ಮಹಾತ್ಮ ಗಾಂಧಿ

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ

 name(s): ಮಹಾತ್ಮಾ ಗಾಂಧೀ
Date of birth: ಅಕ್ಟೋಬರ್ 2, 1869
Place of birth: ಪೋರಬಂದರ್, ಕಥಯಾವರ್ Agency , ಬ್ರಿಟಿಶ್ ಇಂಡಿಯಾ
Date of death: ಜನವರಿ 30 1948 (ತೀರಿದಾಗ ವಯಸ್ಸು ೭೮)
Place of death: ಹೊಸ ದಿಲ್ಲಿ, Union of India
Movement: ಭಾರತೀಯ ಸ್ವಾತಂತ್ರ್ಯ ಆಂದೋಲನ
Major organizations: Indian ನ್ಯಾಷನಲ್ ಕಾಂಗ್ರೆಸ್

ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː]  ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮)(2nd October 1869 ) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು.

ಆರಂಭಿಕ ಜೀವನ ಮತ್ತು ಹಿನ್ನೆಲೆ

ಸಬರಮತಿ ಆಶ್ರಮದಲ್ಲಿನ ಮಹಾತ್ಮ ಗಾಂಧಿಯವರ ಕೋಣೆ
ಸಬರಮತಿ ಆಶ್ರಮ, ಗುಜರಾತ್‌‌ನಲ್ಲಿರುವ ಗಾಂಧಿಯವರ ಮನೆ
ಚಿತ್ರ:Gandhi-snow-net.jpg
ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್‌ನಲ್ಲಿ ಗಾಂಧಿಯ ಪ್ರತಿಮೆ.
ಯುವ ಗಾಂಧಿ ಸನ್.೧೮೮೬.
ಗಾಂಧಿ ಮತ್ತು ಕಸ್ತೂರಬಾ (೧೯೦೨)
  • ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ[೧] ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.
  • ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂ ಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು.[೨]
  • ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.[೩] ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;
  • ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.
  • ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.
  • ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.[೪][೫] ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)[೬]
  • ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು.[೭] ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್‌ಚಂದ್‌‌ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು.[೮]
  • ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ ಹರಿಲಾಲ್‌ ; ೧೮೯೨ರಲ್ಲಿ ಜನಿಸಿದ ಮಣಿಲಾಲ್‌; ೧೮೯೭ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು ೧೯೦೦ರಲ್ಲಿ ಜನಿಸಿದ ದೇವದಾಸ್‌. ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು.
  • ಗುಜರಾತ್‌ನ ಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದ ರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು.
  • ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು ಲಂಡನ್‌ಗೆ ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ್‌ ವಾಸದ ಮೇಲೆ ಪ್ರಭಾವ ಬೀರಿತ್ತು.[೯]
  • ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು ಲಂಡನ್‌ನ ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. ಸಾಲ್ಟ್‌ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ [೯], ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸಿದರು.[೧೦]
  • ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು ಬೌದ್ಧ ಹಾಗೂ ಹಿಂದೂ ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿ ತ್ತು .ಭಗವದ್ಗೀತೆ ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು.[೯]
  • ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು.[೯][೧೦]
೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು [೧೦] ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು.
  • ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ.[೯] ಮುಂಬಯಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು.
  • ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ.[೯][೧೦] ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ದಕ್ಷಿಣ ಆಫ್ರಿಕಾದ ನೇಟಲ್ ಕಾಲೊನಿಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು,[೧೦]

ಮಹಾತ್ಮ ಗಾಂಧಿ ಅವರ ಧ್ಯೇಯಗಳು

ರಾಷ್ಟ್ರಪಿತ ಗೌರವ

ನಾಗರಿಕ ಹಕ್ಕುಗಳಿಗಾಗಿ ಹೋರಾಟ

  • ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು. ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.
  • ೧೯೨೧ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಸ್ವರಾಜ್‌ ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು.
  • ಬ್ರಿಟಿಷರು ಹೇರಿದ್ದ ೪೦೦ km (೨೪೯ mi)ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿದರು.
  • ಆನಂತರ ಅವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ಅಹಿಂಸೆ ಯ ಪರಿಪಾಲಕ ರಾದ ಅವರು ಸತ್ಯವನ್ನೇ ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
  • ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಖಾ ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು. ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪)

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ (೧೮೯೫)
  • ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬ ರ್ಗ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು.[೧೨]
  • ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದರು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, ಡರ್ಬನ್‌ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು.
  • ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ, ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು.
  • ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು.
  • ೧೮೯೪ರಲ್ಲಿ ನೇಟಲ್ ಇಂಡಿಯನ್ ಕಾಂಗ್ರೆಸ್‌‌ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು,[೧೨][೧೩] ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.
  • ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು.[೧೦] ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು ಟ್ರಾನ್ಸ್‌ವಾಲ್‌ ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು.
  • ಅದೇ ವರ್ಷದ ಸೆಪ್ಟೆಂಬರ್‌ ೧೧ ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ಸತ್ಯಾಗ್ರಹ (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು.
  • ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರೆ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು.
  • ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್‌ ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ಸತ್ಯಾಗ್ರಹ

೧೯೦೬ರ ಜುಲು ಸಮರದಲ್ಲಿ ಪಾತ್ರ

  • ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ ಜುಲು ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು. ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು.
  • ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ಇಂಡಿಯನ್ ಒಪಿನಿಯನ್‌ ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." [೧೪] ಇಂಡಿಯನ್ ಒಪಿನಿಯನ್‌ ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು".[೧೫] ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು.
  • ಆದ್ದರಿಂದ,"ಕಾಫಿರ್‌ರ" ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಾಗ್ರಹ ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್‌ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." [೧೬]
  • ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ ಬೋಯೆರ್ ಯುದ್ಧವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ. ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." [೧೭]

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫)

ಬಳಕೆ


ಉದಾಹರಣೆ

{{See also|ಭಾರತ|ದೆಹಲಿ}} ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು.

