೆ ತಿಳಿಯೋಣ.
ಭದ್ರಾವತಿ :
ಹಿಂದೆ ಭದ್ರಾವತಿಯಲ್ಲಿ ದಟ್ಟವಾದ ಕಾಡಿತ್ತು. ಮೂಲ ಹೆಸರು ಬೆಂಕಿ ಪುರ, ವಂಕಿ ಪುರ, ಕಡೆಗೆ ಭದ್ರ ನದಿ ಹರಿಯುವುದರಿಂದ ಭದ್ರಾವತಿಯಾಯಿತು 
ಬೆಂಗಳೂರು :
ಹೊಯ್ಸಳ ದೊರೆ ವೀರ ಬಲ್ಲಾಳ ಇಂದಿನ ಹೆಬ್ಬಾಳಪ್ರದೇಶಕ್ಕೆ ಬೇಟೆಗೆಂದು ಬಂದಾಗ ಕಾಡಿನಲ್ಲಿ ದಾರಿ ತಪ್ಪಿದ.ಅವನಿಗೆ ತುಂಬಾ ಹಸಿವಾಯಿತು. ಅಲ್ಲಿದ್ದ ಅಜ್ಜಿಯ ಗುಡಿಸಲು ಕಂಡ.ವೀರ ಬಲ್ಲಾಳನ ಕಂಡ ಅಜ್ಜಿ ಮನೆಯಲ್ಲಿ ಇದ್ದ ಬೆಂದ ಕಾಳನ್ನು ಕೊಟ್ಟಳು. ಇದರಿಂದ ಅ ಸ್ಥಳಕ್ಕೆ ಬೆಂದಕಾಳು ಎಂದು ಹೆಸರು ಬಂತು, ಕ್ರಮೇಣ ಬೆಂಗಳೂರು ಆಯಿತು.
ಮುಳುಬಾಗಿಲು :
ಮೂಲ ಹೆಸರು ಮೂಡಣ ಬಾಗಿಲು, ವಿಜಯನಗರದ ಅರಸರ ಕೋಟೆಯ ಬಾಗಿಲ್ಲೊಂದು ಮೂಡಣ ದಿಕ್ಕಿನಲ್ಲಿ ಇಂದಿನ
ಮುಳುಬಾಗಿಲು ಪ್ರದೇಶದಲ್ಲಿ ಇತ್ತು. ಇದೇ ಮುಂದೆ ಮೂಡಣ ಬಾಗಿಲು, ಮೂಡು ಬಾಗಿಲು  ಮುಂದೆ ಅದು ಮುಳುಬಾಗಿಲು ಆಯಿತು. ಕರ್ನಾಟಕದ ಮೇಲೆ ಸೂರ್ಯನ ಮೊದಲ ಕಿರಣವು ಮೊದಲು ಸ್ಪರ್ಶಿಸುವುದು ಇದೇ ಮುಳಬಾಗಿಲಿನಲ್ಲಿ.
ಕುಶಾಲನಗರ :
ಹಿಂದಿನ ಹೆಸರು ಫ್ರೇಸರ್ ಪೇಟೆ,ಯುದ್ಧದ ಸಮಯದಲ್ಲಿ ಹೈದರಾಲಿ ಫ್ರೇಸರ್ ಪೇಟೆಯ ಮೂಲಕ ಸಾಗುವಾಗ ಅವನಿಗೆ ಅವನ ಕಡೆಯವರು ಒಂದು ಖುಷಿ ಸಮಾಚಾರ ತಿಳಿಸಿದರಂತೆ. ಅದಕ್ಕವನು ಅ ಸ್ಥಳವನ್ನು ಕುಶಾಲ ನಗರ ಎಂದು ಕರೆದ
ಬೆಳಗಾವಿ :
ಬೆಳಗಾವಿಯ ಮೂಲ ಹೆಸರು ವೇಣುಗ್ರಾಮ,ಹಲಸಿ. ಅತಿ ಹೆಚ್ಚು ಹಿತಕರವಾದ ವಾತಾವರಣವನ್ನು ಹೊಂದಿದ ಬೆಳಗಾವಿಯಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ ಬೆಳ್ಳಗೆ+ಆವಿ = ಬೆಳ್ಳಗಾವಿ  ಆಯಿತು.
