ಜ್ಞಾನಪೀಠ ಪುರಸ್ಕೃತ ಕನ್ನಡಿಗರು

ವಿಶ್ವದಲ್ಲಿ ಅತ್ಯುನ್ನತ ಪುರಸ್ಕಾರ ನೋಬೆಲ್ ಪ್ರಶಸ್ತಿಯಾದರೆ, ಭಾರತದಲ್ಲಿ ನೋಬೆಲ್ ಪುರಸ್ಕಾರದಷ್ಟೆ ಉನ್ನತ ಸ್ಥಾನದಲ್ಲಿರುವುದು ‘ಜ್ಞಾನಪೀಠ ಪ್ರಶಸ್ತಿ’. ಭಾರತ ಸರ್ಕಾರವು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅತ್ಯುತ್ಕೃಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತ ರಾಷ್ಟ್ರ ಭಾಷೆ ಹಿಂದಿ ಮತ್ತು ಉಳಿದ ಭಾಷೆಗಳಾದ ಕನ್ನಡ, ತಮಿಳು ತೆಲುಗು, ಮಲಯಾಳಂ, ಮರಾಠಿ, ಬಂಗಾಳಿ, ಅಸ್ಸಾಮಿ, ಗುಜರಾತಿ, ರಾಜಸ್ಥಾನಿ, ಕಾಶ್ಮೀರಿ, ಉರ್ದು, ಸಂಸ್ಕೃತ, ಪಂಜಾಬಿ ಇತ್ಯಾದಿ ಹದಿನೆಂಟು ಭಾಷೆಗಳಲ್ಲಿ ರಚಿತವಾಗಿರುವ ಅಮೂಲ್ಯ ಕೃತಿಗಳು ‘ಜ್ಞಾನಪೀಠ ಪ್ರಶಸ್ತಿ’ಗೆ ಆರ್ಹತೆಯನ್ನು ಪಡೆಯುತ್ತದೆ.
“ಜ್ಞಾನಪೀಠ ಸಂಸ್ಥೆ”
ಭಾರತೀಯ ಜ್ಞಾನಪೀಠ ಸಂಸ್ಥೆಯಾಗಿ ಸ್ಥಾಪನೆಯಾಗಿದ್ದು 1944 ರಲ್ಲಿ. ಅದೇ ವರ್ಷ ಫೆಬ್ರವರಿ 18 ರಂದು ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ, ಭಾರತೀಯ ಭಾಷೆಗಳಲ್ಲಿ ಉತ್ಕೃಷ್ಟ ಕೃತಿ ರಚನೆ ಮಾಡಿದ ಸಾಹಿತಿಯನ್ನು ಗುರುತಿಸುವ ಉದ್ಧೇಶದಿಂದ ‘ಜ್ಞಾನಪೀಠ’ ಎಂಬ ಹೆಸರಿನಿಂದ ಸಂಸ್ಥೆ ಕಾರ್ಯಾರಂಭ ಮಾಡಿ ಉತ್ಕೃಷ್ಟ ಕೃತಿಗಳನ್ನು ಪ್ರಕಟಿಸುವ ಮೂಲಕ ಭಾರತೀಯ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಲಾಯಿತು.
“ಜ್ಞಾನ ಪೀಠ” ಸ್ಥಾಪಕರು
ಶ್ರೀ ಶಾಂತಿ ಪ್ರಸಾದ್ ಜೈನ್
ಆಲ್ಫ್ರೆಡ್ ಬೆರ್ನಾರ್ಡ್ ನೋಬೆಲ್ ಪ್ರಶಸ್ತಿಯ ಜನಕನಾದರೆ, ಭಾರತದ ಪ್ರಖ್ಯಾತ ಕೈಗಾರಿಕೋಧ್ಯಮಿ ಶ್ರೀ ಶಾಂತಿ ಪ್ರಸಾದ್ ಜೈನ್ ‘ಜ್ಞಾನಪೀಠ ಪ್ರಶಸ್ತಿ’ ಯ ಸ್ಥಾಪಕರಾಗಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ರಮಾಜೈನ್ ಜ್ಞಾನಪೀಠ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಭಾರತೀಯ ಭಾಷೆಗಳಲ್ಲಿ ರಚಿತವಾಗಿರುವ ಅತ್ಯುತ್ಕೃಷ್ಟ ಕೃತಿಗಳಿಗೆ ಸಲ್ಲಿಸ ಬೇಕಾದ ಗೌರವ ‘ಜ್ಞಾನಪೀಠ’ ಪ್ರಶಸ್ತಿ ನೀಡುವುದನ್ನು 1965 ರಿಂದ ಪ್ರಾರಂಭಿಸಲಾಯಿತು.
ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ
ಭಾರತದ ಅಂದಿನ ರಾಷ್ಟಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ರವರ ಘನ ಅಧ್ಯಕ್ಷತೆಯಲ್ಲಿ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ಮಲಯಾಳಂ ಭಾಷೆಯ ಕೃತಿ ರಚನೆಕಾರ ಶ್ರೇಷ್ಟ ಸಾಹಿತಿ ಗೋವಿಂದ ಕುರೂಪ್ ರವರಿಗೆ ನೀಡಿ ಗೌರವಿಸಲಾಯಿತು. ಶಾರದ ದೇವಿಯ ಆಕರ್ಷಕ ವಿಗ್ರಹ, ಶಾಲು, ಫಲತಾಂಬೂಲ, ಪ್ರಶಸ್ತಿ ಪತ್ರ ಮತ್ತು ಒಂದೂವರೆ ಲಕ್ಷ ನಗದು ರೂಪಾಯಿಯನ್ನು ನೀಡಲಾಗುತಿದ್ದು ನಂತರ ನಗದು ಗೌರವ ಧನವನ್ನು ಐದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿತ್ತು, ಪ್ರಸ್ತುತ ಏಳು ಲಕ್ಷ ರೂಪಾಯಿ ನೀಡಲಾಗುತಿದೆ.
“ಜ್ಞಾನಪೀಠ” ಪುರಸ್ಕಾರಕ್ಕೆ ಕೃತಿಗಳ ಆಯ್ಕೆ
ಭಾರತೀಯ ಹದಿನೆಂಟು ಭಾಷೆಗಳಲ್ಲಿ ರಚಿತವಾದ ಅಮೂಲ್ಯ ಕೃತಿಗಳನ್ನು ಆಯ್ಕೆ ಮಾಡುವಾಗ, ಆಯ್ಕೆ ಸಮಿತಿಯವರು ವಿದ್ಯುನ್ಮಣಿಗಳಾಗಿರುತ್ತಾರೆ. ಪುರಸ್ಕಾರಕ್ಕೆ ಆಯ್ಕೆಯಾಗುವವರು ಪ್ರತಿಭಾನ್ವಿತ, ಪ್ರತಿಷ್ಠಿತ ಹಾಗೂ ಶೃಜನಶೀಲ ಸಾಹಿತಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ವಿಧಾನಗಳಲ್ಲಿ ಸಾಹಿತ್ಯ ಕೃಷಿಮಾಡಿ ಯಶಸ್ವಿಯಾಗಿರಬೇಕು. ಹದಿನೆಂಟು ಭಾಷೆಗಳಲ್ಲಿ ಅತ್ಯುನ್ನತ ಸ್ಥಾನ ಅಭಿಸಿದರೆ ಮಾತ್ರ ‘ಜ್ಞಾನಪೀಠ ಪ್ರಶಸ್ತಿ’ಗೆ ಕೃತಿ ಕರ್ತ ಆಯ್ಕೆಯಾಗುತ್ತಾರೆ. ‘ಜ್ಞಾನಪೀಠ ಪ್ರಶಸ್ತಿ’ ಪಡೆಯುವಾಗ ಸಾಹಿತಿಯ ಜೊತೆಗೆ ರಚಿತವಾದ ಭಾಷೆ ಮತ್ತು ಆತನ ಪ್ರಾಂತ್ಯಕ್ಕೆ ಗೌರವ ಸಲ್ಲುತ್ತದೆ.
ಜ್ಞಾನಪೀಠ ಪ್ರಶಸ್ತಿಯ ನಿಯಮಗಳು
* ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವವನು ಭಾರತೀಯನೇ ಆಗಿರಬೇಕು.
* ಆತನು ತನಗೆ ಸಂಬಂಧಿಸಿದ ಭಾಷೆಯ ಬಗ್ಗೆ ಸಾಕಷ್ಟು ಪಾಂಡಿತ್ಯವನ್ನು, ಪರಿಣಿತಿಯನ್ನು ಪಡೆದಿರಬೇಕು.
* ಪ್ರಶಸ್ತಿ ನೀಡುವ ಸಮಯದಲ್ಲಿ ಆತನು ಜೀವಂತನಾಗಿರಬೇಕು.
* ಒಂದು ಬಾರಿ ಪ್ರಶಸ್ತಿ ಪಡೆದ ಪುರಸ್ಕೃತನಿಗೆ ಯಾವುದೇ ಕಾರಣಗಳಿಂದ ಮತ್ತೊಮ್ಮೆ ಪ್ರಶಸ್ತಿ ನೀಡಲಾಗದು.
* ಒಂದು ಬಾರಿ ಯಾವುದಾದ್ರೂ ಒಂದು ಭಾಷೆಗೆ ಪ್ರಶಸ್ತಿ ಬಂದರೆ ನಂತರ ಮೂರು ವರ್ಷಗಳ ಕಾಲ ಆದೇ ಭಾಷೆಯ ಯಾವ ಸಾಹಿತಿಗೂ ಪುರಸ್ಕಾರ ಲಭ್ಯವಾಗದು.