ಚಂಪಾರಣ್ ಮತ್ತು ಖೇಡಾ

೧೯೧೮ ರಲ್ಲಿ, ಖೇಡಾ ಮತ್ತು ಚಂಪಾರಣ್ ಸತ್ಯಾಗ್ರಹಗಳ ಸಮಯದಲ್ಲಿ ಗಾಂಧಿಯವರು
  • ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್‌‌ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು. ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು.
  • ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು. ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು.
  • ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು. ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು.
  • ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು. ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು. ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು.
  • ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ,ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು. ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಮತ್ತು ಮಹಾತ್ಮ (ಮಹಾನ್ ಆತ್ಮ) ಎಂದು ಕರೆದರು.
  • ಖೇಡಾದಲ್ಲಿ ಬ್ರಿಟಿಷ್‌ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್‌ ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಯು ರಾಷ್ಟ್ರದೆಲ್ಲೆಡೆ ಹಬ್ಬಿತು.

ಅಸಹಕಾರ ಅಂದೋಲನ

  • ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವು (ಇದಕ್ಕೆ ಅಮೃತಸರ ಹತ್ಯಾಕಾಂಡ ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು. ಇದರಿಂದಾಗಿ ಸಾರ್ವಜನಿಕ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು.
  • ಗಾಂಧಿಯವರು ಬ್ರಿಟಿಷ್‌ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು. ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.[೧೮] ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ , ಕ್ರಮೇಣ ಸ್ವರಾಜ್‌ ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.
  • ೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ಸ್ವರಾಜ್‌ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್‌ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು.
  • ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು.
  • ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿ ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.[೧೯]
  • 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ ಗೌರವಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು.
  • ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದ ಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು.
  • ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.[೨೦] ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.
  • ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳುವಾಳ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರುವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸ ಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು.
  • ಒಂದೆಡೆ ಚಿತ್ತರಂಜನ್‌ ದಾಸ್‌ ಮತ್ತು ಮೋತಿಲಾಲ್‌ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು.
  • ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.[೨೧]

ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ)

5 ಏಪ್ರಿಲ್‌ ೧೯೩೦ರಂದು ದಂಡಿಯಲ್ಲಿ ಗಾಂಧಿ, ಉಪ್ಪಿನ ಸಂಚಲನದ ಕೊನೆಗೆ
7 ಏಪ್ರಿಲ್‌ 1939ರಂದು ಬಾಂಬೆಯ ಬಿರ್ಲಾ ಹೌಸ್‌ನಲ್ಲಿ ಮಹಾದೇವ್‌ ದೇಸಾಯಿಯವರು (ಎಡ) ವೈಸರಾಯ್‌ರಿಂದ ಗಾಂಧಿಯವರಿಗೆ ಬಂದ ಪತ್ರವನ್ನು ಓದಿದರು.
  • ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್‌ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು. ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್‌ ಸೈಮನ್‌ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು.
  • ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟುಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು.
  • ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್‌ ಮತ್ತು ಜವಾಹರ್‌ ಲಾಲ್‌ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.[೨೨] ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
  • ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರೆ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್‌ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
  • ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್‌ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್‌ (೨೪೮ ಮೈಲ್‌ಗಳು)ಗಳಷ್ಟು ದೂರ ನಡೆದು, ಏಪ್ರಿಲ್‌ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು.
  • ಲಾರ್ಡ್ ಎಡ್ವರ್ಡ್‌ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್‌ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್‌ ತಿಂಗಳಲ್ಲಿ ಗಾಂಧಿ-ಇರ್ವಿನ್‌ ಒಪ್ಪಂದ ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು.
  • ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.
  • ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್‌ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ.
  • ೧೯೩೨ರಲ್ಲಿ, ದಲಿತ ನಾಯಕ ಬಿ. ಆರ್‌. ಅಂಬೇಡ್ಕರ್‌ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್‌ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್‌' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್‌ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.[೨೩] ಆದಾಗ್ಯೂ, ಈ ಹೊಸ ಆಭಿಯಾನವು ದಲಿತ ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ.
  • ಪ್ರಮುಖ ಮುಖಂಡರಾದ ಬಿ. ಆರ್‌. ಅಂಬೇಡ್ಕರ್‌ ರವರು ಗಾಂಧಿಯವರು ಬಳಸಿದ ಹರಿಜನ್‌ ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯ ರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು.
  • ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್‌ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು.
೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು.
  • ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್‌ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.
  • ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.[೨೪] ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕ ರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್‌‌ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು.
  • ಬೋಸ್‌ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್‌ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್‌ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದರು.[೨೫]

ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ'

ಗಾಂಧಿಯವರ ಕೈಬರಹವನ್ನು, ಸಬರಮತಿ ಆಶ್ರಮದಲ್ಲಿರುವ ಪುಸ್ತಕದಲ್ಲಿ ಸಂಗ್ರಹಿಸಿಡಲಾಗಿದೆ.
  • ನಾಜಿ ಜರ್ಮನಿ ಪೋಲೆಂಡ್‌ನ ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ ಎರಡನೆಯ ವಿಶ್ವ ಸಮರವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರೆ ಕಾಂಗ್ರೆಸ್‌ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
  • ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು.[೨೬] ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ (ಕ್ವಿಟ್ ಇಂಡಿಯಾ) ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್‌ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್‌ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು.[೨೭]
  • ಗಾಂಧಿಯವರು ಕೆಲವು ಕಾಂಗ್ರೆಸ್‌ ಪಕ್ಷದ ಸದಸ್ಯರು ಹಾಗೂ ಬ್ರಿಟಿಷ್‌-ಪರ ಮತ್ತು ಬ್ರಿಟಿಷ್‌-ವಿರೋಧೀ ಬಣಗಳುಳ್ಳ ಇತರೆ ಭಾರತೀಯ ರಾಜಕೀಯ ಗುಂಪುಗಳಿಂದ ಟೀಕಾಪ್ರಹಾರಕ್ಕೆ ಒಳಗಾದರು. ದುರುಳ ನಾಜಿತ್ವದ ವಿರುದ್ಧ ಹೋರಾಡುತ್ತಿರುವ ಬ್ರಿಟನ್‌ನನ್ನು ವಿರೋಧಿಸುವುದು ಅನೈತಿಕ ಎಂದು ಕೆಲವರು ಟೀಕಿಸಿದರೆ, ಗಾಂಧಿಯವರ ಬ್ರಿಟನ್‌-ವಿರೋಧದ ತೀವ್ರತೆ ಸಾಲದು ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು.
  • ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ಕ್ವಿಟ್ ಇಂಡಿಯಾ ಚಳುವಳಿ ಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು.[೨೮] ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು.
  • ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ "ಆದೇಶಿತ ಅರಾಜಕತೆ" ಯು "ನೈಜ ಅರಾಜಕತೆಗಿಂತಲೂ ಕೆಟ್ಟದು" ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮತ್ತು ಕರೊ ಯಾ ಮರೊ ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು.

ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿ 'ಕಸ್ತೂರ ಬಾ' ಕೊನೆಯುಸಿರೆಳೆದರು

'ಆಗಾಖಾನ್ ಪ್ಯಾಲೇಸ್ ನ ಆಂಗಣದಲ್ಲೇ ಕಸ್ತುರ್ ಬಾ ರವರ ಸಮಾಧಿ'
  • ೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್‌ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್‌ರು ಮುಂಬಯಿಯಲ್ಲಿ ಬಂಧಿಸಿದರು. ಪುಣೆಯಲ್ಲಿನ ಅಗಾ ಖಾನ್ ಅರಮನೆಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ' ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು.
  • ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ ಮಹದೇವ್‌ ದೇಸಾಯಿ ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆ ಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು.
  • ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು.
  • ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು.

ಸ್ವಾತಂತ್ರ್ಯ ಗಳಿ

೧೯೪೬ರಲ್ಲಿ ಬ್ರಿಟಿಷ್ ಸಂಪುಟ ನಿಯೋಗ‌ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್‌ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ಗುಂಪುಗೂಡಿಕೆ ಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ (ಆದರೆ ಅವರ ನಾಯಕತ್ವದಿಂದಲ್ಲ) ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು.
  • ಏಕೆಂದರೆ, ಒಂದು ವೇಳೆ ಕಾಂಗ್ರೆಸ್‌ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು ಮುಸ್ಲಿಮ್‌ ಲೀಗ್‌ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್‌ರಿಗೆ ಗೊತ್ತಿತ್ತು. ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು.
  • ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್‌ ಲೀಗ್‌ ಪಕ್ಷದ ಮುಖಂಡರಾದ ಮಹಮದ್‌ ಅಲಿ ಜಿನ್ನಾ ಪಶ್ಚಿಮ ಪಂಜಾಬ್‌, ಸಿಂಧ್‌, ವಾಯುವ್ಯ ಸೀಮಾಂತ ಪ್ರಾಂತ್ಯ ಮತ್ತು ಪೂರ್ವ ಬಂಗಾಳ ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು.
  • ಹಿಂದೂ-ಮುಸ್ಲಿಮ್‌ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್‌ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು.
  • ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು ಸರ್ದಾರ್ ಪಟೇಲ್‌ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ ಬಂಗಾಳ ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್‌ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು.
  • ೧೯೪೭ರಲ್ಲಿ ಭಾರತ-ಪಾಕಿಸ್ತಾನ ಯುದ್ಧವು ನಡೆದಿದ್ದರೂ ಸಹ, ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಪಾಕಿಸ್ತಾನಕ್ಕೆ ಕೊಡಬೇಕಾದ ೫೫ ಕೋಟಿ (೫೫೦ಮಿಲಿಯನ್‌ ಭಾರತೀಯ ರೂಪಾಯಿಗಳು) ರೂಪಾಯಿಗಳಷ್ಟು ಹಣವನ್ನು ನೀಡಲು ನಿರಾಕರಿಸಿದಾಗ ಗಾಂಧಿಯವರು ತೀವ್ರವಾಗಿ ಅಸಮಾಧಾನಗೊಂಡರು. ಪಾಕಿಸ್ತಾನವು ಹಣವನ್ನು ಭಾರತದ ವಿರುದ್ಧದ ಯುದ್ಧಕ್ಕಾಗಿ ಬಳಸುತ್ತದೆಂದು ಸರ್ದಾರ್‌ ಪಟೇಲ್‌ರಂತಹ ಮುಖಂಡರು ಆತಂಕ ವ್ಯಕ್ತಪಡಿಸಿದರು. *ಮುಸ್ಲಿಮ್‌ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು.[೨೯] ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು.
  • ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು ದಿಲ್ಲಿಯಲ್ಲಿ ಅವರು ಅಮರಣಾಂತ ಉಪವಾಸವನ್ನು ಶುರುಗೊಳಿಸಿದರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
  • ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭಾ ಸೇರಿದಂತೆ ಹಿಂದೂ, ಮುಸ್ಲಿಮ್‌ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.[೩೦]