ಶಿವಮೊಗ್ಗ :
ಮೂಲ ಹೆಸರು ಶಿವನ ಮುಖ, ಮುಂದೆ ಸಿಹಿ-ಮೊಗೆಯಾಗಿ ಕಡೆಗೆ ಶಿವಮೊಗ್ಗವಾಯಿತು. ಕರ್ನಾಟಕದ ಇತಿಹಾಸದಲ್ಲಿ ಶಿವಮೊಗ್ಗಕ್ಕೆ ಉನ್ನತ  ಸ್ಥಾನಮಾನ  ಕೊಡಲಾಗಿದೆ. ಮೌರ್ಯ ಸಾಮ್ರಾಜ್ಯವು ದಕ್ಷಿಣಕ್ಕೆ ಶಿವಮೊಗ್ಗದಲ್ಲಿ ಕೊನೆಗೊಳ್ಳುತ್ತಿತ್ತು. ಕರ್ನಾಟಕವನ್ನು ಆಳಿದ ಎಲ್ಲ ರಾಜಮನೆತನಗಳ ಆಡಳಿತಕ್ಕೆ ಶಿವಮೊಗ್ಗವು ಒಳಪಟ್ಟಿತ್ತು.  ಕನ್ನಡದ ಮೊದಲ ರಾಜವಂಶ ಕದಂಬರ ಮೂಲ ಪುರುಷ ಮಯೂರನ ಜನ್ಮ ಸ್ಥಳ ಶಿವಮೊಗ್ಗದ ತಾಳಗುಪ್ಪ. 
ಮಂಗಳೂರು :
ಮೂಲ ಹೆಸರು ಮಂಗಳಾಪುರ, ಮಂಗಳಾ ದೇವಿಯ ದೇವಸ್ಥಾನವಿದ್ದುದರಿಂದ ಮಂಗಳೂರು ಹೆಸರು ಬಂದಿತು.  ತುಳುವಿನಲ್ಲಿ ಮಂಗಳೂರಿಗೆ “ಕುಡ್ಲ”, ಬ್ಯಾರಿಯಲ್ಲಿ “ಮೈಕಾಲ” ಕೊಂಕಣಿಯಲ್ಲಿ “ಕೊಡಿಯಾಲ್” ಮತ್ತು  ಮಲೆಯಾಳದಲ್ಲಿ “ಮಂಗಳಾ ಪುರಂ” ಎಂದು ಕರೆಯುತ್ತಾರೆ. 
ಶೃಂಗೇರಿ :
ಮೂಲ ಹೆಸರು ಋಷ್ಯಶೃಂಗಗಿರಿ, ಶೃಂಗಗಿರಿ ಬೆಟ್ಟದ ಹೆಸರಿನಿಂದ ಶೃಂಗೇರಿ ಹೆಸರು ಪಡೆದುಕೊಂಡಿತು. ಶೃಂಗೇರಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಕ್ಷೇತ್ರ .
ಕುಂದಾಪುರ :
ಕುಂದವರ್ಮ ರಾಜನು  ಆಳಿದ್ದರಿಂದ, ಕುಂದವನ್ನು(ಮಲ್ಲಿಗೆ ಹೂವು) ಹೆಚ್ಚಾಗಿ ಬೆಳೆಯುವುದರಿಂದ ಹಾಗು ಕುಂದವರ್ಮ ರಾಜನು ಕಟ್ಟಿಸಿದ  ಕುಂದೇಶ್ವರ ದೇವಸ್ಥಾನದಿಂದ ಕುಂದಾಪುರ: ಹೆಸರು ಬಂದಿದೆ   
ಬೈಂದೂರು :
ಮೂಲ ಹೆಸರು ಬಿಂದುನಾಡು, ಬಿಂದುಪುರ, ಬಿಂದೂರು. ಬಿಂದು ಮಹರ್ಷಿಗಳು ಈ ಪ್ರದೇಶದಲ್ಲಿ  ತಪಸ್ಸು ಮಾಡುತ್ತಿದ್ದರಿಂದ ಬೈಂದೂರು ಹೆಸರು ಬಂತು.