ಭಾರತದಲ್ಲಿ ಇಲ್ಲಿಯವರೆಗೆ ಹದಿನೆಂಟು ಭಾಷೆಗಳಲ್ಲಿ ನೀಡಲಾದ ಜ್ಞಾನಪೀಠ ಪ್ರಶಸ್ತಿಗಳಲ್ಲಿ ಹಿಂದಿ ಭಾಷೆಯ ನಂತರ ಅತೀ ಹೆಚ್ಚು ಪ್ರಶಸ್ತಿ ಕನ್ನಡ ಭಾಷೆಗೆ ಲಭ್ಯವಾಗಿದ್ದು, ಕನ್ನಡದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದಿದೆ.
ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುಸ್ಕೃತರಿವರು.
ಕುವೆಂಪು
image
ಕನ್ನಡಕ್ಕೆ ಮೊಟ್ಟಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕೆ.ವಿ. ಪುಟ್ಟಪ್ಪನವರು. ಇವರು ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರು ೧೯೦೪ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ಇವರ ತಂದೆ ವೆಂಕಟಪ್ಪಗೌಡರು, ತಾಯಿ ಸೀತಮ್ಮ.
೧೯೨೪ರಲ್ಲಿ ಅವರ ಮೊದಲ ಕನ್ನಡ ಪುಸ್ತಕ ‘ಅಮಲನ ಕತೆ’ ಪ್ರಕಟವಾಯಿತು. ಕುವೆಂಪುರವರು ಬಿ.ಎ. ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ ಕವನವನ್ನು ಪ್ರಕಟಿಸಿದರು. ಜಲಗಾರ,
ಸ್ಮಶಾನಕುರುಕ್ಷೇತ್ರ, ಶೂದ್ರತಪಸ್ವಿ, ಬೆರಳ್‍ಗೆ ಕೊರಳ್, ಅವರು ರಚಿಸಿದ ಜನಪ್ರಿಯ ನಾಟಕಗಳು. ಪಾಂಚಜನ್ಯ, ಪಕ್ಷಿಕಾಶಿ, ನವಿಲು, ಮುಂತಾದುವುಗಳು ಅವರ ಕವನ ಸಂಕಲನಗಳು. ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಎರಡು ಕಾದಂಬರಿಗಳನ್ನೂ ಸಹ ರಚಿಸಿದ್ದಾರೆ. ‘ನೆನಪಿನ ದೋಣಿ’ ಇವರ ಆತ್ಮಕಥೆ.
೧೯೨೯ರಲ್ಲಿ ಕನ್ನಡ ಅಧ್ಯಾಪಕರಾಗಿ ಮಹಾರಾಜ ಕಾಲೇಜು ಸೇರಿದ ಶ್ರೀಯುತರು, ೧೯೬೦ ರವರೆಗೆ ಸೇವೆ ಸಲ್ಲಿಸಿದರು. ೧೯೫೬ ರಿಂದ ೧೯೬೦ ರವರೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು. ಇವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಮಾನಸ ಗಂಗೋತ್ರಿಯ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ, ಎಲ್ಲಾ ಸಾಹಿತ್ಯ ಅಭಿಮಾನಿಗಳಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಕನ್ನಡ ಪುಸ್ತಕಗಳು ದೊರಕುವಂತೆ ಶ್ರಮಿಸಿದರು.
ಕುವೆಂಪುರವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅವುಗಳು ಮೈಸೂರು, ಬೆಂಗಳೂರು, ಕರ್ನಾಟಕ, ಗುಲ್ಬರ್ಗ, ಕಾನ್ಪುರ ಮತ್ತು ಅಮೇರಿಕಾದ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಕಲ್ಚರ್ ಈ ಸಂಸ್ಥೆಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿ ಗೌರವಿಸಿವೆ. ೧೯೫೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೫೮ರಲ್ಲಿ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ, ೧೯೯೨ರಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ೧೯೬೪ರಲ್ಲಿ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿತು. ೧೯೭೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಸಹ ದೊರೆಯಿತು. ೧೯೮೮ರಲ್ಲಿ ಪಂಪ ಪ್ರಶಸ್ತಿ, ೧೯೬೮ರಲ್ಲಿ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆಜ್ಞಾನಪೀಠ ಪ್ರಶಸ್ತಿ ದೊರಕಿತು.
ಕರ್ನಾಟಕ ಸರಕಾರವು ಶಿವಮೊಗ್ಗದಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾಲಯಕ್ಕೆ ಇವರ ಹೆಸರನ್ನು ಇಟ್ಟು ಗೌರವ ಸೂಚಿಸಿರುತ್ತದೆ. ಶ್ರೀಯುತರು ೧೯೯೪ ನವೆಂಬರ್ ೯ರಂದು ದೈವಾಧೀನರಾದರು.
ದಾ.ರಾ. ಬೇಂದ್ರೆ.
image
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. ಅಂಬಿಕೆಯ ತನಯ ತಾನು ದತ್ತ ಎಂಬ ಅರ್ಥದಲ್ಲಿ ಬೇಂದ್ರೆಯವರು ದ.ರಾ. ಬೇಂದ್ರೆ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. ಧಾರವಾಡ ಹಾಗೂ ಸಾಧನಕೇರಿಯ ಪ್ರದೇಶವನ್ನು ನೆಲೆಯಾಗಿಸಿ ಅವರು ಸಾಹಿತ್ಯ ಕೃಷಿ ನಡೆಸಿದರು.
ಧಾರವಾಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬೇಂದ್ರೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಪದವಿ ಪೂರೈಸಿದರು. ಕರ್ನಾಟಕದ ಗದುಗಿನಲ್ಲಿ ಕೆಲಕಾಲ ಮುಖ್ಯಾಧ್ಯಾಪಕರಾಗಿದ್ದರು. ಬಳಿಕ ಎಂ.ಎ. ಪದವಿ ಪಡೆದು ಧಾರವಾಡದ ವಿಕ್ಟೋರಿಯ
ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೇ ಸಂದರ್ಭದಲ್ಲಿ ಗೆಳೆಯರ ಬಳಗ ಎಂಬ ಸಾಹಿತ್ಯ ರಸಿಕರ ಕೂಟವನ್ನು ರಚಿಸಿದರು.
ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸೂರ್ಯಪಾನ, ಮೂರ್ತಿಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು. ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.
ಬೇಂದ್ರೆಯವರಿಗೆ ಕಾಶಿಹಿಂದೂ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್, ‘ನಾಕುತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿಯ (೧೯೭೪) ಮೂಲಕ ಸಾಹಿತ್ಯ ಕ್ಷೇತ್ರದ ಸರ್ವೋಚ್ಛ ನೆಲೆಯಲ್ಲಿ ಗುರುತಿಸಿಕೊಂಡ ಬೇಂದ್ರೆಯವರು 1981ರಲ್ಲಿ ಇಹಲೋಕ ಯಾತ್ರೆ ಮುಗಿಸಿದರು.
ಶಿವರಾಂ ಕಾರಂತ
image
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದ್ದ ಶಿವರಾಮ ಕಾರಂತರು, ಪ್ರೌಢಶಿಕ್ಷಣವನ್ನಷ್ಟೇ ಪಡೆದಿದ್ದರು. ಆದರೆ ಗಾಂಧಿ ತತ್ವಕ್ಕೆ ಮಾರುಹೋಗಿ ಹೋರಾಟಕ್ಕೆ ಧುಮುಕಿ, ನಂತರ ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ-ಸಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು.
ಕೇವಲ 5 ದಿನಗಳಲ್ಲಿ ಬರೆದಿರುವ ಚೋಮನ ದುಡಿ, 30 ದಿನಗಳಲ್ಲಿ ಬರೆದು ಮುಗಿಸಿರುವ ಮರಳಿ ಮಣ್ಣಿಗೆ, ಜ್ಞಾನಪೀಠ ಪ್ರಶಸ್ತಿ (೧೯೭೭) ತಂದುಕೊಟ್ಟ ‘ಮೂಕಜ್ಜಿ ಕನಸುಗಳು’, ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ್ ರಾವ್ ಬದುಕಿನ ಚಿತ್ರಣದ ಔದಾರ್ಯದ ಉರುಳಲ್ಲಿ, ಹುಚ್ಚು ಮನಸ್ಸಿನ ಹತ್ತುಮುಖಗಳು, ಸನ್ಯಾಸಿಯ ಬದುಕು ಹೀಗೆ 44 ಕಾದಂಬರಿ, 16 ನಾಟಕ, 3 ಕಥಾ ಸಂಕಲನ, ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, 6 ಪ್ರಬಂಧ, 5 ಆತ್ಮಕಥೆ, 240 ಮಕ್ಕಳ ಪುಸ್ತಕ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತರೂಪಕ ಸೇರಿದಂತೆ ಹಲವಾರು ಸಾಹಿತ್ಯಗಳಲ್ಲಿ ಕೈಯಾಡಿಸಿರುವ ಅವರು ಸಾರಸ್ವತ ಲೋಕದ ಅಗ್ರಗಣ್ಯ ಬರಹಗಾರರಾಗಿದ್ದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
image
ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲೊಬ್ಬರಾದ ‘ಸಣ್ಣಕಥೆಗಳ ಜನಕ’ ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದರು.
ಮೈಸೂರು ಮಹಾರಾಜರ ಕಾಲದಲ್ಲಿ ಅಧಿಕಾರದಲ್ಲಿದ್ದು, ಭಾರತ ಸ್ವತಂತ್ರವಾದ ಬಳಿಕ ಸಾರ್ವಜನಿಕ ಆಡಳಿತ ಸೇವೆಯ ದಕ್ಷ ಅಧಿಕಾರಿಯಾಗಿದ್ದರು. ಸರ್ಕಾರಿ ಸೇವೆಯಲ್ಲಿದ್ದರೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಜನಪ್ರಿಯತೆ ಗಳಿಸಿದ್ದರು.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಂತೂ ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ನುಡಿಗಟ್ಟಿಗೆ ಪಾತ್ರರಾಗಿದ್ದರು.