ಹತ್ಯೆ

ರಾಜ್‌ಘಾಟ್: ಗಾಂಧಿಯವರ ಚಿತಾಭಸ್ಮವಿರುವ ಅಗಾ ಖಾನನ ಅರಮನೆ (ಪುಣೆ, ಭಾರತ).
  • ೧೯೪೮ರ ಜನವರಿ ೩೦ರಂದು, ನವ ದೆಹಲಿಯ ಬಿರ್ಲಾ ಭವನ(ಬಿರ್ಲಾ ಹೌಸ್‌) ಮೈದಾನದಲ್ಲಿ ತಮ್ಮ ರಾತ್ರಿಯ ನಡಿಗೆಯಲ್ಲಿ ತೊಡಗಿದ್ದಾಗ ಗಾಂಧಿಯವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಹಂತಕನಾದ ನಾಥೂರಾಮ್‌ ಗೋಡ್ಸೆಯು ತೀವ್ರವಾದಿ ಹಿಂದೂ ಮಹಾಸಭಾ ಸಂಘಟನೆಯೊಂದಿಗೆ ಸಂಪರ್ಕಗಳನ್ನು ಹೊಂದಿದ್ದ ಹಿಂದೂ ಉಗ್ರಗಾಮಿಯಾಗಿದ್ದನು.
  • ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನು.[೩೧] ಗೋಡ್ಸೆ ಮತ್ತು ಆತನ ಸಹಚರ ನಾರಾಯಣ್ ಆಪ್ಟೆ - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು.
  • ಹೊಸದಿಲ್ಲಿರಾಜ್‌ ಘಾಟ್‌ನಲ್ಲಿರುವ ಗಾಂಧಿಯವರ ಸ್ಮಾರಕ (ಅಥವಾ ಸಮಾಧಿ) ಯ ಶಿಲಾಲೇಖನದಲ್ಲಿ "ಹೇ ರಾಮ್‌" ಎಂಬ ಉಚ್ಚರಣೆಯಿದೆ. (ದೇವನಾಗರಿ: हे ! राम ಅಥವಾ, ಹೇ ರಾಮ್‌, ) ಅನುವಾದ ಮಾಡಿದಾಗ "ಓ ದೇವರೇ" ಎಂದಾಗುವುದು. ತಾವು ಗುಂಡೇಟಿಗೀಡಾದಾಗ ಗಾಂಧಿಯವರ ಕೊನೆಯ ಮಾತುಗಳೆಂದು ಬಹುಮಟ್ಟಿಗೆ ನಂಬಲಾಗಿದ್ದರೂ, ಈ ಹೇಳಿಕೆಯ ನಿಖರತೆಯು ವಿವಾದಗ್ರಸ್ಥವಾಗಿದೆ.[೩೨]
  • ಜವಾಹರ್‌ಲಾಲ್‌ ನೆಹರೂರವರು ಬಾನುಲಿಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು:[೩೩]
Friends and comrades, the light has gone out of our lives, and there is darkness everywhere, and I do not quite know what to tell you or how to say it. Our beloved leader, Bapu as we called him, the father of the nation, is no more. Perhaps I am wrong to say that; nevertheless, we will not see him again, as we have seen him for these many years, we will not run to him for advice or seek solace from him, and that is a terrible blow, not only for me, but for millions and millions in this country.
  • ಗಾಂಧಿಯವರ ಚಿತಾಭಸ್ಮವನ್ನು ಕರಂಡಗಳಲ್ಲಿ ತುಂಬಿ ಸ್ಮರಣಾರ್ಥ ಸೇವೆಗಳಿಗಾಗಿ ರಾಷ್ಟ್ರಾದ್ಯಂತ ರವಾನಿಸಲಾಯಿತು. ೧೯೪೮ರ ಫೆಬ್ರುವರಿ ೧೨ರಂದು ಅಲಹಾಬಾದ್‌ನಲ್ಲಿನ ಸಂಗಮದಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಯಿತು, ಆದರೂ ಕೆಲವು ಕರಂಡಗಳನ್ನು ರಹಸ್ಯವಾಗಿ ಹಿಂತೆಗೆಯಲಾಯಿತು.[೩೪]
  • ೧೯೯೭ರಲ್ಲಿ ತುಷಾರ್‌ ಗಾಂಧಿಯವರು ಬ್ಯಾಂಕಿನ ನೆಲಮಾಳಿಗೆಯೊಂದರಲ್ಲಿದ್ದ ಕರಂಡವನ್ನು ನ್ಯಾಯಾಲಯಗಳ ಮೂಲಕ ಪುನರ್ಪಡೆದು, ಅಲಾಹಾಬಾದ್‌ನಲ್ಲಿನ ಸಂಗಮದಲ್ಲಿ ವಿಸರ್ಜಿಸಿದರು.[೩೫][೩೬] ದುಬೈ-ಮೂಲದ ವರ್ತಕರೊಬ್ಬರು ಮುಂಬಯಿ ಸಂಗ್ರಹಾಲಯಕ್ಕೆ ಕಳುಹಿಸಿಕೊಟ್ಟಿದ್ದ ಇನ್ನೊಂದು ಕರಂಡದಲ್ಲಿದ್ದ ಚಿತಾಭಸ್ಮವನ್ನು ಕುಟುಂಬವು ೨೦೦೮ರ ಜನವರಿ ೩೦ರಂದು ಗಿರ್‌ಗಾಂವ್‌ ಚೌಪಟ್ಟಿಯಲ್ಲಿ ವಿಸರ್ಜಿಸಿತು.
  • [79] ಮತ್ತೊಂದು ಕರಂಡವು (ಗಾಂಧಿಯವರನ್ನು ೧೯೪೨ರಿಂದ ೧೯೪೪ರ ವರೆಗೆ ಸೆರೆಯಲ್ಲಿಡಲಾಗಿದ್ದ) ಪುಣೆಯ ಅಗಾ ಖಾನ್‌ ಅರಮನೆಯಲ್ಲಿದೆ ಹಾಗೂ ಮಗದೊಂದು ಕರಂಡವು ಲಾಸ್‌ ಏಂಜಲೀಸ್‌ನ ಸೆಲ್ಪ್‌-ರಿಯಲೈಸೇಷನ್‌ ಫೆಲೊಷಿಪ್‌ ಲೇಕ್ ಶ್ರೈನ್‌ನಲ್ಲಿದೆ.[೩೭] ಈ ಚಿತಾಭಸ್ಮಗಳು ರಾಜಕೀಯವಾಗಿ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆಯೆಂದು ಕುಟುಂಬಕ್ಕೆ ಅರಿವಿದ್ದರೂ, ಪವಿತ್ರಸ್ಥಳಗಳನ್ನು ಒಡೆಯುವ ಪರಿಸ್ಥಿತಿ ಎದುರಾಗದಿರಲಿ ಎಂದು ಅವರು ಅವುಗಳನ್ನು ಅಲ್ಲಿಂದ ತೆಗೆಯಲು ಇಚ್ಛಿಸುತ್ತಿಲ್ಲ.[೩೪]

ಗಾಂಧಿಯವರ ತತ್ವಗಳು

ಸತ್ಯ
  • ನಿಜ ಅಥವಾ ಸತ್ಯ ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ಎಂದು ಕರೆದುಕೊಂಡರು. (ನೋಡಿ - ಸಂತ ಗಾಂಧೀಜೀ)
  • ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "ದೇವರೇ ಸತ್ಯ" ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ಸತ್ಯ (ನಿಜ)ವೇ "ದೇವರು."
  • (ನೋಡಿ - ಸಂತ ಗಾಂಧೀಜೀ)