ಬೀದರ್ :
ಮೂಲ ಹೆಸರು ಮೊಹಮ್ಮದಾಬಾದ್, ಪರ್ಶಿಯಾ ದೇಶದಿಂದ ಬಂದ ಬಿದರಿ ಕುಸುರಿ ಕಲೆಯಿಂದ ಬೀದರ್ ತನ್ನ  ಹೆಸರು ಪಡೆಯಿತು. 
ಮೈಸೂರು :
ಮೂಲ ಹೆಸರು ಮಹಿಷಪುರಿ, ಚಾಮುಂಡೇಶ್ವರಿ ದೇವತೆಯು ಮಹಿಶಾಸುರನ ಮರ್ಧನ ಮಾಡಿ,ಬೆಟ್ಟದಲ್ಲಿ ನೆಲಸುತ್ತಾಳೆ. ಮುಂದೆ ಅ ಸ್ಥಳಕ್ಕೆ ಮಹಿಷಪುರಿ, ಮಹಿ‍‌ಷೂರು, ಮಹಿಸೂರಾಗಿ ಕಡೆಗೆ ಮೈಸೂರು ಆಗಿದೆ.      
ಕೊಡಗು :
ಕೊಡಗು ಜಿಲ್ಲೆಯ ತುಂಬಾ ಹಾವು ಹರಿದಾಡಿದಂತಿರುವ ರಸ್ತೆಗಳು, ಬೆಟ್ಟ ಗುಡ್ಡಗಳ ಮೇಲೆ ನಿಂತಿರುವ ಊರುಗಳು.  ಕೊಡಗು, ಕುಡು ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬರ್ಥ, ಮುಂದೆ ಕೊಡಗು ಆಗಿ ಮಾರ್ಪಟ್ಟಿದೆ. 
ಬಾಗಲಕೋಟೆ :
ಮೂಲ ಹೆಸರು ಬಾಗಡಿಗೆ, ಬಿಜಾಪುರದ ರಾಜನು ತನ್ನ ಮಗಳಿಗೆ ಕಂಕಣ ಕಾಣಿಕೆಯಾಗಿ “ಬಾಗಡಿಗೆ” ಪಟ್ಟಣವನ್ನು ಕೊಟ್ಟನು.ಮುಂದೆ ಅದು ಬಾಗಡಿಕೋಟೆಯಾಗಿ ನಂತರ ಬಾಗಲಕೋಟೆಯಾಯಿತು. 
ಚಾಮರಾಜನಗರ :
ಜಯಚಾಮರಾಜ ಒಡೆಯರ್ ಅವರ ನೆನಪಿಗಾಗಿ ಹೆಸರಿಟ್ಟ ಊರು.
ಕೊಳ್ಳೇಗಾಲ :
“ಕೌಹಳ” ಮತ್ತು “ಗಾಳವ” ಇಬ್ಬರು ಋಷಿಗಳು ಕೊಳ್ಳೇಗಾಲವನ್ನು ಕಟ್ಟಿದರು. ಇದರಿಂದ ಕೊಳ್ಳೇಗಾಲವೆಂದು ಕರೆಯಲ್ಪಟ್ಟಿತು. 
ಧರ್ಮಸ್ಥಳ :
ಮೂಲ ಹೆಸರು “ಕುಡುಮ”.ಧರ್ಮದೇವತೆಗಳು ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಅಮ್ಮು ಬಲ್ಲಾಳ್ತಿ ಅವರ ಕನಸಿನಲ್ಲಿ ಬಂದು ಅವರ ನಿವಾಸದಲ್ಲಿ ನೆಲೆಸಲು ಇಚ್ಛೆ ವ್ಯಕ್ತಪಡಿಸಿದರು.ಬಿರ್ಮಣ್ಣ ಪೆರ್ಗಡೆರವರು ಮನೆಯನ್ನು ದೇವರಿಗೆ ಬಿಟ್ಟುಕೊಟ್ಟರು. ದೇವರ ಆಜ್ಞೆಯಂತೆ ಬಿರ್ಮಣ್ಣರು ಗುಡಿ ಕಟ್ಟಿಸಿದರು.ಅರ್ಚಕರು ಈಶ್ವರ ಲಿಂಗವನ್ನು  ಪ್ರತಿಷ್ಟಾಪಿಸಲು ಸೂಚಿಸಿದರು.ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇದೆ.