ಮೈಸೂರು ಮಹರಾಜರ ಕಾಲದಲ್ಲಿ ಆ ಸಂಸ್ಥಾದ ಆಡಳಿತ ಸೇವೆಯಲ್ಲಿ ಸಹಾಯಕ ಆಯುಕ್ತರಾಗಿ, ಹಿರಿಯ ಅಧಿಕಾರಿಯಾಗಿದ್ದರು. ಇವರಿಗೆ ಮೈಸೂರು ಅರಸರು ‘ರಾಜಸೇವಾಸಕ್ತ’ ಎಂಬ ಬಿರುದನ್ನು ನೀಡಿದರು. ಬ್ರಿಟಿಷ ಆಳ್ವಿಕೆಯಲ್ಲಿದ್ದರೂ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತವಿರಬೇಕೆಂದು ಗುರುತಿಸಿದರು.
ಮಾಸ್ತಿಯವರ ಪ್ರಮುಖ ಕೃತಿಗಳಲ್ಲೊಂದು ‘ಚಿಕ್ಕ ವೀರ ರಾಜೇಂದ್ರ’ ಕಾದಂಬರಿ. ಇನ್ನೊಂದು ‘ಚೆನ್ನಬಸವ ನಾಯಕ’, ರಾಜವಂಶಗಳ ಉನ್ನತಿ ಅವನತಿಗಳು ಇವುಗಳ ಕಾಥಾವಸ್ತು. ಮಾಸ್ತಿಯವರ ಇತರ ಕೃತಿಗಳೆಂದರೆ ಶೇಷಮ್ಮ,ಸುಬ್ಬಣ್ಣ ಮುಂತಾದ ದೊಡ್ಡ ಕಥೆಗಳು. ಗೌಡರ ಮಲ್ಲಿ, ರಾಮನವಮಿ,ಮೂಕನ ಮಕ್ಕಳು, ಸುನೀತಾ,ಬಿನ್ನಹ, ತಾವರೆ ಮಲಾರ,ಚೆಲುವು,ಸಂಕ್ರಾಂತಿ, ಮಾನವ ಇತ್ಯಾದಿ ಕಾವ್ಯಪ್ರಕಾರದ ಕೃತಿಗಳು. ಇವರ ಮೊದಲ ಸಣ್ಣ ಕಥೆ ರಂಗನ ಮದುವೆ. ಆ ಬಳಿಕ 15 ರಷ್ಟು ಸಣ್ಣ ಕಥೆಗಳ ಸಂಕಲನ ಪ್ರಕಟಿಸಿದರು.
ಆಡಳಿತಾತ್ಮಕವಾಗಿಯೂ, ಸಾಹಿತ್ಯಕವಾಗಿ ಉತ್ತಮ ಸೇವೆ ನೀಡಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 1952ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದರು. 1983ರಲ್ಲಿ ‘ಚಿಕ್ಕವೀರ ರಾಜೇಂದ್ರ’ ಕೃತಿಗೆಜ್ಞಾನಪೀಠ ಪ್ರಶಸ್ತಿ ಪಡೆದರು. 1986ರಲ್ಲಿ ವಿಧಿವಶರಾದರು.
ವಿ.ಕೃ. ಗೋಕಾಕ್.
image
ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಡಾ.ವಿ.ಕೃ.ಗೋಕಾಕ್‌ ಒಬ್ಬರು. ಇವರು ಸಾಹಿತ್ಯ ಕ್ಷೇತ್ರದಲ್ಲಿಯಂತೆಯೇ ಭಾಷಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು. ವಿನಾಯಕ ಕೃಷ್ಣ ಗೋಕಾಕ್‌ ಅವರು ವಿ.ಕೃ.ಗೋಕಾಕ್‌ ಎಂದೇ ಸುಪರಿಚಿತರಾಗಿದ್ದರು.
ಕನ್ನಡ ಸಾಹಿತ್ಯ ಚಳುವಳಿಗಳಲ್ಲೊಂದಾದ ನವೋದಯ ಕಾಲದ ಸಾಹಿತ್ಯಕಾರರಲ್ಲಿ ಪ್ರಮುಖರಿವರು. ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಕಥೆಗಾರ ಮಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದವರು; ‘ವಿನಾಯಕ’ ಎಂಬ ಕಾವ್ಯ ನಾಮ ಹೊಂದಿದ್ದರು. ಶಿಕ್ಷಕ, ಆಡಳಿತಗಾರರಾಗಿ ವೃತ್ತಿ ಜೀವನ ನಡೆಸಿದವರು.
