ಕರ್ನಾಟಕದ ಜಾನಪದ ಆಟಗಳು

ಅಳೀರ್ ಗುಡುಗುಡು

ಅಳೀರ್ ಗುಡುಗುಡುಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ ಒಬ್ಬೊಬ್ಬ ನಾಯಕ, ಎರಡು ಗುಂಪಿನವರು ಪರಸ್ಪರ ಎದುರು ಬದುರು ನಿಂತು ಈರ್ವರ ನಡುವೆ ನೆಲದ ಮೇಲೆ ಒಂದು ಗೆರೆ ಎಳೆದುಕೊಳ್ಳುತ್ತಾರೆ. ಅದು ಆಟದ ನಿರ್ಣಾಯಕ ಗಡಿರೇಖೆ. ನಾಣ್ಯವನ್ನು ಮೇಲೆ ಎಸೆದು ಯಾರು ಮೊದಲು ಆಟ ಪ್ರಾರಂಭಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಟಾಸ್ ಗೆದ್ದವರು ಮೊದಲು  ಅಳೀರ್ ಗುಡುಗುಡು  ಎನ್ನುತ್ತಾ ನಿರ್ಣಾಯಕ ರೇಖೆ ದಾಟಿ ಎದುರು ಗುಂಪಿನತ್ತ ಧಾವಿಸುತ್ತಾರೆ. ಎದುರು ಗುಂಪಿನ ಯಾರನ್ನಾದರೂ ಮುಟ್ಟಿ ಅವರಿಂದ ತಪ್ಪಿಸಿಕೊಂಡು ಗುಡುಗುಡು ಎನ್ನುವುದನ್ನು ನಿಲ್ಲಿಸದೆ ಗೆರೆ ದಾಟಿದರೆ ಮುಟ್ಟಿಸಿಕೊಂಡವರು ಸೋತಂತೆ. ಅಳೀರ್ ಗುಡುಗುಡು  ಎಂದು ಹೋದವನನ್ನು ಎದುರು ಗುಂಪಿನವರು ಹಿಡಿದು ಅವನು ಗೆರೆ ದಾಟದೆ ಗುಡುಗುಡು ಎಂದು ಹೇಳುವುದನ್ನು ನಿಲ್ಲಿಸಿದರೆ ಅವನು ಸೋತಂತೆ. ಸೋತವರು ಗುಂಪನ್ನು ಬಿಟ್ಟು ಹೊರಗೆ ಕೂರಬೇಕು. ಪ್ರತಿ ಸಾರಿಯೂ ಒಂದು ಗುಂಪಿನಿಂದ ಒಬ್ಬರು ಮಾತ್ರ ಅಳೀರ್ ಗುಡುಗುಡು ಎನ್ನುತ್ತಾ ಎದುರಾಳಿ ಗುಂಪಿನೊಳಗೆ ಪ್ರವೇಶಿಸಬೇಕು. ಒಂದು ಗುಂಪಿನಲ್ಲಿರುವವರೆಲ್ಲ, ಮುಟ್ಟಿಸಿಕೊಂಡೊ ಇಲ್ಲವೆ ಗಡಿರೇಖೆ ಮುಟ್ಟಲಾಗದೆ ಗುಡುಗುಡು ಎನ್ನಲಾಗದೆ ಒಟ್ಟಾರೆ ಅವರೆಲ್ಲರೂ ಸೋತವರಾಗುತ್ತಾರೆ. ಗೆದ್ದವರಿಗೆ ಒಂದು ಆಟ ಗೆದ್ದಂತೆ. ಆಟಕ್ಕೆ ಮೊದಲೇ ಇಷ್ಟು ಆಟಗಳು ಎಂದು ಪರಸ್ಪರ ಒಪ್ಪಿಗೆಯ ಮೇಲೆ ನಿಷ್ಕರ್ಷೆಯಾಗುತ್ತದೆ. ಹೆಚ್ಚಿನ ಆಟಗಳನ್ನು ಆಡಿದ ಗುಂಪು ಗೆದ್ದಂತೆ.
ಬಯಲು ಸೀಮೆ ಮತ್ತು ಕರ್ನಾಟಕದ ಉತ್ತರಭಾಗದಲ್ಲಿ ಕಂಡುಬರುವ ಆಟವಿದು. ಬಯಲು ಸೀಮೆಯಲ್ಲಿ ಕಬಡ್ಡಿ ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಈ ಆಟಕ್ಕೆ ತೀತೀ (ತೂತು) ಅಥವಾ ಹುತುತು ಎಂದು ಕರೆಯುತ್ತಾರೆ.

ಗೋಲಿ ಆಟ

ಗೋಲಿ ಆಟಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.

ಬುಗುರಿ, ಬಳೆಚೂರಿನ ಆಟ

ಬುಗುರಿ, ಬಳೆಚೂರಿನ ಆಟಬುಗುರಿ: ಈ ಆಟವನ್ನು ಸಾಮಾನ್ಯವಾಗಿ ಗಂಡು ಮಕ್ಕಳು ಹಳ್ಳಿಗಳಲ್ಲಿ ಬುಗುರಿ ಆಟವನ್ನು ಹೆಚ್ಚಾಗಿ ಆಡುತ್ತಾರೆ. ಈ ಬುಗುರಿ ಆಟಕ್ಕೆ ಇತಿಹಾಸದ ಹಿನ್ನೆಲೆ ಸಮೃದ್ದಿಯಾಗಿ ಮಹಾಭಾರತ ಕಥೆಯಲ್ಲಿ ಪಾಂಡವರು ಮತ್ತು ಕೌರವರು ಆಟದ ಸನ್ನಿವೇಶದಲ್ಲಿ ಕಾಣಿಸುತ್ತದೆ. ಹಳ್ಳಿಗಳಲ್ಲಿ ಈಗಲೂ ಕೆಲುವು ಕಡೆ ಈ ಆಟದ ಕುರುಹು ಕಾಣಬರುತ್ತದೆ. ಉದಾ: ಗೌರಿಬಿದನೂರಿನ ತಾಲೂಕಿನ ಮಂಚೇನ ಹಳ್ಳಿಯಾ ” ಭೀಮನ ಬುಗುರಿ (ಬೆಟ್ಟ).
ಆಟದ ನಿಯಮ: ಮೊದಲು ಹುಡಗರು ಬುಗುರಿಯನ್ನು ದಾರದಿಂದ ಹೊಸೆದ ಚಾಟಿಯನ್ನು ಸುತ್ತಿ ಆಟದಲ್ಲಿ ಇರುವ ಹುಡುಗುರು ಬಂಗರವನ್ನು ಸ್ಪರ್ಶಿಸಿ ತಕ್ಷಣ ನೆಲಕ್ಕೆ ಹಾಕಿ ನಂತರ ಚಾಟಿಯ ಸಹಾಯದಿಂದ ಯಾರು ಕೈಯಲ್ಲಿ ಹಿಡಿಯುತ್ತಾರೋ, ಅವರು ಆಟ ಆಡಲು ಸಿದ್ದವಾಗುತ್ತಾರೆ. ಅಂತಿಮವ ಬುಗುರಿಯನ್ನು ನೆಲದಲ್ಲಿ ಇಡುತ್ತಾನೆ. ಮಿಕ್ಕವರು ನೆಲದಲ್ಲಿ ಬಿದ್ದ ಬುಗುರಿಗೆ ಗುರಿ ಇಟ್ಟು ಹೋಡೆದು ಗುನ್ನ (ತೂತು) ಮಾಡುತ್ತಾರೆ.  ಹೀಗೆಯೇ ಆಟ ಮುಂದುವರೆಯುತ್ತದೆ. ಈ ಆಟದಲ್ಲಿ ಬುಗುರಿಗಳು ಎರಡು ಹೋಳು ಆಗುವುದು ಸರ್ವೇ ಸಾಮಾನ್ಯ. ನೆಲಕ್ಕೆ ಬುಗುರಿ ಬೀಳದ ಹಾಗೆ ಕೈಯಲ್ಲಿ ಹಿಡಿದರೆ ಅದಕ್ಕೆ “ಅಂತರ ಮಂಗ” ಎನ್ನುತ್ತಾರೆ. ಆಟಗಾರನ ಅನುಭವದಿಂದ ಬುಗುರಿಯನ್ನು ಅನೇಕ ರೀತಿ ಆಡಿಸುತ್ತಾನೆ.
ಬಳೆಚೂರಿನ ಆಟ:ಸಾಮಾನ್ಯವಾಗಿ ಇಬ್ಬರು ಹೆಣ್ಣುಮಕ್ಕಳು ಕೂಡಿ ಆಡುವ ಒಳಾಂಗಣ ಆಟ. ಒಡೆದ ಬಳೆಗಳ ಚೂರುಗಳನ್ನು ಸಂಗ್ರಹಿಸಿ ಇಬ್ಬರೂ ಸಮನಾಗಿ ಹಂಚಿಕೊಂಡು, ಆಟಕ್ಕೆ ಇಂತಿಷ್ಟು ಎಂದು ನಿಗದಿಪಡಿಸಿಕೊಂಡು ಆಡುತ್ತಾರೆ. ಆಟದಲ್ಲಿ ಬಳಸುವ ಬಳೆಚೂರುಗಳನ್ನು ಒಟ್ಟುಗೂಡಿಸಿ ನೆಲದ ಮೇಲಿಟ್ಟು ಬಾಯಿಂದ ಜೋರಾಗಿ ಗಾಳಿ ಊದಿದಾಗ ಆ ಬಳೆಚೂರುಗಳು ಎಲ್ಲೆಡೆ ಚದುರುತ್ತವೆ. ಹೀಗೆ ಚದುರಿದ ಬಳೆ ಚೂರುಗಳನ್ನು ಒಂದು ಮತ್ತೊಂದಕ್ಕೆ ತಗುಲದಂತೆ ಆಯ್ದುಕೊಳ್ಳಬೇಕು. ಅಕಸ್ಮಾತ್ ತಗುಲಿದ ಪಕ್ಷದಲ್ಲಿ ಅವರು ಸೋತಂತೆ, ಮುಂದಿನವರು ಆಡುವರು. ಹೀಗೆ ಕೊನೆಯವರೆಗೂ ಆಡುವಾಗ ಯಾರು ಹೆಚ್ಚು ಬಳೆಯ ಚೂರುಗಳನ್ನು ಗೆಲ್ಲುತ್ತಾರೋ ಅವರೇ ಜಯಶಾಲಿಗಳು.