ಉಡುಪಿ : 
ಉಡುಪಿ ತುಳುವಿನ ಹೆಸರು “ಒಡಿಪು”ವಿನಿಂದ ಬಂದಿದೆ,ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿದೆಯೆಂದು ನಂಬಲಾಗಿದೆ.  
ವಿಜಾಪುರ , ಬಿಜಾಪುರ :
ಮೂಲ ಹೆಸರು ವಿಜಯಪುರ, ಬಿಜ್ಜನ ಹಳ್ಳಿ ಮುಂದೆ ವಿಜಾಪುರ/ಬಿಜಾಪುರ ಆಯಿತು. 
ಹಾಸನ :
ಮೂಲ ಹೆಸರು ಸಿಂಹಾಸನಪುರ, ಹಾಗು ಹಾಸನಾಂಬ ದೇವಾಲಯವಿದ್ದುದರಿಂದ ಮುಂದೆ ಹಾಸನವಾಯಿತು. 
ಮಡಿಕೇರಿ :
ಮೂಲ ಹೆಸರು ಮುದ್ದುರಾಜನ ಕೇರಿ, ಮುಂದೆ ಮಡಿಕೇರಿಯಾಯಿತು. 
ದಾವಣಗೆರೆ :
ಮೂಲ  ಹೆಸರು “ದವನಗಿರಿ” ಕ್ರಮೇಣ ದಾವಣಗೆರೆ ಆಯಿತು.
ಗದಗ :
ಮೂಲ ಹೆಸರು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು,ಗದುಗು ಮತ್ತು ಈಗ ಗದಗ
ಗುಲ್ಬರ್ಗ :
ಮೂಲ ಹೆಸರು ಕಲ್ಬುರ್ಗಿ.
ಕೋಲಾರ :
ಮೂಲ ಹೆಸರು ಕುವಲಾಲಪುರ.   
ಕೊಪ್ಪಳ :
ಮೂಲ ಹೆಸರು ಕೋಪಣ ನಗರ,ಇದರ ಬಗ್ಗೆ ಕವಿರಾಜ ಮಾರ್ಗದಲ್ಲಿ ಉಲ್ಲೇಖವಿದೆ.
ಮಂಡ್ಯ :
ಮಾಂಡವ್ಯ ಋಷಿಯಿಂದ ಮಂಡ್ಯ ಹೆಸರು ಬಂದಿತು. 
ತೀರ್ಥಹಳ್ಳಿ :
ತುಂಗಾ ನದಿಯಲ್ಲಿ ಪರಶುರಾಮರು ಕೊಡಲಿಯನ್ನು ತೊಳೆದ ಕಾರಣ ಈ ಸ್ಥಳಕ್ಕೆ ‘ತೀರ್ಥ’ಹಳ್ಳಿ ಎಂಬ ಹೆಸರು ಬಂತು ಎನ್ನುವ ಪ್ರತೀತಿ. 
ಬಾದಾಮಿ :
ಮೂಲ ಹೆಸರು ವಾತಾಪಿ, ಮುಂದೆ ಬಾದಾಮಿ ಆಯಿತು. 
ಹಳೇಬೀಡು :
ಮೂಲ ಹೆಸರು ದ್ವಾರ ಸಮುದ್ರ, ರಾಷ್ಟ್ರಕೂಟರ ದೊರೆ ದೋರನು ೧೨೦೦ ಎಕರೆಗೂ ದೊಡ್ಡದಾದ ಕೆರೆ ಕಟ್ಟಿಸಿ, ಕೆರೆಗೆ ಯಗಚಿ ನೀರನ್ನು ನೀರುಣಿಸುತ್ತಿದ್ದನು. ಕೆರೆ ತುಂಬಿದಾಗ ಅದು ಸಮುದ್ರದಂತೆ ಗೋಚರಿಸುತ್ತಿತ್ತು.  ಅದೇ ಮುಂದೆ ದೋರ ಸಮುದ್ರ, ದ್ವಾರ ಸಮುದ್ರ, ಹಳೇಬೀಡು ಆಯಿತು.   