ಬಾಲ್ಯಕಾಲದಲ್ಲೇ ಇವರು ಗಳಗನಾಥರ ಕಾದಂಬರಿಗಳಿಂದ ಪ್ರಭಾವಿತರಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಇವರು ಧಾರವಾಡದ ಕರ್ನಟಕ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿದರು. ಇಂಗ್ಲಿಷ್‌ ಸಾಹಿತ್ಯದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಗೋಕಾಕರು, ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದವರು ಬಳಿಕ, ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ, ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ ಸ್ಟಡೀಸ್‌ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಸಾಹಿತ್ಯಸೇವೆಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಡಾ.ವಿ.ಕೃ.ಗೋಕಾಕರು ಸೇವೆ ಸಲ್ಲಿಸಿದ್ದರು. ರಾಜ್ಯ ಭಾಷಾ ನೀತಿಯನ್ನು ಕುರಿತು ಚರ್ಚಿಸಲು ರಚಿಸಲಾದ ಸಮಿತಿಯಲ್ಲಿ ನೇಮಕಗೊಂಡು ಕನ್ನಡಕ್ಕೆ ಅಗ್ರ ಸ್ಥಾನಮಾನ ನೀಡುವಲ್ಲಿ ಶ್ರಮಿಸಿದವರು. ಆ ಬಳಿಕದ ಕನ್ನಡಕ್ಕಾಗಿ ನಡೆದ ಹೋರಾಟ ಗೋಕಾಕ್‌ ಚಳುವಳಿ ಎಂದೇ ಹೆಸರು ಪಡೆಯಿತು.
ಡಾ.ವಿ.ಕೃ.ಗೋಕಾಕರಿಗೆ ಭಾರತದ ಶ್ರೇಷ್ಠತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (೧೯೯೦) ಲಭಿಸಲು ಕಾರಣವಾದ ಕೃತಿ ‘ಭಾರತ ಸಿಂಧು ರಶ್ಮಿ’ ಎಂಬ ಮಹಾಕಾವ್ಯ. ಈ ಮಹಾಕಾವ್ಯವು ಎರಡು ಸಂಪುಟಗಳಲ್ಲಿದ್ದು, 12 ಖಂಡಗಳನ್ನು ಹೊಂದಿದೆ.
ನವೋದಯದ ಕನಸುಗಾರರಾಗಿದ್ದ ಡಾ.ವಿ.ಕೃ.ಗೋಕಾಕ್‌ ದೇಶದ ಪದ್ಮಪ್ರಶಸ್ತಿ ಪಡೆದವರು. ಸಾಹಿತ್ಯಿಕವಾಗಿ ಸಾಮಾಜಿಕವಾಗಿ ಸಮೃದ್ಧ ಜೀವನವನ್ನು ಕಂಡಿದ್ದ ವಿ.ಕೃ.ಗೋಕಾಕರು 1992ರಲ್ಲಿ ವಿಧಿವಶರಾದರು.
ಯು.ಅರ್. ಅನಂತ ಮೂರ್ತಿ
image
ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಡಾ. ಯು.ಆರ್. ಅನಂತಮೂರ್ತಿಯವರು. ಇವರು ೧೯೩೨ರ ಡಿಸೆಂಬರ್ ೨೧ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗೋಪಾಲಚಾರ್ಯ ಹಾಗೂ ತಾಯಿ ಸತ್ಯಮ್ಮ(ಸತ್ಯಭಾಮ).
ಇವರ ದೂರ್ವಾಸಪುರದ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ೧೯೬೬ರಲ್ಲಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ
ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪಡೆದರು. ೧೯೭೦ ರಿಂದ ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ೧೯೮೨ರಲ್ಲಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ೧೯೯೨-೯೩ ನೇ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು.
ಅನಂತಮೂರ್ತಿಯವರು ಸಣ್ಣಕತೆಗಾರರಾಗಿ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ೧೯೫೫ರಲ್ಲಿ ‘ಎಂದೆಂದೂ ಮುಗಿಯದ ಕತೆ’ ಎಂಬ ಕಥಾಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಐದು ದಶಕಗಳ ಕಥೆಗಳು(ಸಮಗ್ರ) ಇವು ಇವರ ಕಥಾಸಂಕಲನಗಳು. ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ, ಇವರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಪೂಜೆ ಯಾಕೆ ಕೂಡದು, ಇವುಗಳು ವಿಮರ್ಶೆಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇವರ ಕವನಸಂಕಲನಗಳು. ಶ್ರೀಯುತರು ‘ಆವಾಹನೆ’ ಎಂಬ ನಾಟಕವನ್ನು ರಚಿಸಿದ್ದಾರೆ.
ಇವರಿಗೆ ಬಂದಿರುವ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೮೩ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೮೮ರಲ್ಲಿ ಉಡುಪಿಯ ಫಲಿಮಾರು ಮಠದ ಶ್ರೀವಿಭುದೇಶತೀರ್ಥರಿಂದ ಸಮಾಜ ಭೂಷಣ ಪ್ರಶಸ್ತಿ, ೧೯೯೦ರಲ್ಲಿ ಹಾರ್ಮೋನಿ ಪ್ರಶಸ್ತಿ,
೧೯೯೪ರಲ್ಲಿ ಡಾ. ಮಾಸ್ತಿ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ೧೯೯೫ರಲ್ಲಿ ಕೊಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ
ಗಿರೀಶ್ ಕಾರ್ನಾಡ್
image
ಗಿರೀಶ್ ಕಾರ್ನಾಡರು ೧೯೩೮ರ ಮೇ ೧೯ರಂದು ಮಹಾರಾಷ್ಟ್ರದ ಮಾಥೆರ್ನ ಎಂಬಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕೃಷ್ಣ ಕಾರ್ನಾಡ್, ತಾಯಿ ಕೃಷ್ಣಾಬಾಯಿ.