ಅಹಿಂಸಾ

  • ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.[೩೮] ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಹಿಂಸಾಚಾರವಿಲ್ಲದಿರುವಿಕೆ, (ಅಹಿಂಸೆ ) ಮತ್ತು ಪ್ರತಿರೋಧವಿಲ್ಲದಿರುವಿಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್‌, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ.
  • ಗಾಂಧಿಯವರು ಈ ತತ್ವ ಮತ್ತು ಜೀವನ ರೀತಿಯನ್ನು ತಮ್ಮ ಆತ್ಮಚರಿತ್ರೆಯಾದ ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ನಲ್ಲಿ ವಿವರಿಸಿದ್ದಾರೆ. ಅವರು ಈ ರೀತಿ ಹೇಳಿದಂತೆ ಉಲ್ಲೇಖಿಸಲಾಗಿದೆ:
"ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸಿ"
"ಸರ್ವಾಧಿಕಾರಶಾಹಿಯ ಪದ್ಧತಿಯ ಹೆಸರಿನಡಿ ಅಥವಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ಬದ ಆರ್ಷನಾಮಗಳಡಿ ಹುಚ್ಚುಗೊಳಿಸುವಂತಹ ಸರ್ವನಾಶವು ನಡೆಯುತ್ತಿದ್ದಾಗ, ಮೃತರಿಗೆ, ಅನಾಥರಿಗೆ ಮತ್ತು ಸೂರಿಲ್ಲದವರಿಗೆ ಯಾವ ವ್ಯತ್ಯಾಸ ಕಂಡು ಬರುತ್ತದೆ?"
"ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು."
"ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ."
ಸರ್ಕಾರ, ಪೊಲೀಸ್‌ ಮತ್ತು ಸೇನೆಗಳೆಲ್ಲವೂ ಅಹಿಂಸಾತ್ಮಕವಾಗಿರುವಂತಹ ಪ್ರಪಂಚವನ್ನು ಚಿತ್ರಿಸಿಕೊಳ್ಳುವಲ್ಲಿ ಈ ತತ್ವಗಳನ್ನು ಅಳವಡಿಸುವ ಉದ್ದೇಶದಲ್ಲಿ, ಅವುಗಳನ್ನು ತಾರ್ಕಿಕತೆಯ ಕಟ್ಟಕಡಯ ತನಕ ಒಯ್ಯಲು ಗಾಂಧಿಯವರು ಹಿಂಜರಿಯಲಿಲ್ಲ. ಕೆಳಗಿನ ಉಲ್ಲೇಖನಗಳನ್ನು "ಫಾರ್ ಪೆಸಿಫಿಸ್ಟ್ಸ್" ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.[೩೯]
ಯುದ್ಧದ ವಿಜ್ಞಾನವು ಒಬ್ಬನನ್ನು ಸ್ಪಷ್ಟವಾಗಿ, ಸರಳವಾಗಿ, ಸರ್ವಾಧಿಕಾರದತ್ತ ಒಯ್ಯುತ್ತದೆ. ಅಹಿಂಸೆಯ ವಿಜ್ಞಾನವೊಂದೇ ಒಬ್ಬನನ್ನು ಶುದ್ಧ ಪ್ರಜಾಪ್ರಭುತ್ವದತ್ತ ಒಯ್ಯಬಲ್ಲದು... ಶಿಕ್ಷೆಯ ಭೀತಿಯಿಂದ ಹುಟ್ಟುವ ಅಧಿಕಾರಕ್ಕಿಂತಲೂ, ಪ್ರೇಮದ ಆಧಾರದ ಮೇಲಿರುವ ಅಧಿಕಾರವು ಸಾವಿರಪಟ್ಟು ಪರಿಣಾಮಕಾರಿಯಾಗಿದೆ... ಅಹಿಂಸೆಯನ್ನು ಕೇವಲ ವ್ಯಕ್ತಿಗಳು ಮಾತ್ರ ಆಚರಿಸಲು ಸಾಧ್ಯ, ವ್ಯಕ್ತಿಗಳು ತುಂಬಿರುವಂತಹ ರಾಷ್ಟ್ರಗಳಿಂದ ಎಂದಿಗೂ ಸಾಧ್ಯವಿಲ್ಲ ಎಂಬುದು ಪಾಷಂಡಿತನವಾಗುತ್ತದೆ... ಅಹಿಂಸೆಯನ್ನು ಆಧರಿಸಿರುವ ಪ್ರಜಾಪ್ರಭುತ್ವವೇ ಪರಿಶುದ್ಧ ಅರಾಜಕತೆಗಿರುವ ಸನಿಹದ ಮಾರ್ಗವಾಗಬಲ್ಲದು... ಸಂಪೂರ್ಣ ಅಹಿಂಸೆಯ ಆಧಾರದ ಮೇಲೆ ಸಂಘಟಿಸಲ್ಪಡುವ ಮತ್ತು ನಡೆಯುವ ಸಮಾಜವು ಪರಿಶುದ್ಧ ಅರಾಜಕತೆಯಾಗುವುದು.