ಉಪ್ಪೇರುಪ್ಪ ಆಟ

ಉಪ್ಪೇರುಪ್ಪ ಆಟಹೆಣ್ಣುಮಕ್ಕಳ ಆಟ. ಐದಾರು ಜನ ಮಕ್ಕಳು ಸೇರಿಕೊಂಡು ಮನೆಯ ಒಳಗಿನ ಮೂಲೆಗಳನ್ನು ಇಲ್ಲವೆ ಕಂಬಗಳನ್ನು ಬಳಸಿಕೊಂಡು ಉಪ್ಪೇರುಪ್ಪ ಆಡುತ್ತಾರೆ. ಮೊದಲು ಉಪ್ಪು ಬೇಡುವವರನ್ನು ನಿರ್ಧರಿಸಲು ಎಲ್ಲರೂ ಒಟ್ಟಿಗೆ ಸೇರಿ ವೃತ್ತಾಕಾರವಾಗಿ ನಿಂತುಕೊಂಡು ಎಣಿಕೆಯ ಮೂಲಕ ನಿರ್ಣಯಿಸುತ್ತಾರೆ. ಚಕ್ಲೀ, ಮಕ್ಲೀ, ಪಾಕ, ಕೂಕ, ಪರಂಗ್, ಲಾಟ್ ಲೂಟ್  ಚಲ್ ಎಂದು ಎಣಿಕೆ ಮಾಡುವಾಗ ಚಲ್ ಎಂದು ನಿಲ್ಲಿಸಿದಾಗ ಅದು ಯಾರನ್ನು ನಿರ್ದೆಶಿಸುತ್ತದೆಯೋ ಅವರು ಗೆದ್ದಂತೆ. ಹೀಗೆ ಎಲ್ಲರೂ ಗೆದ್ದು ಕೊನೆಯಲ್ಲಿ ಉಳಿಯುವವಳು ಉಪ್ಪು ಬೇಡಲು ಹೋಗಬೇಕು. ಗೆದ್ದವರೆಲ್ಲರೂ ಒಂದೊಂದು ಮೂಲೆಯನ್ನೋ ಅಥವಾ ಕಂಬವನ್ನೋ ಆಶ್ರಯಿಸಿ ನಿಲ್ಲುತ್ತಾರೆ. ಸೋತವಳು ಗೆದ್ದ  ಪ್ರತಿಯೊಬ್ಬರ ಬಳಿಯೂ ‘ಉಪ್ಪುಕೊಡಿ’ ಎಂದು ಬೇಡುತ್ತಾ ಬರುತ್ತಾಳೆ. ಅವರು ಇಲ್ಲ ಮುಂದಿನ ಮನೆಗೆ ಹೋಗು ಎಂದು ಕಳುಹಿಸುತ್ತಾರೆ. ಉಪ್ಪು ಬೇಡಲು ಬರುವವಳು ಒಂದು ಕಂಬದಿಂದ ಇನ್ನೊಂದು ಕಂಬದ ಬಳಿಗೆ ಬರುವಷ್ಟರಲ್ಲಿ ಗೆದ್ದವರು ಕಂಬಗಳನ್ನು ಬದಲಾಯಿಸುತ್ತಾ ಅಂದರೆ ಸ್ಥಳ ಬದಲಾಯಿಸುತ್ತಿರುತ್ತಾರೆ. ಹೀಗೆ ಸ್ಥಳ ಬದಲಾವಣೆ ಸಂದರ್ಭದಲ್ಲಿ ಉಪ್ಪು ಬೇಡುವವಳು ಖಾಲಿಯಾದ ಸ್ಥಳವನ್ನು ಆಕ್ರಮಿಸಿದರೆ, ಆ ಸ್ಥಳಕ್ಕೆ ಬರಬೇಕಾದವಳು ಉಪ್ಪು ಬೇಡಲು ಹೋಗಬೇಕಾಗುತ್ತದೆ. ಹೀಗೆ ಎಲ್ಲರ ಸರದಿಯು ಬರುವವರೆಗೂ ಉಪ್ಪೇರುಪ್ಪ ಆಟವು ನಡೆಯುತ್ತಿರುತ್ತದೆ. ಮಕ್ಕಳಲ್ಲಿ ತ್ವರಿತ ಚಲನೆಯ ಗತಿಯನ್ನು ರೂಢಿಸುವ ಸಲುವಾಗಿ ಹುಟ್ಟಿಕೊಂಡಿರುವ ಈ ಆಟವು ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಕಂಡು ಬರುತ್ತದೆ.

ಚಿನ್ನಿ ದಾಂಡು

ಚಿನ್ನಿ ದಾಂಡುಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ . ಇದನ್ನು ವೈಯಕ್ತಿಕವಾಗಿ ಅಥವಾ ತಂಡಗಳಾಗಿ ಆಡಬಹುದು.
ವ್ಯವಸ್ಥೆ/ಸಲಕರಣೆಗಳು ಆಡಲು ಸಾಕಷ್ಟು ಜಾಗ. ಸುಮಾರು ಒಂದು ಗೇಣು ಉದ್ದದ ನೆಲದ ಮೇಲೆ ಕೊರೆದ ಒಂದು ಗುಂಡಿ / ಕುಳಿ / ಉಳ್ಳ. ಗುಂಡಿಯಷ್ಟೇ ಉದ್ದವಾದ ಮರದ ಕೋಲಿನಿಂದ ಮಾಡಿದ ಚಿನ್ನಿ / ಹಾಣೆ / ಗಿಲ್ಲಿ. ಇದರ ಎರಡೂ ಬದಿ ಚೂಪಾಗಿರಬೇಕು. ಚಿನ್ನಿಗಿಂತ ಕನಿಷ್ಠ ಎರಡೂವರೆ-ಮೂರು ಪಟ್ಟು ಉದ್ದವಾದ, ಮರದ ಕೋಲಿನಿಂದ ಮಾಡಿದ ನೇರವಾದ ದಾಂಡು.
ಆಟದ ನಿಯಮಗಳು : ಆಟಗಾರನು ಗುಂಡಿಯ ಮೇಲೆ ಅಡ್ಡವಾಗಿ ಚಿನ್ನಿಯನ್ನು ಇಡಬೇಕು. ಎದುರು ತಂಡದ ಆಟಗಾರರು ಸನ್ನದ್ಧರಾಗಿರುವುದನ್ನು ತಿಳಿಯಲು ಹೋ ಎಂದು ಕೂಗುವ ರೂಢಿಯಿದೆ. ಎದುರು ತಂಡದವರು ಹೋ ಎಂದು ಉತ್ತರಿಸಿದ ಮೇಲೆ ಚಿನ್ನಿಯ ಕೆಳಭಾಗದಲ್ಲಿ ದಾಂಡನ್ನಿಟ್ಟು ಚಿನ್ನಿಯನ್ನು ಆದಷ್ಟು ದೂರ ಚಿಮ್ಮಬೇಕು. ನೆಲಕ್ಕೆ ಬೀಳುವ ಮೊದಲು ಅದನ್ನು ಎದುರು ತಂಡದ ಆಟಗಾರರು ಹಿಡಿಯಬಹುದು. ಹೀಗೆ ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಎದುರು ತಂಡದವರಿಗೆ ಅದನ್ನು ಹಿಡಿಯಲಾಗದಿದ್ದರೆ ದಾಂಡನ್ನು ಗುಂಡಿಯಿಂದ ಒಂದು ದಾಂಡಿನಷ್ಟು ದೂರ ಹಿಂದೆ ಇಡಬೇಕು. ಎದುರು ತಂಡದ ಯಾವುದಾದರೂ (ಅಥವಾ ಚಿನ್ನಿ ಬಿದ್ದ ಸ್ಥಳಕ್ಕೆ ಹತ್ತಿರವಿದ್ದ) ಆಟಗಾರ ಅದಕ್ಕೆ ಚಿನ್ನಿ ಬಿದ್ದ ಸ್ಥಳದಿಂದ ಹೊಡೆಯಬೇಕು. ಚಿನ್ನಿ ದಾಂಡಿಗೆ ಮುಟ್ಟಿದರೆ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ. ಚಿನ್ನಿ ಗುಂಡಿಯ ಒಳಗೆ ಬಿದ್ದರೆ ಕೂಡ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ. ಚಿನ್ನಿ ಗುಂಡಿಯಿಂದ ಒಂದು ಚಿನ್ನಿಯಷ್ಟು ದೂರದಲ್ಲಿ ಬಿದ್ದರೆ ಆಟಗಾರ ಎಡಗೈಯಲ್ಲಿ ಆಟ ಮುಂದುವರೆಸಬೇಕು. ಆಟಗಾರನು ಚಿನ್ನಿಯನ್ನು ದಾಂಡಿನಿಂದ ಮೇಲಕ್ಕೆ ಚಿಮ್ಮಿಸಿ ಚಿನ್ನಿ ಗಾಳಿಯಲ್ಲಿರುವಾಗ ಅದಕ್ಕೆ ಹೊಡೆಯಬೇಕು. ಗಾಳಿಯಲ್ಲಿರುವಾಗ ಎಷ್ಟು ಸಲ ಬೇಕಾದರೂ ಹೊಡೆಯಬಹುದು.  ಹೀಗೆ ಮೇಲೆ ಚಿಮ್ಮಿಸಿದಾಗ ಎದುರು ತಂಡದ ಆಟಗಾರರು ಚಿನ್ನಿಯನ್ನು ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಮೂರು ಬಾರಿ ಚಿನ್ನಿಯನ್ನು ಹೀಗೆ ಹೊಡೆಯಲಾಗದಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಚಿನ್ನಿಯನ್ನು ಎರಡಕ್ಕಿಂತ ಹೆಚ್ಚು ಬಾರಿ ಹೊಡೆದರೆ ಗಿಲ್ಲಿ ಎಂದು ಕರೆಯಲಾಗುತ್ತದೆ. (ಎರಡು ಬಾರಿ ಹೊಡೆದರೆ ಒಂದು ಗಿಲ್ಲಿ, ಮೂರು ಬಾರಿ ಹೊಡೆದರೆ ಎರಡು ಗಿಲ್ಲಿ.. ಹೀಗೆ. ಸ್ಥಳದಿಂದ ಸ್ಥಳಕ್ಕೆ ಈ ನಿಯಮ ಬದಲಾಗಬಹುದು) ಚಿನ್ನಿ ಬಿದ್ದ ಸ್ಥಳದಿಂದ ಗುಂಡಿಯವರೆಗಿನ ದೂರವನ್ನು ಆಟಗಾರ ಊಹಿಸಬೇಕು. ಗಿಲ್ಲಿ ಆಗಿದ್ದರೆ ಚಿನ್ನಿಯಿಂದ ಅಳೆಯಬೇಕು. ಎಷ್ಟು ಬಾರಿ ಗಿಲ್ಲಿಯಾಗಿದೆಯೋ ಅಷ್ಟರಿಂದ ಅಂಕಗಳನ್ನು ಗುಣಿಸಬೇಕು. ಗಿಲ್ಲಿ ಆಗಿಲ್ಲದಿದ್ದರೆ ದಾಂಡಿನಿಂದ ಅಳೆಯಬೇಕು.  ಊಹಿಸಿದ್ದಕ್ಕಿಂತ ಕಡಿಮೆ ದೂರವಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಸರಿಯಾಗಿ ಊಹಿಸಿದರೆ ಆಟಗಾರ ಅಥವಾ ಅವನ ತಂಡಕ್ಕೆ ಅಷ್ಟು ಅಂಕಗಳು ದೊರೆತಂತೆ. ಮೊದಲೇ ನಿರ್ಧರಿಸಿದ ಅಂಕವನ್ನು ತಲುಪುವವರೆಗೆ, ಅಥವಾ ಯಾರು/ಯಾವ ತಂಡ ಹೆಚ್ಚು ಅಂಕ ಗಳಿಸಿರುತ್ತದೆಯೋ ಆ ಆಟಗಾರ / ತಂಡ ಗೆದ್ದಂತೆ.