ಗಿರೀಶರ ಆರಂಭದ ವಿದ್ಯಾಭ್ಯಾಸ ಉತ್ತರ ಕನ್ನಡ ಜಿಲ್ಲೆಯ ಸಿರಸಿಯಲ್ಲಿ ಆಯಿತು. ಮಾರಿಕಾಂಬ ಹೈಸ್ಕೂಲ್‍ನಲ್ಲಿ ಪ್ರೌಢಶಿಕ್ಷಣ ಪಡೆದು ಮುಂದೆ ಧಾರವಾಡಕ್ಕೆ ಹೋದರು. ಧಾರ್ವಾಡದಲ್ಲಿನ ಕರ್ನಾಟಕ ಕಾಲೇಜಿನಲ್ಲಿ ೧೯೫೮ರಲ್ಲಿ ಬಿ.ಎ. ಪದವೀಧರರಾದರು. ನಂತರ ಮುಂಬಯಿಯಲ್ಲಿ ಎಂ.ಎ. ಓದುತ್ತಿದ್ದಾಗ್ ರೋಡ್ಸ್ ವಿದ್ಯಾರ್ಥಿ ವೇತನ ದೊರೆತು ಇಂಗ್ಲೆಂಡಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಿದರು. ಅಲ್ಲಿ ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿಯ ಅಧ್ಯಕ್ಷರಾದರು.
ಇಂಗ್ಲೆಂಡಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ಮದರಾಸಿನ ಶಾಖೆಯಲ್ಲಿ ೧೯೬೩ರಿಂದ ೧೯೭೦ರವರೆಗೆ ಉಪವ್ಯವಸ್ಥಾಪಕರಾಗಿ ಆಮೇಲೆ ವ್ಯವಸ್ಥಾಪಕರಾಗಿ ಶ್ರಮಿಸಿದರು. ಇವರು ಧಾರವಾಡಕ್ಕೆ ಬಂದು ‘ಧಾರವಾಡ ಕಲಾ ಕೇಂದ್ರ’ ಎನ್ನುವ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದರು. ನಂತರ ಪುಣೆಯ ಫಿಲ್ಮ್‍ಇನ್ಸ್‍ಟಿಟ್ಯೂಟ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ತೊಂಬತ್ತರ ದಶಕದಲ್ಲಿ ಅವರು ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾದರು.
ಗಿರೀಶರ ಮೊದಲನೆ ಕೃತಿ ‘ಯಾಯಾತಿ’ ಎಂಬ ನಾಟಕ. ಈ ನಾಟಕವು ಇವರಿಗೆ ದೊಡ್ಡಮಟ್ಟದಲ್ಲಿ ಪ್ರಶಂಸೆ ಮತ್ತು ಪ್ರಚಾರವನ್ನು ತಂದುಕೊಟ್ಟಿತು. ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ ಇವು ಪೌರಣಿಕ ನಾಟಕಗಳಾದರೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್ ನಾಟಕಗಳು ಐತಿಹಾಸಿಕ ಹಿನ್ನಲೆಯುಳ್ಳವು. ಜಾನಪದ ವಸ್ತುಗಳನ್ನು ಒಳಗೊಂಡ ನಾಟಕಗಳು ಹಯವದನ, ನಾಗಮಂಡಲ್, ಸಾಮಾಜಿಕ ನಾಟಕ ಅಂಜುಮಲ್ಲಿಗೆ, ಗಿರೀಶ್ ಕಾರ್ನಾಡರ್ ನಾಟಕಗಳು ಇಂಗ್ಲಿಷ್, ಹಿಂದಿ, ಮರಾಠಿ ಹಾಗೂ ಭಾರತೀಯ ಭಾಷೆಗಳಲ್ಲಿ ಪ್ರದರ್ಶನಗೊಂಡಿವೆ. ನಾಟಕಗಳ ರಚನೆಯ ಜೊತೆಗೆ ಇವರು ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ರಂಗಗಳಲ್ಲಿ ಅಭಿನಯ ಮತ್ತು ನಿರ್ದೇಶಕರಾಗಿ ಜನಪ್ರಿಯರಾಗಿದ್ದಾರೆ.