ಬ್ರಹ್ಮಾವರ :
ಈ ನಗರವನ್ನು ರಾಜರು ಬ್ರಾಹ್ಮಣರಿಗೆ ಉಡುಗರೆಯಾಗಿ ಕೊಟ್ಟಿದ್ದರಿಂದ  ಬ್ರಹ್ಮಾವರವೆಂಬ ಹೆಸರು ಪಡೆಯಿತು. 
ಮೂಡುಬಿದಿರೆ :
ಮೂಲ ಹೆಸರು ವೇಣುಪುರ, ಹಿಂದೆ ಈ ನಗರದಲ್ಲಿ ಬಿದಿರು ಹೆಚ್ಚಾಗಿ ಪೂರ್ವ ದಿಕ್ಕಿಗೆ ಬೆಳೆಯುತ್ತಿತ್ತು. ಅದರಿಂದ    
ಮೂಡುಬಿದಿರೆ ಹೆಸರು ಬಂತು.
ಶಿಕಾರಿಪುರ :
ಟಿಪ್ಪುವು ಶಿಕಾರಿಗೆ ಆಯ್ಕೆ ಮಾಡಿಕೊಂಡ ಪ್ರದೇಶವಿದು.ಹೀಗಾಗಿ ಶಿಕಾರಿಪುರವೆಂಬ ಹೆಸರು ಬಂತು 
ಶ್ರೀರಂಗಪಟ್ಟಣ :
ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನವಿದ್ದುದರಿಂದ ಮುಂದೆ ಶ್ರೀರಂಗಪಟ್ಟಣ ಆಯಿತು
ಬೇಲೂರು :
ಮೂಲ ಹೆಸರು ವೇಲಾಪುರಿ ಮುಂದೆ ಬೇಲೂರು ಆಯಿತು.
ಹಂಪೆ :
ಮೂಲ ಹೆಸರು ಪಂಪ, ಪಂಪ ಎಂದರೆ  ತುಂಗಾ ಭದ್ರೆ ಎಂದು.ವಿದ್ಯಾರಣ್ಯ ಗುರುಗಳು ಇಲ್ಲಿ
ವಿಜಯನಗರವನ್ನು ಸಾಮ್ರಾಜ್ಯವನ್ನು ಸ್ಥಾಪಿಸಿದರು.ಮುಂದೆ  ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’  ಕಡೆಗೆ ಹಂಪೆಯಾಯಿತು.
    
ಹುಬ್ಬಳ್ಳಿ  :
ಮೂಲ ಹೆಸರು ಪುರ್ಬಲ್ಲಿ, ಪುರ್ಬಲ್ಲಿ ಅಂದರೆ ಹೂಬಿಡುವ ಬಳ್ಳಿ. ಮುಂದೆ ಹುಬ್ಬಳ್ಳಿ ಆಯಿತು.  
ಹೀಗೆ ಇನ್ನು ಹಲವಾರು ಊರುಗಳ ಹೆಸರಿನ ಹಿಂದೆ ದೊಡ್ಡ ವೃತ್ತಾಂತವು ಅಡಗಿದೆ. ನಿಮ್ಮ ಊರಿನ  ಹೆಸರಿನ ಹಿಂದೆ ಇದೇ ರೀತಿಯ ಇತಿಹಾಸವಿದ್ದಲ್ಲಿ ದಯವಿಟ್ಟು ತಿಳಿಸಿ, ಈ ಪಟ್ಟಿಯನ್ನು ಬೆಳೆಸೋಣ ಹಾಗು ಮೇಲ್ಕಂಡ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದರೆ ತಿಳಿಸಿ.