ಅಣ್ಣೀ ಕಲ್ಲಾಟ

ಅಣ್ಣೀ ಕಲ್ಲಾಟಹೆಣ್ಣುಮಕ್ಕಳು ಆಡುವ ಒಳಾಂಗಣ ಆಟ. ಗಜ್ಜುಗದ ಗಾತ್ರ ಇರುವ ದುಂಡನೆಯ ಐದು ಕಲ್ಲುಗಳಿಂದ ಎಷ್ಟು ಜನರಾದರೂ ಈ ಆಟವನ್ನು ಆಡಬಹುದು. ಎರಡು ಕಲ್ಲುಗಳಿಗೆ ಒಂದು ‘ಅಚ್ಚು’ ಎಂದು ಕರೆಯುವುದರಿಂದ ಈ ಆಟಕ್ಕೆ ಅಚ್ಚ ಕಲ್ಲಾಟ ಎಂಬ ಹೆಸರೂ ಇದೆ. ಆಟ ಆರಂಭಿಸುವ ಆಟಗಾರ್ತಿ ಮೊದಲು ಐದು ಕಲ್ಲುಗಳನ್ನು ಕೈಯೊಳಗಿನ ಮುಷ್ಟಿಯಲ್ಲಿ ಹಿಡಿದು ಕುಲುಕಿ ನೆಲದ ಮೇಲೆ ಎಸೆಯುತ್ತಾಳೆ. ನಂತರ ಐದರಲ್ಲಿ ಒಂದು ಕಲ್ಲನ್ನು ಮೇಲಕ್ಕೆಸೆದು ಅದು ಕೆಳಗೆ ಬೀಳುವಷ್ಟರಲ್ಲಿ, ನೆಲದ ಮೇಲಿನ ಉಳಿದ ನಾಲ್ಕರಿಂದ ಒಂದು ಕಲ್ಲನ್ನು ಎತ್ತಿಕೊಂಡು ಬೀಳುತ್ತಿರುವ ಕಲ್ಲನ್ನು ಹಿಡಿದುಕೊಳ್ಳುತ್ತಾಳೆ. ಮೇಲಿಂದ ಬೀಳುವ ಕಲ್ಲು ಕೈ ತಪ್ಪಿದರೆ ಆಟ ಸೋತಂತೆ. ಇದೇ ರೀತಿ ಐದು ಸಲ ಆಡುವುದಕ್ಕೆ ಒಂದು ಗುಚ್ಚಿ ಆಟ ಎನ್ನುತ್ತಾರೆ. ಇಂತಹ ಐದು ಗುಚ್ಚಿ ಆಟಗಳನ್ನು ಆಡುವರು. ಇದಾದ ನಂತರ ಎರಡು ಕಲ್ಲು, ಮೂರು ಕಲ್ಲು, ನಾಲ್ಕು ಕಲ್ಲುಗಳನ್ನು ಒಟ್ಟೊಟ್ಟಿಗೆ ಎತ್ತಿಕೊಳ್ಳುವರು. ಕೊನೆಯಲ್ಲಿ ಐದು ಕಲ್ಲುಗಳನ್ನು ಮೇಲೆಸೆದು ಬೊಗಸೆಯಲ್ಲಿ ಹಿಡಿದುಕೊಳ್ಳುವರು. ಅಣ್ಣe ಕಲ್ಲಾಟ ಆಡುವಾಗ ಕಲ್ಲಿಗೆ ಕಲ್ಲು, ಕೈಗೆ ಕೈ ತಾಗಬಾರದು. ಮೇಲೆ ಎಸೆಯುವ ಕಲ್ಲು ಕೆಳಗೆ ಬೀಳಬಾರದು. ಹಸ್ತ ಮತ್ತು ಬೆರಳುಗಳಿಗೆ ಅತ್ಯುತ್ತಮವಾಗಿ ವ್ಯಾಯಾಮವನ್ನು ಒದಗಿಸುವ ಈ ಆಟದಲ್ಲಿ ಗುದ್ದಿನ ಆಟ, ಗೆದಿಯುವ ಆಟ, ಸೆಣೆಯುವ ಆಟ,ಗಿಚ್ಚಿಯಾಟ, ಐದು ಗುಂಜು ಆಟ ಮೊದಲಾದ ಬಗೆಗಳಿವೆ.

ಚೆಂಡಾಟ (ಲಗೋರಿ)