ಕಾರ್ನಾಡರ ಸೃಜನಶೀಲತೆ ಪ್ರತಿಭೆಗೆ ತಕ್ಕ ಪುರಸ್ಕಾರಗಳು ದೊರೆತಿವೆ. ಇವರಿಗೆ ೧೯೬೨ರಲ್ಲಿ ಯಾಯಾತಿ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೦ರಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ, ೧೯೭೨ರಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ೧೯೭೪ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ೧೯೯೦ರಲ್ಲಿ ಗ್ರಂಥಲೋಕದ ಉತ್ತಮ ಲೇಖಕ ಪುರಸ್ಕಾರ, ೧೯೯೨ರಲ್ಲಿ ಬಿ.ಹೆಚ್. ಶ್ರೀಧರ ಪ್ರಶಸ್ತಿ, ೧೯೯೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೭ ರಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ, ೧೯೯೮ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಚಂದ್ರಶೇಖರ್ ಕಂಬಾರ
image
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ ೨ ಜನವರಿ ೧೯೩೭ರಂದು ಡಾ. ಚಂದ್ರಶೇಖರ ಕಂಬಾರರು ಜನಿಸಿದರು. ಇವರ ತಂದೆ ಬಸವಣ್ಣೆಪ್ಪ ಕಂಬಾರ, ತಾಯಿ ಚೆನ್ನವ್ವ. ಕಂಬಾರರು ೧೯೫೮ರಲ್ಲಿ ಬಿ.ಎ. ಪದವಿ ಹಾಗೂ ೧೯೬೨ರಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ವೃತ್ತಿ ಜೀವನ ಪ್ರಾರಂಭವಾದದ್ದು, ೧೯೬೨ರಿಂದ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಇವರು ಸಾಗರ ಕಾಲೇಜು, ಉಡುಪಿ ಕಾಲೇಜು, ಶಿಕಾಗೋ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ತಮ್ಮ ‘ಓರಿಜಿನ್ ಅಂಡ್ ಡೆವಲಪಮೆಂಟ್ ಆಫ್ ಕನ್ನಡ ಫೋಲ್ಕ್ ಥಿಯೆಟರ್’ ಎಂಬ ಮಹಾಪ್ರಬಂಧಕ್ಕಾಗಿ ಕಂಬಾರರು ಪಿಎಚ್.ಡಿ ಪದವಿ ಪಡೆದರು. ರಾಜ್ಯ ಮತ್ತು ಕೇಂದ್ರ ಅಕಾಡೆಮಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕಂಬಾರರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಜನಪದ ರಂಗ ಪ್ರಕಾರಗಳ ಪುನರುಜ್ಜೀವನಕ್ಕಾಗಿ ಮತ್ತು ಹವ್ಯಾಸಿ ವೃತ್ತಿರಂಗ ಪರಂಪರೆಗಳಲ್ಲಿ ಸಮನ್ವಯ ಸಾಧಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನಗಳು ಸ್ಮರಣೀಯವಾಗಿವೆ. ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ‘ರಂಗಾಯಣ’ದ ಸದಸ್ಯರಾಗಿದ್ದ ಕಂಬಾರರು ರಾಷ್ಟ್ರೀಯ ನಾಟಕ ಶಾಲೆಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೯೧ರ ನವೆಂಬರ್ ೧ರಂದು ಪ್ರಾರಂಭವಾದ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಕಂಬಾರರು ಎರಡು ಅವಧಿಗೆ(೧೯೯೨-೧೯೯೮) ಕುಲಪತಿಗಳಾಗಿದ್ದರು.
ಕಂಬಾರರು ರಚಿಸಿರುವ ಪ್ರಮುಖ ಕೃತಿಗಳೆಂದರೆ, ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿಮೀನು, ಅಕ್ಕುಕ್ಕು ಹಾಡುಗಳೆ, ಚಕೋರಿ ಇವು ಕಾವ್ಯಗಳು. ನಾಟಕಗಳು – ಬೆಂಬತ್ತಿದ ಕಣ್ಣು, ನಾರ್ಸಿಸಸ್, ಜೋಕುಮಾರ ಸ್ವಾಮಿ, ಚಾಳೇಶ, ಕಿಟ್ಟಿಯ ಕತೆ, ಜೈ ಸಿದ ನಾಯಕ, ಕಾಡು ಕುದುರೆ, ನಾಯೀ ಕತೆ ಮುಂತಾದುವು. ಕಾದಂಬರಿ – ಅಣ್ಣ ತಂಗಿ, ಕರಿಮಾಯಿ, ಜೀಕೆ ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವಾ ಮತ್ತು ಅರಮನೆ. ಜಾನಪದ- ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಸಂಗ್ಯಾಬಾಳ್ಯಾ, ಬಣ್ಣಿಸಿ ಹಾಡವ್ವ ನನ ಬಳಗ, ಬಯಲಾಟಗಳು, ಮಾತಡೋ ಲಿಂಗವೇ ಮುಂತಾದವುಗಳು. ಇತರೆ- ಕನ್ನಡ ನಾಟಕ ಸಂಪುಟ, ನೆಲದ ಮರೆಯ ನಿದಾನ.
ಕಂಬಾರರಿಗೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಸನ್ಮಾನ, ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ, ನಾಂದಿಕರ ಪ್ರಶಸ್ತಿ,ಕಲ್ಕತ್ತಾ; ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ.ಶಂಕರಗೌಡ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ೨೦೧೧ರಲ್ಲಿ ‘ಜ್ಞಾನಪೀಠ ಪ್ರಶಸ್ತಿ’. ಇವು ಕಂಬಾರರಿಗೆ ಲಭ್ಯವಾಗಿರುವ ಪ್ರಮುಖ ಪ್ರಶಸ್ತಿಗಳು.