ಅಹಿಂಸಾತ್ಮಕ ಸನ್ನಿವೇಶದಲ್ಲಿಯೂ ಸಹ ಪೊಲೀಸ್ ದಂಡಿನ ಆವಶ್ಯಕತೆಯಿದೆಯೆಂಬುದನ್ನು ನಾನು ಒಪ್ಪಿಕೊಂಡಿರುವೆ... ಅಹಿಂಸೆಯನ್ನು ನಂಬಿದವರು ಪೊಲೀಸ್‌ ಪಡೆಗಳಲ್ಲಿ ಸೇರಿರುತ್ತಾರೆ. ಜನರು ಸಹಜ ಪ್ರವೃತ್ತಿಯಿಂದ ಅವರಿಗೆ ಎಲ್ಲಾ ಸಹಾಯವನ್ನು ನೀಡಿ, ಪರಸ್ಪರ ಸಹಕಾರದಿಂದ ಅವರು ಕಡಿಮೆಗೊಳ್ಳುತ್ತಲಿರುವ ಗಲಾಟೆಗಳನ್ನು ಸುಲಭವಾಗಿ ಹತ್ತಿಕ್ಕುತ್ತಾರೆ... ಅಹಿಂಸಾತ್ಮಕ ಸನ್ನಿವೇಶದಲ್ಲಿ ಶ್ರಮಿಕ ಮತ್ತು ಬಂಡವಾಳಶಾಹಿಗಳ ನಡುವಿನ ಹಿಂಸಾತ್ಮಕ ಜಗಳಗಳು ಹಾಗೂ ಮುಷ್ಕರಗಳು ಬಹಳ ವಿರಳವಾಗಿರುತ್ತವೆ, ಏಕೆಂದರೆ ಅಹಿಂಸಾತ್ಮಕ ಬಹುಮತದ ಪ್ರಭಾವವು ಹೆಚ್ಚಾಗಿದ್ದು ಸಮಾಜದಲ್ಲಿರುವ ತಾತ್ವಿಕ ಘಟಕಗಳಿಗೆ ಗೌರವ ಸೂಚಿಸಬಲ್ಲುದಾಗಿದೆ. ಇದೇ ರೀತಿ, ಕೋಮುಗಲಭೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ...
ಗಲಾಟೆಯ ಸಮಯದಲ್ಲಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಅಹಿಂಸಾತ್ಮಕ ಸೇನೆಯು ಸಶಸ್ತ್ರ ಸೇನೆಗಿಂತ ಭಿನ್ನವಾಗಿ ವರ್ತಿಸುವುದು. ಕಚ್ಚಾಡುತ್ತಿರುವ ಸಮುದಾಯಗಳನ್ನು ಒಟ್ಟಿಗೆ ತಂದು, ಶಾಂತಿಯುತ ಪ್ರಚಾರವನ್ನು ಕೈಗೊಂಡು, ಅವರ ಪ್ರದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಸಂಪರ್ಕದಲ್ಲಿರಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಅವರ ಕರ್ತವ್ಯವಾಗಿರುತ್ತದೆ. ಇಂತಹ ಸೇನೆಯು ಯಾವುದೇ ತುರ್ತಿನ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿರಬೇಕು, ಮತ್ತು ಉದ್ರಿಕ್ತ ಗುಂಪುಗಳನ್ನು ಹತ್ತಿಕ್ಕಲು, ಸಾಕಷ್ಟು ಸಂಖ್ಯೆಗಳಲ್ಲಿ ಬಂದು, ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಲೂ ಸಿದ್ಧವಿರಬೇಕು... ಪ್ರತಿಯೊಂದು ಹಳ್ಳಿಯಲ್ಲಿ ಮತ್ತು ನಗರಗಳಲ್ಲಿನ ಕಟ್ಟಡಗಳ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಸತ್ಯಾಗ್ರಹ (ಸತ್ಯ ಪಡೆ) ದಳಗಳನ್ನು ಸಂಘಟಿಸಬಹುದಾಗಿದೆ. [ಅಹಿಂಸಾತ್ಮಕ ಸಮಾಜವು ಹೊರಗಿನಿಂದ ಹಲ್ಲೆಗೊಳಗಾಗಿದ್ದಲ್ಲಿ,] ಅಹಿಂಸೆಯತ್ತ ಎರಡು ಮಾರ್ಗಗಳಿವೆ. ಒಡೆತನವನ್ನು ಬಿಟ್ಟುಕೊಡುವುದು, ಆದರೆ ಅಕ್ರಮಣಕಾರನೊಂದಿಗೆ ಸಹಕರಿಸದಿರುವುದು... ಶರಣಾಗತಿಗಿಂತ ಸಾವಿಗೇ ಆದ್ಯತೆ ನೀಡುವುದು. ಎರಡನೆಯ ಮಾರ್ಗವೆಂದರೆ, ಅಹಿಂಸಾತ್ಮಕ ಮಾರ್ಗಗಳಲ್ಲಿ ತರಬೇತಿ ಪಡೆದ ಜನರ ಅಹಿಂಸಾತ್ಮಕ ಪ್ರತಿರೋಧ... ಅಕ್ರಮಣಕಾರನ ಇಚ್ಛೆಗೆ ತಲೆಬಾಗುವ ಬದಲಿಗೆ, ಅಗಣಿತ ಪಂಕ್ತಿಗಳಲ್ಲಿ ಗಂಡಸರು ಮತ್ತು ಹೆಂಗಸರು ಸುಮ್ಮನೆ ಸಾವನ್ನಪುವ ಅನಿರೀಕ್ದಿತ ದೃಶ್ಯವನ್ನು ನೋಡಿ ಅವನ ಮತ್ತು ಅವನ ಸೈನಿಕರ ಮನವು ಕರಗಬೇಕು... ಅಹಿಂಸೆಯನ್ನು ತನ್ನ ಅಂತಿಮ ನೀತಿಯಾಗಿ ಮಾಡಿಕೊಂಡಿರುವಂತಹ ರಾಷ್ಟ್ರ ಅಥವಾ ಗುಂಪನ್ನು ಒಂದು ಅಣುಬಾಂಬ್ ಕೂಡ ಗುಲಾಮತನಕ್ಕೆ ಒಡ್ಡಲು ಶಕ್ಯವಾಗದು... ಆ ರಾಷ್ಟ್ರದಲ್ಲಿ ಅಹಿಂಸೆಯ ಮಟ್ಟವು ಹೀಗೆ ಬಂದು ಹಾಗೆ ಹೋಗುವಂತಿದ್ದರೂ ಸಹ, ಅದು ಸಾರ್ವತ್ರಿಕ ಮರ್ಯಾದೆಯನ್ನು ಸಂಪಾದಿಸುವಷ್ಟು ಉನ್ನತಿಗೆ ಏರಿರುತ್ತದೆ.
ಈ ಅಭಿಪ್ರಾಯಕ್ಕೆ ಅನುಗುಣವಾಗಿ, ೧೯೪೦ರಲ್ಲಿ ನಾಜಿ ಜರ್ಮೆನಿಯು ಬ್ರಿಟಿಷ್ ದ್ವೀಪಗಳ ಮೇಲೆ ಅಕ್ರಮಣ ಮಾಡುವುದು ಸನ್ನಿಹಿತವಾದಾಗ, ಗಾಂಧಿಯವರು ಬ್ರಿಟಿಷ್‌ ಜನತೆಗೆ ಕೆಳಕಂಡ ಸಲಹೆಯನ್ನು ನೀಡಿದರು (ಶಾಂತಿ ಮತ್ತು ಯುದ್ಧಗಳಲ್ಲಿ ಅಹಿಂಸೆ ):[೪೦]