ಚೆಂಡಾಟ (ಲಗೋರಿ)ಗಂಡುಮಕ್ಕಳ ಹೊರಾಂಗಣ ಆಟ. ಚೆಂಡಾಟದಲ್ಲಿ ಲಗ್ಗೆ ಚೆಂಡು, ಜೋಡಿ ಚೆಂಡು, ಗಾರು ಚೆಂಡು, ಸೂರು ಚೆಂಡು, ರಾಮ ಚೆಂಡು, ಲಗೋರಿ, ಕುದುರೆ ಚೆಂಡು, ಬೂರ್ ಬೂರ್ ಚೆಂಡು, ಟಾಂಗ್ ಬಿರಾಂಗ್, ಹರಚೆಂಡು (ಧಪ್ಪಾಧುಪ್ಪಿ) ಮುಂತಾದ ಬಗೆಗಳಿವೆ. ಚೆಂಡಾಟದಲ್ಲಿ ಮಕ್ಕಳು ಮತ್ತು ದೊಡ್ಡವರು ಪ್ರತ್ಯೇಕವಾಗಿ, ಕೆಲವೊಮ್ಮೆ ಇಬ್ಬರೂ ಸೇರಿ ಆಡುವುದುಂಟು. ಚೆಂಡಾಟವಾಡಲು ಸಮತಟ್ಟಾದ ವಿಶಾಲ ಬಯಲು ಒಳ್ಳೆಯದು. ಚೆಂಡಾಟದಲ್ಲಿ ಯಾವಾಗಲೂ ಎರಡು ಪಕ್ಷಗಳಿರುತ್ತವೆ. ಸಮಸಂಖ್ಯೆಯಲ್ಲಿರುತ್ತದೆ. ಟಾಸ್ ಹಾಕಿ ಯಾರು ಮೊದಲು ಆಟ ಆಡಬೇಕುನ್ನುವುದನ್ನು ನಿರ್ಧರಿಸಲಾಗುತ್ತದೆ. ಚೆಂಡನ್ನು ಹೊಡೆಯುವವರು ಮತ್ತು ಚೆಂಡನ್ನು ಕಾಯುವವರು ಹೀಗೆ ಎರಡು ಪಕ್ಷಗಳು.
ಲಗ್ಗೆ ಚೆಂಡಾಟದಲ್ಲಿ, ಮೊದಲಿಗೆ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಒಂದು ಸಣ್ಣ ವೃತ್ತ ರಚಿಸುತ್ತಾರೆ. ಆ ವೃತ್ತದೊಳಗೆ ಒಂದು ಮರದ ಕಿರು ಹಲಗೆ ಅಥವಾ ಒಡೆದ ಮಡಿಕೆಯ ಚೂರುಗಳು ಇಲ್ಲವೆ ಕಲ್ಲಿನ ಹಲ್ಲೆಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಇಡುತ್ತಾರೆ. ಕಾಯುವವರು ಈ ಲಗ್ಗೆಯ ಎಡಬಲ ಬದಿಗಳಲ್ಲಿ ನಿಲ್ಲುತ್ತಾರೆ. ಹೊಡೆಯುವವರು ಸರದಿ ಪ್ರಕಾರ ಒಬ್ಬೊಬ್ಬರಾಗಿ ಬಂದು ನಿರ್ದಿಷ್ಟ ದೂರದಿಂದ ಲಗ್ಗೆಗೆ ಗುರಿ ಇತ್ತು ಚೆಂಡನ್ನು ಎಸೆಯುತ್ತಾರೆ. ಒಬ್ಬೊಬ್ಬರಿಗೂ ಮೂರು ಬಾರಿ ಮಾತ್ರ ಅವಕಾಶ. ಈ ಅವಕಾಶದಲ್ಲಿ ಲಗ್ಗೆಯನ್ನು ಉರುಳಿಸಬೇಕು. ಲಗ್ಗೆಯನ್ನು ಉರುಲಿಸದೆ ಪುಟ ನೆಗೆದ ಚೆಂಡನ್ನು ಕಾಯುವವನು ಹಿಡಿದುಕೊಂಡರೆ, ಚೆಂಡುಹೊಡೆಯುವವನ ಅವಕಾಶ ಕೊನೆಯಾಗುತ್ತದೆ. ಹೊಡೆಯುವವರ ಪಕ್ಷದಲ್ಲಿ ಯಾರ ಚೆಂಡೂ ಲಗ್ಗೆಯನ್ನು ಬೀಳಿಸದಿದ್ದರೆ ಅಥವಾ ಪುಟ ನೆಗೆದು ಚೆಂಡು ಹಿಡಿಯಲ್ಪಟ್ಟರೆ ಆಗ ಅವರು ಸೋತಂತೆ. ಒಟ್ಟು ಕ್ರಿಯೆ ಬದಲಾಗಿ ಕಾಯುವವರು ಚೆಂಡು ಹೊಡೆಯುವವರಾಗುತ್ತಾರೆ.
ಚೆಂಡು ಲಗ್ಗೆಗೆ ತಗುಲಿ ಲಗ್ಗೆ ಉರುಳಿ ಬಿದ್ದಾಗ, ಲಗ್ಗೆ ಹೊಡೆದವರು ಚೆಂಡನ್ನು ತಮ್ಮ ಕೈಯಲ್ಲಿ ಹಿಡಿದು ಹರಿತೋ ಹರಿತೋ ಎಂದು ಕೂಗುತ್ತಾ ಚೆಂಡು ಕಾಯುವವರನ್ನು ಬೆನ್ನಟ್ಟಿ ಹೋಗುತ್ತಾರೆ. ಗುರಿ ಇಟ್ಟು ಅವರಿಗೆ ಚೆಂಡಿನಲ್ಲಿ ಹೊಡೆಯುತ್ತಾರೆ. ಲಗ್ಗೆ ಉರುಳಿಸಿದ ಚೆಂಡು, ಹೊಡೆಯುವವರ ಪಕ್ಷದ ಒಬ್ಬನ ಬಳಿ ಇರುತ್ತದೆ.ಆದರೂ ಹೊಡೆಯುವ ಪಕ್ಷದವರೆಲ್ಲರೂ ತಮ್ಮ ಬಳಿಯೇ ಚೆಂಡಿದೆ ಎನ್ನುವಂತೆ ನಟಿಸುತ್ತಾ ಎದುರಾಳಿಗಳಿಗೆ ಚೆಂಡಿನಿಂದ ಹೊದೆಯುವವರಂತೆ ಅಭಿನಯಿಸುತ್ತಾ ಅಟ್ಟಾಡಿಸಿಕೊಂಡು ಹೋಗುತ್ತಾರೆ. ಚೆಂಡು ಇರುವವನು ಎಸೆದ ಚೆಂಡು, ಕಾಯುವವರಿಗೆ ತಗುಲಿದರೆ ಆಟ ಗೆದ್ದಂತೆ. ಇಲ್ಲವಾದರೆ, ಕಾಯುವ ಪಕ್ಷದವರು ಚೆಂಡಿನ ಏಟು ತಗುಲದಂತೆ ಧಾವಿಸಿ ಬಂದು ಲಗ್ಗೆಯನ್ನು ಮುಟ್ಟಿದರೆ ಹೊಡೆಯುವವರು ಸೋತಂತೆ. ಮತ್ತೆ ಆಟ ಮೊದಲಿನಿಂದ ಆರಂಭವಾಗುತ್ತದೆ.
ಜೋಡಿ  ಚೆಂಡಾಟವು ಸಹ ಲಗ್ಗೆ ಆಟದಂತೆಯೇ ಇರುತ್ತದೆ. ಇದನ್ನು ಹನಸೋಗೆ ಚೆಂಡು ಎಂದೂ ಕರೆಯುತ್ತಾರೆ. ಜೋಡಿ ಚೆಂಡಾಟದಲ್ಲಿ ಒಂದು ಚೆಂಡಿಗೆ ಬದಲಾಗಿ ಎರಡು ಚೆಂಡುಗಳಿರುತ್ತವೆ. ಗಾರು ಚೆಂಡಾಟದಲ್ಲಿ, ಮೊದಲೇ ನಿಗದಿಪಡಿಸಿದ ಸ್ಥಳದಲ್ಲಿ ಮೂರು-ನಾಲ್ಕು ಅಡಿಗಳ ಅಂತರದಲ್ಲಿ ಎರಡು ದಪ್ಪ ಕಲ್ಲುಗಳನ್ನು ಅವುಗಳ ಮೇಲೆ ಅಡ್ಡಲಾಗಿ ಒಂದು ಕಡ್ಡಿಯನ್ನಿಡುತ್ತಾರೆ. ಚೆಂಡನ್ನು ಕಾಯುವವರು ಸುಮಾರು ಇಪ್ಪತ್ತು ಗಜಗಳ ದೂರದಲ್ಲಿ ನಿಂತು ಚೆಂಡನ್ನು ಕಾಯುತ್ತಾರೆ. ಹೊಡೆಯುವವರು ಕಲ್ಲಿನ ಮೇಲಿರಿಸಿದ ಕಡ್ಡಿಯ ಬಳಿ ನಿಂತುಕೊಂಡು ಎಡಗೈಯಲ್ಲಿ ಚೆಂಡನ್ನು ಹಿಡಿದು ಬಲಗೈಯಲ್ಲಿ ಹಿಡಿದ ಉದ್ದನೆಯ ದಾಂಡಿನಿಂದ ಹೊಡೆಯುತ್ತಾರೆ. ಕಾಯುತ್ತಾ ನಿಂತವರು ಕ್ಯಾಚ್ ಹಿಡಿದರೆ ಹೊಡೆದವನು ಸೋತಂತೆ ಅಥವಾ ಕಾಯುವವನು ಚೆಂಡು ಬಿದ್ದ ಜಾಗದ ವೇಗದಿಂದ ಅದನ್ನು ಗುರಿ ಇಟ್ಟು ಎಸೆದು ಕಲ್ಲುಗಳ ಮೇಲಿರಿಸಿದ ಕಡ್ಡಿ ಉರುಳಿಸಿದರೆ, ಇಲ್ಲವೆ ಕಡ್ಡಿಯ ಅಡಿಯಲ್ಲಿ ಎರಡು ಕಲ್ಲುಗಳ ಮಧ್ಯೆ ನುಸುಳಿ ಹೋದರೂ ಸಹ ಹೊಡೆದವನು ಸೋತಂತೆಯೇ. ನಂತರ ಬೇರೊಬ್ಬನು ಆಟವನ್ನು ಆರಂಭಿಸುತ್ತಾನೆ.
ಸೂರು ಚೆಂಡಾಟದಲ್ಲಿ ಎದುರಾಳಿಗಳು ಎಂಬುದಿರುವುದಿಲ್ಲ. ಎಲ್ಲರೂ ಗುಂಪಾಗಿ ಕಲೆತು, ಮೊದಲು ಚೆಂಡನ್ನು ಮೇಲಕ್ಕೆ ಹಾರಿಸುತ್ತಾರೆ. ಚೆಂಡು ಯಾರ ಕೈಗೆ ಸಿಗುತ್ತದೆಯೋ ಅವರು ಮತ್ತೊಬ್ಬರಿಗೆ ಬೀಸಿ ಹೊಡೆಯುವುದು. ಸಿಕ್ಕದವರಿಗೆ ಸೀರುಂಡೆ ಇದ್ದಂತೆ. ಚೆಂಡಿನ ಏಟು ಬಲವಾಗಿ ಬೀಳುವುದರಿಂದ ಚಿಕ್ಕಮಕ್ಕಳಿಗಿಂತ ದೊಡ್ದವರೇ ಹೆಚ್ಚಾಗಿ ಆಡುವುದು. ಬಯಲು ಸೀಮೆಯಲ್ಲಿ ಪ್ರಚಲಿತದಲ್ಲಿದೆ. ರಾಮ ಚೆಂಡಾಟದಲ್ಲಿ  ಇಬ್ಬರಿಗಿಂತ ಹೆಚ್ಚು ಜನರಿದ್ದು, ಒಂದೇ ನೇರದಲ್ಲಿ ದೂರ ದೂರ ನಿಲ್ಲುತ್ತಾರೆ. ಸೂರು ಚೆಂಡಿನಂತೆ ಇಲ್ಲಿಯೂ ಚೆಂಡು ಸಿಕ್ಕವನು ಮತ್ತೊಬ್ಬರಿಗೆ ಬಾರಿಸುತ್ತಾನೆ. ಹೊಡೆತ ತಿಂದು ಚೆಂಡು ಸಿಕ್ಕದಿರುವ ಸಾಧ್ಯತೆಗಳೂ ಇದೆ.
ಚೆಂಡಾಟದಲ್ಲಿ ಪ್ರಧಾನವಾಗಿ ಕಂಡುಬರುವಂಥದ್ದು ಮಾನಸಿಕ ಏಕಾಗ್ರತೆ. ಗುರಿ ಎಸೆತ, ಏಟನ್ನು ತಪ್ಪಿಸಿಕೊಳ್ಳುವ ಚಾಕಚಕ್ಯತೆ. ಬೀಸಿ ಹೊಡೆಯುವ ಚಾತುರ್ಯ, ಶೀಘ್ರ ಚಲನೆ ಇತ್ಯಾದಿ. ಚೆಂಡಾಟದಲ್ಲಿ ಬಳಸುವ ಚೆಂಡು ಸಾಮಾನ್ಯವಾಗಿ ಚಿಂದಿ ಬಟ್ಟೆಗಳನ್ನು ಒಂದರೊಳಗೊಂದು ಸುತ್ತಿ ಹೊಲಿದು ನಿರ್ಮಿಸಿದ್ದು.

ಕೆರೆ-ದಂಡೆ ಆಟ

ಕೆರೆ-ದಂಡೆ ಆಟಹೆಣ್ಣು ಮತ್ತು ಗಂಡು ಮಕ್ಕಳ ಹೊರಾಂಗಣ ಆಟ. ದೇಹ ಮತ್ತು ಮನಸ್ಸುಗಳಿಗೆ ಏಕಕಾಲಕ್ಕೆ ವ್ಯಾಯಾಮ ನೀಡುವಂತಹ ವಿಶಿಷ್ಟವಾದ ಆಟ. ಮಕ್ಕಳು ಗುಂಪುಗಳಲ್ಲಿ ಇಲ್ಲವೆ ಒಬ್ಬೊಬ್ಬರೇ ನಿಂತುಕೊಂಡು ಈ ಆಟ ಆಡುತ್ತಾರೆ. ನಿಗದಿಪಡಿಸಿದ ಜಾಗದಲ್ಲಿ ಒಂದು ಉದ್ದನೆಯ ಅಡ್ಡಗೆರೆ ಎಳೆದು, ಆಚೆ ಬದಿಯನ್ನು ಕೆರೆ ಎಂದು, ಈಚೆ ಬದಿಯನ್ನು ದಂಡೆ ಎಂದು ಗುರುತು ಮಾಡುತ್ತಾರೆ. ಮೊದಲು ದಂಡೆಯ ಬದಿಯಲ್ಲಿ ನಿಲ್ಲುತ್ತಾರೆ. ಮತ್ತೊಂದು ಗುಂಪಿನವರು ಕೆರೆ-ದಂಡೆ ಎಂದು ಸೂಚಿಸುತ್ತಾ ಹೋಗುತ್ತಾರೆ. ಸೂಚನಾ ತಂಡದವರು ಕೆರೆ ಎಂದಾಗ ದಂಡೆಯ ಬದಿಯಲ್ಲಿ ನಿಂತವರು ಕೆರೆಯ ಬದಿಗೂ ದಂಡೆ ಎಂದಾಗ ದಂಡೆಯ ಬದಿಗೂ ಜಿಗಿಯಬೇಕು. ಚಲನೆಯು ನಿಧಾನವಾಗಿ ಆರಂಭವಾಗಿ ಕ್ರಮೇಣ ವೇಗವನ್ನು ಏರಿಸಿಕೊಳ್ಳುತ್ತದೆ. ನಿರ್ದೇಶಿಸುವವರು ಮೊದಲು ನಿಧಾನವಾಗಿ ಕೆರೆ-ದಂಡೆ, ಕೆರೆ-ದಂಡೆ ಎಂದು ಹೇಳುತ್ತಾ ಕ್ರಮೇಣ ಆತುರಾತುರವಾಗಿ ನಿರ್ದೇಶಿಸುತ್ತಾರೆ. ಅಂತಹ ಸಂದರ್ಭದಲ್ಲಿ ಕೆರೆ-ದಂಡೆ ಎನ್ನುವ ಬದಲಾಗಿ, ಎದುರಾಳಿಗಳನ್ನು ದಿಕ್ಕು ತಪ್ಪಿಸುವ ಸಲುವಾಗಿ ಕೆರೆ-ಕೆರೆ ಅಥವಾ ದಂಡೆ-ದಂಡೆ ಎಂದೂ ಹೇಳುವುದುಂಟು. ಮೊದಲಿಗೆ ಕೆರೆ ಎಂದು ಹೇಳಿದಾಗ ಕೆರೆಯ ಬದಿಗೆ ಜಿಗಿದಿದ್ದವರು ಎದುರು ತಂಡದವರು ಮತ್ತೆ ತಟ್ಟನೆ ಕೆರೆ ಎಂದಾಗ ದಂಡೆಯ ಬದಿಗೆ ಜಿಗಿದರೆ ಅಥವಾ ಕಾಲು ತೆಗೆದರೂ ಆಟದಿಂದ ಹೊರ ಬರಬೇಕು. ಎದುರಾಳಿಗಳು ಏನು ಹೇಳುತ್ತಾರೆ ಎಂಬುದನ್ನು ಏಕಾಗ್ರತೆಯಿಂದ ಗ್ರಹಿಸುವ ಎಚ್ಚರವಿರಬೇಕು. ಕಿವಿಯಷ್ಟೇ ಚುರುಕಾಗಿ, ದೇಹದ ಇತರ ಅಂಗಾಂಗಗಳೂ ಚುರುಕಾಗಿರಬೇಕು. ಆಟದಲ್ಲಿ ತಲ್ಲೀನನಾಗುವುದಕ್ಕಿಂತ ಹೆಚ್ಚಾಗಿ ಮಾನಸಿಕ ಏಕಾಗ್ರತೆ ಕಾಪಾಡಿಕೊಳ್ಳಬೇಕು.

ಕುಂಟಾಟ, ಕಂಬ ಆಟ

ಕುಂಟಾಟವಿಶೇಷವಾಗಿ ಹುಡುಗಿಯರು ಆಡುವ ಆಟ. ಮನೆಯ ಮುಂದಿನ ಅಂಗಳ ಇಲ್ಲವೆ ಬಯಲಿನಲ್ಲಿ ಈ ಆಟವನ್ನು ಆಡುತ್ತಾರೆ. ಪರಸ್ಪರ ಚಪ್ಪಾಳೆಗಳನ್ನು ಹಾಕುವ ಮೂಲಕ ಕಳ್ಳಿಯನ್ನು ನಿರ್ಣಯಿಸಿ, ನಿಗದಿಪಡಿಸಿದ ಅಂತರದಲ್ಲಿ ಎರಡು ಗೆರೆಗಳನ್ನು ಎಳೆಯುತ್ತಾರೆ. ಇದಕ್ಕೆ ಪಟ್ಟಿ ಅಥವಾ ಬೌಂಡರಿ ಎಂದು ಕರೆಯುವುದುಂಟು. ಕಳ್ಳಿಯಾದವಳು ಗೆರೆಯ ಹೊರಗೆ ನಿಂತುಕೊಂಡು ಜೂಟಾ ಎಂದು ಕೇಳುತ್ತಾಳೆ. ಉಳಿದವರು ಗೆರೆಯ ಒಳಗಡೆ ಇದ್ದು ಜೂಟ್ ಎನ್ನುತ್ತಾರೆ. ಕಳ್ಳಿಯ ಎಡಗಾಲು ಇಲ್ಲವೆ ಬಲಗಾಲನ್ನು ತುಸು ಮೇಲಕ್ಕೆತ್ತಿ ಕುಂಟುತ್ತಾ ಗೆರೆ ಒಳಗಿನ ಆಟಗಾರರನ್ನು ಹಿಡಿಯಲು ಗಡಿಯ ಒಳಕ್ಕೆ ಬರುತ್ತಾಳೆ. ಆಟಗಾರರು ಕುಂಟಿಯ ಕೈಗೆ ಸಿಗದೆ ಗೆರೆಯ ಒಳಗಡೆಯೇ ಓಡಾಡುತ್ತಾರೆ. ಕಳ್ಳಿಯು ಯಾರನ್ನಾದರೂ ಮುಟ್ಟಿಸಿದರೆ, ಮುಟ್ಟಿಸಿಕೊಂಡವರು ಕಳ್ಳರಾಗಿ ಕುಂಟಲಾರಂಭಿಸುತ್ತಾರೆ. ಒಂದು ವೇಳೆ ಆಟಗಾರರು ಗೆರೆ ದಾಟಿದರೂ ಕಳ್ಳರಾಗುತ್ತಾರೆ. ಕಳ್ಳಿಯು ಕುಂಟುವಾಗ ಕಾಲನ್ನು ನೆಲಕ್ಕೆ ತಗುಲಿಸಬಾರದು. ಕಾಲನ್ನು ಬದಲಿಸಿ ಕುಂಟುವಂತಿಲ್ಲ. ಒಂದೇ ಕಡೆ ಎಷ್ಟು ಹೊತ್ತಾದರೂ ನಿಲ್ಲಕೂಡದು. ಕಳ್ಳಿಯು ಈ ನಿಯಮಗಳನ್ನು ಮೀರಿದರೆ ಆಟ ಕೊನೆಯಾಗುತ್ತದೆ. ಮತ್ತೆ ಹೊಸದಾಗಿ ಕಳ್ಳಿಯಾದವಳು ಆಟ ಪ್ರಾರಂಭ ಮಾಡುತ್ತಾಳೆ.
ಕಂಬ ಆಟ
ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಗಂಡುಮಕ್ಕಳು ಆಡುವ ಹೊರಾಂಗಣ ಆಟ. ಈ ಆಟದಲ್ಲಿ ಎಷ್ಟು ಜನ ಬೇಕಾದರೂ ಪಾಲ್ಗೊಳ್ಳಬಹುದು. ಅವರ ಬಳಿ ಚೂಪು ತುದಿಯುಳ್ಳ ತುಸು ಉದ್ದನೆಯ ಕಬ್ಬಿಣದ ಕಂಬಿ ಇರಬೇಕು. ಚೆನ್ನಾಗಿ ನೆನೆದ ಆದರೆ ಕೆಸರಾಗದಂತಹ ತೇವವುಳ್ಳ ಸ್ಥಳವೇ ಈ ಆಟಕ್ಕೆ ಕ್ರೀಡಾಂಗಣ. ಇಂತಹ ಸ್ಥಳದಲ್ಲಿ ಒಂದು ವೃತ್ತವನ್ನು ಬರೆದು, ಆಟದಲ್ಲಿ ಪಾಲ್ಗೊಳ್ಳುವ ಆಟಗಾರರೆಲ್ಲರೂ ತಮ್ಮ ಬಳಿ ಇರುವ ಕಬ್ಬಿಣದ ಕಂಬಿಯನ್ನು ವೃತ್ತದ ಒಳಗಿನ ನೆಲಕ್ಕೆ ಎಸೆದು ಕಚ್ಚಿಸಬೇಕು. ಕಂಬಿ ಎಸೆದಾಗ ಅದು ನೆಲಕ್ಕೆ ಕಚ್ಚಿಕೊಳ್ಳದಿದ್ದಲ್ಲಿ ಆ ಕಂಬಿಯವನು ಕಳ್ಳನಾಗಬೇಕು. ಆಮೇಲೆ ಉಳಿದ ಗೆದ್ದ ಆಟಗಾರರು ಒಬ್ಬೊಬ್ಬರಾಗಿ ಕಂಬಿಯನ್ನು ನೆಲಕ್ಕೆ ಕಚ್ಚಿಸುತ್ತಾ ಮುಂದೆ ಮುಂದೆ ಸಾಗುವರು. ಕಂಬಿ ಕಚ್ಚಿಸುತ್ತಾ ಹೋಗುವಾಗ ಎಲ್ಲಿ ಕಂಬಿ ನೆಲಕ್ಕೆ ಕಚ್ಚಿಕೊಳ್ಳುವುದಿಲ್ಲವೋ ಆಗ ಆ ಕಂಬಿ ಎಸೆದವನ ಆಟ ಹೋಗಿ ಮತ್ತೊಬ್ಬನು ಅಲ್ಲಿಂದ ಮುಂದಕ್ಕೆ ಅದೇ ರೀತಿಯಲ್ಲಿ, ಕಂಬಿ ಕಚ್ಚಿಸುತ್ತಾ ಮುಂದುವರಿಯುತ್ತಾನೆ. ಇದೇ ರೀತಿ ಗೆದ್ದವರೆಲ್ಲರೂ ನೆಲಕ್ಕೆ ಕಂಬಿ ಕಚ್ಚಿಸುವುದು ಮುಗಿದ ಮೇಲೆ, ಕಂಬಿ ಕಚ್ಚಿಸುವುದು ಎಲ್ಲಿಗೆ ನಿಂತಿರುತ್ತದೆಯೋ ಅಲ್ಲಿಂದ ಹಿಡಿದು ಕಂಬಿ ಕಚ್ಚಿಸುವುದನ್ನು ಪ್ರಾರಂಭಿಸಿದ ವೃತ್ತದವರೆಗೂ ಕಳ್ಳನಾದವನು ಕುಂಟಿಕೊಂಡು ಬರಬೇಕು. ಅಲ್ಲಿಗೆ ಆಟ ಮುಕ್ತಾಯ, ಮತ್ತೆ ಮೊದಲಿನಂತೆ ಆಟ ಆರಂಭ.