"ನಿಮ್ಮನ್ನು ಅಥವಾ ಮಾನವಕುಲವನ್ನು ರಕ್ಷಿಸಲು ಯೋಗ್ಯವಲ್ಲದ ಶಸ್ತ್ರಗಳನ್ನು ನೀವು ಕೆಳಗಿರಿಸಬೇಕು ಎಂದು ನಾನು ಇಚ್ಛಿಸುವೆ. ನಿಮ್ಮ ಸ್ವತ್ತು ಎನ್ನಲಾದ ರಾಷ್ಟ್ರಗಳಿಂದ ಏನು ಬೇಕಾದರೂ ತೆಗೆದುಕೊಂಡು ಹೋಗಿರೆಂದು ನೀವು ಶ್ರೀಯುತ ಹಿಟ್ಲರ್ ಮತ್ತು ಮುಸೊಲಿನಿಯವರನ್ನು ಆಮಂತ್ರಿಸುತ್ತೀರಿ... ಈ ಮಹಾಶಯರು ನಿಮ್ಮ ಮನೆಗಳನ್ನು ಆಕ್ರಮಿಸಲು ಇಚ್ಛಿಸಿದಲ್ಲಿ, ನೀವು ಅವುಗಳನ್ನು ತೊರೆಯುತ್ತೀರಿ. ಅವರು ನಿಮಗೆ ಮುಕ್ತ ಹಾದಿ ನೀಡದಿದ್ದಲ್ಲಿ, ನೀವೇ ಸ್ವತ: - ಗಂಡು, ಹೆಣ್ಣು ಮತ್ತು ಮಕ್ಕಳೆಲ್ಲರೂ - ಹತ್ಯೆಗೀಡಾಗಲು ಅನುವು ಮಾಡಿಕೊಳ್ಳುವಿರಿ, ಆದರೆ ನೀವು ಎಂದಿಗೂ ಅವರಿಗೆ ಸ್ವಾಮಿನಿಷ್ಠೆ ತೋರಿಸಲು ಒಪ್ಪುವುದಿಲ್ಲ."
ಯುದ್ಧದ ಆ ನಂತರ, ೧೯೪೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ತೀವ್ರತೆಯ ಇನ್ನೊಂದು ಅಭಿಪ್ರಾಯವನ್ನು ಅವರು ನೀಡಿದರು:
"ಯಹೂದ್ಯರು ಕಸಾಯಿಯ ಕತ್ತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಿತ್ತು. ಅವರು ಕಡಿದಾದ ಬಂಡೆಗಳಿಂದ ಸಮುದ್ರದೊಳಗೆ ಧುಮುಕಬೇಕಿತ್ತು."
ಆದಾಗ್ಯೂ, ಈ ಮಟ್ಟದ ಅಹಿಂಸೆಗೆ ಅಸಾಮಾನ್ಯ ನಂಬಿಕೆ ಮತ್ತು ಧೈರ್ಯಗಳ ಅಗತ್ಯವಿದ್ದು, ಇವುಗಳು ಎಲ್ಲರಲ್ಲಿಯೂ ಇರುವುದಿಲ್ಲ ಎಂಬುದು ಗಾಂಧಿಯವರಿಗೆ ಗೊತ್ತಿತ್ತು. ಆದ್ದರಿಂದ, ರಣಹೇಡಿತನವನ್ನು ಮುಚ್ಚಿಡಲು ಬಳಸುವವರಾದಲ್ಲಿ, ಪ್ರತಿಯೊಬ್ಬರೂ ಅಹಿಂಸೆಯನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು:
"ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹೆದರಿದವರು ಅಥವಾ ಪ್ರತಿರೋಧವನ್ನು ಒಡ್ಡಲು ಅಶಕ್ತರಾದವರನ್ನು ತಮ್ಮ ಸತ್ಯಾಗ್ರಹ ಆಂದೋಲನದೆಡೆ ಆಕರ್ಷಿಸಲು ಗಾಂಧಿಯವರು ಇಚ್ಛಿಸುತ್ತಿರಲಿಲ್ಲ. 'ರಣಹೇಡಿತನ ಮತ್ತು ಹಿಂಸಾಚಾರದ ನಡುವೆ ಕೇವಲ ಒಂದೇ ಆಯ್ಕೆಯಿದ್ದಲ್ಲಿ, ನಾನು ಹಿಂಸಾಚಾರವನ್ನೇ ಆಯ್ಕೆ ಮಾಡಲು ಸಲಹೆ ನೀಡುವೆ ಎಂದು ನಂಬಿರುವೆ' ಎಂದು ಅವರು ಬರೆದಿದ್ದರು."[೪೧]
"ಅಹಿಂಸೆಯ ವಿಚಾರದಲ್ಲಿ, ಅವರಿಗೆ ಅಹಿಂಸೆಗಿಂತಲೂ ಹಚ್ಚು ಶಕ್ತಿಯುಳ್ಳದ್ದು ಎದುರಾಗಿ, ಆ ಶಕ್ತಿಯ ಬಳಕೆಯಲ್ಲಿ ಅವರು ಹೆಚ್ಚು ಪರಿಣಿತರಾಗಿದ್ದಲ್ಲಿ, ಅವರು ಅಹಿಂಸೆಯನ್ನು ತ್ಯಜಿಸಿ, ಅವರು ಮುಂಚೆ ಕೈಯಲ್ಲಿ ಹಿಡಿದಿದ್ದ ಶಸ್ತ್ರಗಳನ್ನು ಪುನ: ಎತ್ತಿಕೊಳ್ಳಬಹುದು ಎಂದು ಪ್ರತಿಯೊಂದು ಸಭೆಯಲ್ಲಿಯೂ ನಾನು ಎಚ್ಚರಿಕೆಯನ್ನು ಪುನರುಚ್ಚರಿಸಿದ್ದೆ. ಹಿಂದೊಮ್ಮೆ ಮಹಾನ್‌ ಧೈರ್ಯಶಾಲಿಗಳಾಗಿದ್ದು ಬಾದಶಾಹ್‌ ಖಾನ್‌ರ ಪ್ರಭಾವದಿಂದಾಗಿ ರಣಹೇಡಿಗಳಾಗಿ ಬದಲಾದ ಅಥವಾ ಹಾಗೆ ಮಾಡಲ್ಪಟ್ಟ ಖುದಾಯಿ ಖಿದ್ಮತ್‌ಗಾರ್‌ಗಳಿಗೆ ಸಂಬಂಧಿಸಿ ಇದನ್ನು ಹೇಳಲೇಬಾರದು. ಅವರ ಧೈರ್ಯವು ಅವರು ಉತ್ತಮ ಗುರಿಗಾರರಾಗಿರುವುದರಲ್ಲಿ ಇಲ್ಲ, ಸಾವನ್ನು ಆಹ್ವಾನಿಸಿ ಗುಂಡುಗಳಿಗೆ ಎದೆಯೊಡ್ಡಲು ಸದಾ ಸಿದ್ಧರಿರುವುದರಲ್ಲಿದೆ.[೪೨]