ಉಪ್ಪುಪ್ಪು ಕಡ್ಡಿ

ಉಪ್ಪುಪ್ಪು ಕಡ್ಡಿಗಂಡು ಮಕ್ಕಳು-ಹೆಣ್ಣುಮಕ್ಕಳು ಪ್ರತ್ಯೇಕವಾಗಿ ಕೆಲವೊಮ್ಮೆ ಇಬ್ಬರೂ ಸೇರಿ ಆಡುವ ಆಟವಿದು. ಮರಳಿನ ರಾಶಿ ಇರುವಂತಹ ಹೊಳೆ ದಡ, ನದಿ ಬಯಲು, ಕೆರೆ ದಂಡೆಗಳಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಹೊರಾಂಗಣ ಆಟ. ಇಬ್ಬರು ಆಟಗಾರರು ಎದುರುಬದುರಾಗಿ ಕುಳಿತು ಮರಳಿನಲ್ಲಿ ಒಂದು ಮೊಳದುದ್ದದ ಗುಪ್ಪೆ ಕಟ್ಟುತ್ತಾರೆ. ಆಟ ಆಡುವವರು ಬಲಗೈಯಲ್ಲಿ ಬೆರಳುದ್ದದ ಕಡ್ಡಿಯೊಂದನ್ನು ಹಿಡಿದು ಆ ಗುಪ್ಪೆಯೊಳಗೆ ಹೊರಗೆ ಕಾಣದಂತೆ ಬಚ್ಚಿಡುತ್ತಾರೆ. ಅನಂತರ ಮರಳಿನ ಮೇಲುಭಾಗವನ್ನು ಚೆನ್ನಾಗಿ ಸವರಿ ಸಮಮಾಡುತ್ತಾರೆ. ತಮ್ಮ ಎರಡೂ ಕೈಗಳ ಬೆರಳುಗಳನ್ನು ಹೆಣೆದುಕೊಂಡು ಹಸ್ತದ ಕೆಳಭಾಗದಿಂದ ಮರಳ ಒಂದು ಭಾಗವನ್ನು ಮುಚ್ಚುತ್ತಾರೆ. ಎದುರಾಳಿ ಆಟಗಾರರು ಅವಿತಿರಿಸಿದ ಕಡ್ಡಿಯನ್ನು ಆ ಮರಳ ಗುಪ್ಪೆಯಿಂದ ಹುಡುಕಿ ಹೊರತೆಗೆಯಬೇಕು. ಅಡಗಿಸಿರುವ ಕಡ್ಡಿಯು ಹಸ್ತಗಳು ಮುಚ್ಚಿರುವ ಭಾಗದಲ್ಲಿದ್ದರೆ ಅವರು ಗೆದ್ದಂತೆ. ಕಡ್ಡಿ ಅಲ್ಲಿರದಿದ್ದರೆ, ಕಡ್ಡಿ ಅಡಗಿಸಿಟ್ಟವರು ಮರಳಗುಪ್ಪೆಯಿಂದ ಅದನ್ನು ಹೊರತೆಗೆದು, ಸೋತವರ ಕೈಗಳ ಬೊಗಸೆ ತುಂಬಾ ಮರಳು ತುಂಬಿ, ಅದರ ಮಧ್ಯಭಾಗಕ್ಕೆ ಎಂಜಲು ಉಗಿದು, ಅಲ್ಲಿ ಕಡ್ಡಿಯನ್ನು ನೆಟ್ಟಗೆ ನಿಲ್ಲಿಸಿ, ಅವರ ಕಣ್ಣುಗಳನ್ನು ತಮ್ಮ ಎರಡೂ ಕೈಗಳಿಂದ ಬಿಗಿಯಾಗಿ ಮುಚ್ಚಿ, ಅಲ್ಲಿ-ಇಲ್ಲಿ ತಿರುಗಾಡಿಸಿ ಎಲ್ಲೋ ಒಂದು ಕಡೆ ಬೊಗಸೆಯಲ್ಲಿದ್ದ ಮರಳನ್ನು ಸುರಿಯಲು ಹೇಳುತ್ತಾರೆ. ಅವರನ್ನು ಮತ್ತೆ ಅಲ್ಲಿಂದಿಲ್ಲಿ ಸುತ್ತಾಡಿಸಿ ಮೊದಲಿನ ಜಾಗಕ್ಕೆ ಕರೆತಂದು ಕಣ್ಣು ಮುಚ್ಚಿದ ಕೈಗಳನ್ನು ಬಿಟ್ಟು, ಕಡ್ಡಿ ಹುಡುಕಿ ತರಲು ಸೂಚಿಸುತ್ತಾರೆ. ಸೋತವನು ತಾನು ಮರಳು ಸುರಿದ ಸ್ಥಳವನ್ನು ಪತ್ತೆ ಹಚ್ಚಿ ಕಡ್ಡಿ ಹುಡುಕಿ ತಂದರೆ ಮತ್ತೆ ಮೊದಲಿನಿಂದ ಆಟ ಆರಂಭ. ಇಲ್ಲವಾದರೆ, ಮೊದಲೇ ನಿಗದಿಪಡಿಸಿದಂತೆ ಸೋತವನು ಗೆದ್ದವನ ಕೈಗಳಿಂದ ಅಷ್ಟೂ ಬಾರಿ ಕಣ್ಣು ಮುಚ್ಚಿಸಿಕೊಳ್ಳಬೇಕಾಗುತ್ತದೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಉಪ್ಪುಪ್ಪುಕಡ್ಡಿ ಆಟ ಆಡುವ ಸಂದರ್ಭದಲ್ಲಿ:
ಉಪ್ಪುಪ್ಪು ಕಡ್ಡಿ
ಉಪ್ನೇರಳೆ ಕಡ್ಡಿ
ಯಾವೂರ್ಲೆ ಬಡ್ಡಿ
ಕೆರೆ ಮ್ಯಾಗಳ ದೊಡ್ಡಿ
ಎಂದು ತಮಾಶೆ ಪದ ಹೇಳುವುದುಂಟು.

ಬಗಾಟ ಬಗರಿ

ಬಗಾಟ ಬಗರಿಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುವ ಹೆಣ್ಣುಮಕ್ಕಳ ಆಟ. ಬಗಾಟ ಬಗರಿಗೆ ಪುಗಡಿ ಆಟ, ಸಕ್ಕಸರಗಿ, ಉದ್ದುದ್ದೌ ಮುಂತಾದ ಹೆಸರುಗಳಿವೆ. ಇಬ್ಬರು ಹುಡುಗಿಯರು ಎದುರು ಬದುರು ನಿಂತು ದೇಹವನ್ನು ತುಸು ಹಿಂದಕ್ಕೆ ಬಾಗಿಸಿ ಒಬ್ಬರ ಕೈ ಬೆರಳುಗಳನ್ನು ಮತ್ತೊಬ್ಬರ ಕೈಬೆರಳುಗಳೊಂದಿಗೆ ಕತ್ತರಿಯಾಕಾರದಲ್ಲಿ ಹೆಣೆದುಕೊಂಡು ದುಂಡಗೆ ತಿರುಗುತ್ತಾ ಗಿರಗಿಟ್ಟಳೆ ಆಡುತ್ತಾರೆ. ಆಟದೊಂದಿಗೆ ಹಾಡು ಬೆರೆತುಕೊಳ್ಳುತ್ತದೆ.
ಬಗಾಟ ಬಗರಿ ಆಡೋಣ ಬಾ
ಬಣ್ಣದ ಚವರಿ ಬೀಸೋಣ ಬಾ
ದೇವರಗಿ ಹೋಗ್ತೀನಿ ದಂಡಿ ತಾ
ತಂಬ್ತೊಂಡ ಹೋಗ್ತೀನಿ ಗಿಂಡಿ ತಾ
ಕಟ್ಟಿ ಮ್ಯಾಲ ಕರ | ಉತ್ತತ್ತಿ ಸರ
ಗಿರಿಗಿರಿ ಗಿಂಡಿ | ಈಬತ್ತಿ ಉಂಡಿ
ಉತ್ತರ ಕರ್ನಾಟದಲ್ಲಿ ಪ್ರಚಲಿತದಲ್ಲಿರುವ ಬಗಾಟ ಬಗರಿ ಆಟವನ್ನೇ ಹೋಲುವ ದಕ್ಷಿಣ ಕರ್ನಾಟಕದಲ್ಲಿ ರೂಢಿಯಲ್ಲಿರುವ ಆಟಕ್ಕೆ ಕುಕ್ಕುರು ಬಸವಿ ಎಂದು ಕರೆಯುತ್ತಾರೆ. ಇಲ್ಲಿಯೂ ಹೆಣ್ಣು ಮಕ್ಕಳದೇ ಪ್ರಾಧಾನ್ಯತೆ. ಕತ್ತರಿಯಾಕಾರದಲ್ಲಿ ತಮ್ಮ ಕೈಗಳ ಬೆರಳುಗಳನ್ನು ಹೆಣೆದುಕೊಂಡು ದೇಹವನ್ನು ಹಿಂದಕ್ಕೆ ಬಾಗಿಸಿ ವೃತ್ತಾಕಾರದಲ್ಲಿ ತಿರುಗುವುದನ್ನು ಕಂಡಾಗ ನೋಡುಗರ ಮನಸ್ಸನ್ನು ಸೆಳೆಯುತ್ತದೆ. ಕುಕ್ಕುರು ಬಸವಿ ಆಟದೊಂದಿಗೆ ಕೆಳಕಂಡ ಹಾಡು ಹಾಡುತ್ತಾರೆ.
ರತ್ತೋ ರತ್ತೋ ರಾಯನ ಮಗಳೆ
ಬಿತ್ತೋ ಬಿತ್ತೋ ಭೀಮನ ಮಗಳೆ
ಹದಿನಾರೆಮ್ಮೆ ಕರೆಯಲಾರೆ ಕಾಯ್ಸಲಾರೆ
ಬೈಟು ಕಂಬ ಬಾಳೇ ಕಂಬ
ಕುಕ್ಕುರು ಬಸವಿ ಕೂರೇ ಬಸವಿ.

ಟೋಪಿಯಾಟ

ಟೋಪಿಯಾಟಹೆಣ್ಣು ಮತ್ತು ಗಂಡು ಮಕ್ಕಳು ಪ್ರತ್ಯೇಕವಾಗಿ ಅಥವಾ ಉಭಯರೂ ಕೂಡಿ ಆಡಬಹುದಾದ ಆಟ. ನಾಲ್ಕಕ್ಕಿಂತ ಹೆಚ್ಚು ಮಂದಿ ಇರುತ್ತಾರೆ. ಆಟಗಾರರು ವೃತ್ತಾಕಾರದಲ್ಲಿ ತಲೆತಗ್ಗಿಸಿ ಕುಳಿತುಕೊಳ್ಳುತ್ತಾರೆ. ಆಟಗಾರರಲ್ಲಿ ಒಬ್ಬ ಒಂದು ಟೋಪಿ ಅಥವಾ ಬಟ್ಟೆಯ ತುಂಡನ್ನು ತೆಗೆದುಕೊಂಡು ವೃತ್ತಾಕಾರವಾಗಿ ತಲೆತಗ್ಗಿಸಿ  ಕುಳಿತುವರನ್ನು ಮೂರು-ನಾಲ್ಕು ಬಾರಿ ಸುತ್ತುಹಾಕಿ ಅನುಮಾನ ಬರದಂತೆ ಯಾರಾದರೊಬ್ಬರ ಬೆನ್ನ ಹಿಂದೆ ಇಡುತ್ತಾನೆ. ಅನಂತರ ಮತ್ತೆ ಒಂದೆರಡು ಸುತ್ತು ಬಂದು ತನ್ನ ಜಾಗಕ್ಕೆ ಹೋಗಿ ಕೂರುತ್ತಾನೆ. ಒಂದೆರಡು ಕ್ಷಣಗಳವರೆಗೂ ಎಲ್ಲವೂ ನಿಶ್ಯಬ್ದ. ಟೋಪಿಯು ಯಾರ ಹಿಂದೆ ಇದೆಯೋ ಅವನು ಅದನ್ನು ಗುರುತಿಸಿ ಏಳದಿದ್ದರೆ, ಟೋಪಿ ಹಾಕಿದವನೇ ಎದ್ದು ಅವನ ಬಳಿ ಹೋಗಿ ಟೋಪಿಯಿಂದ ಅವನ ಬೆನ್ನಿನ ಮೇಲೆ ರಪ್ ರಪ್ ಎಂದು ಬಾರಿಸುತ್ತಾನೆ. ಟೋಪಿಯಿಂದ ಹೊಡೆಸಿಕೊಳ್ಳುವ ಆಟಗಾರ ಒಂದು ಸುತ್ತು ಬಂದು ಮತ್ತೆ ತನ್ನ ಸ್ಥಳದಲ್ಲಿ ಕುಳಿತುಕೊಳ್ಳುತ್ತಾನೆ.
ಟೋಪಿಯಾಟ ಕುತೂಹಲಕಾರಿಯಾದ ಆಟ. ಇದರಲ್ಲಿ ಆಟಗಾರರಿಗೆ ಸೂಕ್ಷ್ಮಮತಿ ಮತ್ತು ಊಹಾ ಶಕ್ತಿಗಳಿರಬೇಕು. ತಲೆ ಬಗ್ಗಿಸಿ ಕುಳಿತಿರುವಾಗ ಟೋಪಿ ಹಾಕುವವನು ತನ್ನ ಹಿಂದೆ ಕ್ಷಣಕಾಲ ನಿಂತರೂ ಸುಳಿವು ಹಿಡಿದು ಟೋಪಿಯು ತನ್ನ ಹಿಂದೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತಿರಬೇಕು. ತನಗೆ ಏಟು ಬೀಳುವ ಮೊದಲೇ ಎದ್ದು ಟೋಪಿ ತೆಗೆದುಕೊಂಡು ತಾನು ಸುತ್ತಬೇಕು. ಅಲ್ಲದೆ, ತನ್ನ ಹಿಂದೆ ಟೋಪಿ ಇಟ್ಟವನ ಹಿಂದೆಯೇ ಟೋಪಿ ಇಟ್ಟು ಛಲ ತೀರಿಸಿಕೊಳ್ಳುವಂತಿರಬೇಕು.
ಆಟ ಆಡುವ ಸಂದರ್ಭದಲ್ಲಿ ಹಾಡು ಹೇಳುವುದುಂಟು.
ಟೋಪಿ ಬೇಕೆ ಟೋಪಿ
ಎಂಥಾ ಟೋಪಿ?
ಚಿನ್ನದ ಟೋಪಿ.
ಎಷ್ಟು ರೂಪಾಯಿ?
ಸಾವಿರ ರೂಪಾಯಿ.
ಕೊಡು ಕೊಡು ಬೇಕೇ ಬೇಕೆ?

ಆನೆ ಕುರಿ ಆಟ/ಕಾಗೆ-ಗಿಳಿ ಆಟ


ಆನೆ ಕುರಿ ಆಟಕರ್ನಾಟಕದಾದ್ಯಂತ ಜನಪ್ರಿಯವಾಗಿರುವ ಆಟ. ಹೆಣ್ಣು ಗಂಡೆಂಬ ಭೇದವಿಲ್ಲದೆ ಮನೆಯ ಒಳಗೆ ಮತ್ತು ಹೊರಗೆ ಎಲ್ಲಿ ಯಾರು ಬೇಕಾದರೂ ಆಡಬಹುದು. ಒಂದು ಬಾರಿಗೆ ಇಬ್ಬರು ಆಡುವ ಆಟ. ಸರಳ, ಸಂಕೀರ್ಣ, ಚಾಣಾಕ್ಷತೆಯಿಂದ ಕೂಡಿದ ಈ ಆಟದಲ್ಲಿ ಒಬ್ಬರಿಗೆ ಮೂರು ಆನೆ ಮತ್ತೊಬ್ಬರಿಗೆ ಇಪ್ಪತ್ತು ಕುರಿ. ಘಟ್ಟಾಬಾರದ ರೀತಿಯಲ್ಲಿ ಮನೆಗಳನ್ನು ಬರೆದುಕೊಂಡು, ಆನೆ ಮತ್ತು ಕುರಿಗಳ ಸಂಕೇತವಾಗಿ ಸಣ್ಣ ಕಲ್ಲಿನ ಹರಳುಗಳನ್ನು ಇರಿಸಿಕೊಂಡು, ಮನೆಯಿಂದ ಮನೆಗೆ ದಾಟುವಾಗ ಮತ್ತು ಹಾಕುವಾಗ ಸೋಲು-ಗೆಲುವುಗಳು ಸಂಭವಿಸುತ್ತವೆ. ಆನೆ ಗಾತ್ರದಲ್ಲಿ ದೊಡ್ಡದು. ಕುರಿ ತೀರಾ ಸಣ್ಣದು. ಆನೆ ಮಾಂಸಾಹಾರಿಯಲ್ಲ; ಆದರೆ ಕುರಿಗಳನ್ನು ತುಳಿದು ಹಾಕಬಲ್ಲದು. ಆನೆಯಿಂದ ಕುರಿಗಳನ್ನು ರಕ್ಷಿಸಲು ಬೇಕಾದ ಯುಕ್ತಿ ಚಾತುರ್ಯವನ್ನು ಆನೆ ಕುರಿ ಆಟ ಕಲಿಸಿಕೊಡುತ್ತದೆ. ಹುಲಿಕುರಿ ಆಟವೂ ಸಹ ಇದೇ ತೆರನಾದ ಆಶಯವನ್ನುಳ್ಳ ಮತ್ತೊಂದು ಜನಪದ ಆಟ.
ಕಾಗೆಗಿಳಿ ಆಟ
ಕಾಗೆ-ಗಿಳಿ ಆಟಕಾಗೆ-ಗಿಳಿ ಆಟವು ತುಳುನಾಡಿನಾದ್ಯಂತ ಮಕ್ಕಳ ಆಟಗಳಲ್ಲಿ ಅತ್ಯಂತ ಜನಪ್ರಿಯವಾದ ಆಟವಾಗಿರುತ್ತದೆ. ಈ ಆಟಕ್ಕೆ ಎಂಜಲು ಕುಪ್ಪಿ, ಕೊರ್ರ -ಭಟ್ರ, ಉಬ್ಬಿದ ಕಡ್ಯ (ಉಗುಳುವ ಪಾತ್ರೆ) ಮುಂತಾದ ಹೆಸರುಗಳೂ ಉಂಟು. ನಿರ್ದಿಷ್ಟ ಸ್ಥಳವೊಂದರಲ್ಲಿ ಸೇರಿದ ಮಕ್ಕಳು ಗುಂಪುಗೂಡಿ ಯಾರು ಗಿಳಿ ಯಾರು ಕಾಗೆ ಎಂಬುದನ್ನು ಮೊದಲು ನಿಷ್ಕರ್ಷಿಸುತ್ತಾರೆ. ಎರಡು ಬೆರಳುಗಳನ್ನು ವೃತ್ತಾಕಾರವಾಗಿ ಮಡಿಚಿ ಅದರ ಮಧ್ಯೆ ಉಗುಳುತ್ತಾರೆ. ಉಗುಳು ಬೆರಳಿಗೆ ಬಿದ್ದವ  ಕಾಗೆ ಬೆರಳಿಗೆ ಬೀಳದವ ಗಿಳಿಯಾಗುತ್ತಾನೆ. ಈ ಆಟದಲ್ಲಿ ಇಷ್ಟೇ ಮಕ್ಕಳು ಭಾಗವಹಿಸಬೇಕೆಂಬ ನಿಯಮವೇನಿಲ್ಲ. ಎಷ್ಟು ಮಕ್ಕಳಾದರೂ ಪಾಲ್ಗೊಳ್ಳಬಹುದು. ಕಾಗೆ-ಗಿಳಿಗಳ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಕಾಗೆಗಳದೇ ಒಂದು ಗುಂಪು ಗಿಳಿಗಳದೇ ಒಂದು ಗುಂಪು. ಕಾಗೆಗಳು ಗಿಳಿಗಳನ್ನು ಮುಟ್ಟಬಾರದು. ಗಿಲಿಗಳೂ ಸಹ ಕಾಗೆಗಳಿಂದ ಮುಟ್ಟಿಸಿಕೊಳ್ಳಲು ಇಚ್ಚಿಸುವುದಿಲ್ಲ. ಗಿಳಿಗಳು ಕಾಗೆಗಳನ್ನು ಹಿಯಾಳಿಸುವುದು, ಕಾಗೆಗಳು ಅದಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುವುದು ನಡೆಯುತ್ತದೆ.
ಆಟ ಮುಂದುವರಿದಂತೆ ಕಾಗೆಗಳು ಗಿಳಿಯನ್ನು ‘ನಿಮ್ಮನ್ನು ನಿಂತರೆ ಮುಟ್ಟಲೆ, ಕುಳಿತರೆ ಮುಟ್ಟಲೆ’ ಎಂದು ಕೇಳುತ್ತವೆ. ನಿಂತಾಗ ಮುಟ್ಟುವುದು ಸುಲಭವಾದ್ದರಿಂದ ಕುಳಿತರೆ ಮುಟ್ಟಿ ಎಂದು ಗಿಳಿಗಳು ಕಾಗೆಗಳಿಗೆ ಹೇಳುತ್ತವೆ. ಪ್ರಶ್ನೆ-ಉತ್ತರದ ನಂತರ ಗಿಳಿಗಳನ್ನು ಕಾಗೆಗಳು ಮುಟ್ಟಿದರೆ, ಮುಟ್ಟಿಸಿಕೊಂಡ ಗಿಳಿಗಳು ಕಾಗೆಗಳಾಗುತ್ತವೆ. ಎಲ್ಲಾ ಗಿಳಿಗಳು ಕಾಗೆಗಳಾಗುವವರೆಗೂ ಆಟ ಮುಂದುವರಿಯುತ್ತದೆ. ಕೆಲವು ಬಾರಿ ಎಲ್ಲಾ ಗಿಳಿಗಳನ್ನು ಮುಟ್ಟಲು ಕಾಗೆಗಳಿಂದಾಗದಿದ್ದಲ್ಲಿ ಅವು ಸೋಲನ್ನು ಒಪ್ಪಿಕೊಂಡು ಆಟ ಕೊನೆಯಾಗುತ್ತದೆ. ಕಾಗೆ-ಗಿಳಿ ಆಟವು ವಿಶಾಲವಾದ ಮೈದಾನದಲ್ಲಿ ನಿಗದಿಪಡಿಸಿದ ಗಡಿಯೊಳಗೆ ನಡೆಯುತ್ತದೆ.
ಚನ್ನೆಮಣೆಯಾಟ
ಚನ್ನೆಮಣೆಯಾಟಹೆಣ್ಣು ಮಕ್ಕಳಿಗೆ  ಬಹು ಪ್ರಿಯವಾದ  ಚನ್ನೆಮಣೆ ಆಟವಂತೂ ಕರ್ನಾಟಕದಲ್ಲಷ್ಟೇ ಅಲ್ಲ, ಆಫ್ರಿಕಾದಿಂದ ಫಿಲಿಪೈನ್ಸವರೆಗೂ ಜನಪ್ರಿಯವಾಗಿರುವ ಜನಪದ ಆಟ. ಅಳಗುಳಿಮಣೆ, ಪತ್ತಾಮಣೆ, ಹರಳುಮಣೆ, ಸೀತೆಮಣೆ ಮೊದಲಾದ ಹೆಸರುಗಳಿಂದ ಗುರುತಿಲ್ಪಡುವ ಚನ್ನೆಮಣೆಯನ್ನು ಮರದಿಂದ ಕೆತ್ತಿರುತ್ತಾರೆ. ಒಂದು ಸಾಲಿನಲ್ಲಿ ಏಳೇಳು ಮಣೆಗಳಂತೆ ಎರಡು ಸಾಲುಗಳುಳ್ಳ ಮಣೆಯನ್ನು ಆಟ ಮುಗಿದ ನಂತರ ಪೆಟ್ಟಿಗೆಯ ರೀತಿಯಲ್ಲಿ ಮಡಚಿ ಇಡಬಹುದು. ರಾವಣನು ಕದ್ದೊಯ್ದ ಸೀತೆಯು ರಾಮನ ಆಗಮನವನ್ನು ನಿರೀಕ್ಷಿಸುತ್ತಾ ಕಾಲ ಕಳೆಯುವ ಸಲುವಾಗಿ ಅಶೋಕವನದಲ್ಲಿ ಒಬ್ಬಳೇ ಈ ಆಟವನ್ನು ಆಡುತ್ತಿದ್ದರಿಂದ ಈ ಆಟಕ್ಕೆ ಸೀತೆಯಾಟ ಎಂದೂ ಹೆಸರಿದೆ. ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಚನ್ನೆಮಣೆಯು ಹಾಸುಹೊಕ್ಕಾಗಿದೆ.
ಪ್ರತಿ ಸಾಲಿನಲ್ಲಿ ಏಳು ಗುಣಿಗಳಿದ್ದು ಎರಡೂ ಸಾಲುಗಳಲ್ಲಿ ಹದಿನಾಲ್ಕು ಗುಣಿಗಲಳಿರುವ ಮಣೆಯ ಮಧ್ಯಭಾಗದಲ್ಲಿ ಕಲಾತ್ಮಕವಾದ ಸುಂದರ ಕುಸುರಿ ಕೆತ್ತನೆಗಳಿರುವ ಚನ್ನೆಮಣೆಗಳೂ ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಈ ಆಟಕ್ಕೆ ಹುಣಸೆಬೀಜ, ಪಾರಿವಾಳದ ಬೀಜಗಳನ್ನು, ಮಲೆನಾಡಿನಲ್ಲಿ ಹಾಲಿವಾಣದ ಬೀಜಗಳನ್ನು, ತುಳುನಾಡಿನಲ್ಲಿ ಮಂಜೊಟ್ಟಿ, ಗುಲಗಂಜಿ ಅಥವಾ ಹೊಂಗಾರೆ ಮರದ ಬೀಜಗಳನ್ನು ಬಳಸುತ್ತಾರೆ. ಚನ್ನೆಮಣೆ ಆಟದಲ್ಲಿ ವೈವಿಧ್ಯಮಯವಾದ ಪ್ರಕಾರಗಳಿವೆ. ತುಳುನಾಡಿನಲ್ಲಿ ಸುಮಾರು ೨೭ ಬಗೆಯ ಆಟಗಳನ್ನು ಆಡುತ್ತಾರೆ. ಬಯಲು ಸೀಮೆಯಲ್ಲಿ ಸಾದಾ ಆಟ, ಕಚ್ಚಾಟ, ರಾಜಾಟ, ಕಾಳಿ ಆಟ, ಸೀತೆ ಆಟ, ಮೊದಲಾದ ಪ್ರಕಾರಗಳು ರೂಢಿಯಲ್ಲಿವೆ.
ಚನ್ನೆಮಣೆ ಆಟದಲ್ಲಿ ಮುಖ್ಯವಾಗಿ ಆಟಗಾರನ ಜಾಣ್ಮೆ, ನೆನಪಿನ ಶಕ್ತಿ, ಮುಂದಾಲೋಚನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವ ಮನೆಯನ್ನು ಮೊದಲು ಹಿಡಿದರೆ ಹೆಚ್ಚಿನ ಕಾಯಿಗಳನ್ನು ಗೆಲ್ಲಬಹುದು ಎನ್ನುವುದು ಕ್ಷಣದಲ್ಲಿ ತರ್ಕಿಸಿ ಕಾಯಿ ನಡೆಸಬೇಕಾಗಿರುತ್ತದೆ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವ ಪಡೆದಿರುವ ಈ ಆಟವು ಹಲವಾರು ವಿಧಿನಿಷೇಧಗಳನ್ನು ತನ್ನಲ್ಲಿ ಒಳಗೊಂಡಿದೆ. ಸೋದರರು, ಸೋದರಿಯರು ಮತ್ತು ದಂಪತಿಗಳು ಈ ಆಟವನ್ನು ಆಡಬಾರದು, ಚನ್ನೆಮಣೆಯನ್ನು ಬೇರೆಯವರಿಗೆ ಎರವಲು ಕೊಡಬಾರದು, ಜೂಜಿಗೆಂದು ಆಡಬಾರದು, ಹೆಣ್ಣುಮಕ್ಕಳು ತಮ್ಮ ಗಂಡನ ಅಕ್ಕ ಅಥವಾ ಅಣ್ಣನ ಜೊತೆ ಆಡಬಾರದು ಮುಂತಾದ ನಿಷೇಧಗಳಿವೆ. ಕೆಲವು ಕಡೆಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ಚನ್ನೆಮಣೆಯನ್ನು ಬಳುವಳಿಯಾಗಿ ಕೊಡುವುದುಂಟು.