ಸಸ್ಯಾಹಾರ ತತ್ವ

  • ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, ಸಸ್ಯಾಹಾರದ ಕಲ್ಪನೆಯು ಹಿಂದೂ ಮತ್ತು ಜೈನ್ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ ಗುಜರಾತ್‌ನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ.[೪೩][೪೪] ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ.
  • ಲಂಡನ್‌ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ ಸಸ್ಯಾಹಾರಿಯಾದರು.
  • ಈ ವಿಷಯದ ಬಗ್ಗೆ ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್ ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್‌ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ದಿ ವೆಜಿಟೇರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.[೪೫] ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್‌ಫೀಲ್ಡ್‌ ಅವರ ಸ್ನೇಹಿತರಾದರು.
  • ಹೆನ್ರಿ ಸ್ಟೀಫೆನ್ಸ್ ಸಾಲ್ಟ್‌ರವರ ಕೃತಿಯನ್ನು ಓದಿ ಮೆಚ್ಚಿದ ಯುವ ಮೋಹನ್‌ದಾಸ್‌ರು ಈ ಸಸ್ಯಾಹಾರ ಪ್ರಚಾರಕರೊಂದಿಗೆ ಪತ್ರವ್ಯವಹಾರ ನಡೆಸಿದರು. ತಮ್ಮ ಲಂಡನ್‌ ವಾಸ ಮತ್ತು ಆ ನಂತರದ ಕಾಲದಲ್ಲಿ, ಗಾಂಧಿಯವರು ಸಸ್ಯಾಹಾರವನ್ನು ಸಮರ್ಥಿಸು ತ್ತಿದ್ದರು. ಗಾಂಧಿಯವರ ಪ್ರಕಾರ ಸಸ್ಯಾಹಾರಿ ಪಥ್ಯವು ಶರೀರದ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಅದು ಆರ್ಥಿಕ ದೃಷ್ಟಿಯಿಂದಲೂ ಸೂಕ್ತವೆನಿಸಿತ್ತು. ಏಕೆಂದರೆ, ಮಾಂಸಾಹಾರವು ಸಾಮಾನ್ಯವಾಗಿ ದವಸ, ತರಕಾರಿ ಹಾಗೂ ಹಣ್ಣುಗಳಿಗಿಂತ ದುಬಾರಿಯಾಗಿತ್ತು.
  • ಇಂದಿಗೂ ದುಬಾರಿಯಾಗಿವೆ. ಜೊತೆಗೆ, ಆ ಕಾಲದಲ್ಲಿ ಹಲವು ಭಾರತೀಯರು ಕಡಿಮೆ ಆದಾಯದೊಂದಿಗೆ ಬಹಳ ದುಸ್ತರದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹಾಗಾಗಿ ಸಸ್ಯಾಹಾರ ತತ್ವವನ್ನು ಅಧ್ಯಾತ್ಮಿಕತೆಯ ಪ್ರಯೋಗವಾಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನೋಡಲಾ ಗುತ್ತಿತ್ತು. ಅವರು ದೀರ್ಘಕಾಲ ಆಹಾರದಿಂದ ದೂರವಿರುತ್ತಿದ್ದ ಅವರು ಉಪವಾಸವನ್ನು ರಾಜಕೀಯ ಪ್ರತಿಭಟನೆಯ ರೂಪದಲ್ಲಿ ಬಳಸುತ್ತಿದ್ದರು. ತಮ್ಮ ಸಾವಿನ ತನಕ ಅಥವಾ ತಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಅವರು ಆಹಾರವನ್ನು ನಿರಾಕರಿಸುತ್ತಿದ್ದರು. *ಸಸ್ಯಾಹಾರವು ಬ್ರಹ್ಮಚರ್ಯೆದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ.
ಗಾಂಧಿಯವರು ಫಲಾಹಾರಿಯಾಗಿದ್ದರು,[೪೬] ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು.
  • ಅವರು ಹಸುಗಳಿಂದ ಸಂಗ್ರಹಿಸಲಾದ ಹೈನು ಉತ್ಪಾದನೆಗಳನ್ನು ಸೇವಿಸುತ್ತಿರಲಿಲ್ಲ, ಏಕೆಂದರೆ ಹಾಲು ಸಂಗ್ರಹಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಹಸುವಿಗೆ ಗಾಳಿ ಹೊಡೆಯುವ ಅಭ್ಯಾಸವು ಅವರಿಗೆ ಜಿಗುಪ್ಸೆ ತರಿಸಿತ್ತು. ಹೀಗಾಗಿ ಹಾಲು ಮಾನವನ ಸ್ವಾಭಾವಿಕ ಪಥ್ಯವಲ್ಲ ಎಂಬುದು ಅವರ ಮೊದಲಿನ ಅಭಿಪ್ರಾಯವಾಗಿತ್ತು, ಹಾಗೂ ನಿರ್ದಿಷ್ಟವಾಗಿ ಹೇಳುವುದಾದರೆ, ತಮ್ಮ ಮೃತ ತಾಯಿಗೆ ಮಾತು ಕೊಟ್ಟಿದ್ದೂ ಇದಕ್ಕೊಂದು ಕಾರಣವಾಗಿತ್ತು.

ಬ್ರಹ್ಮಚರ್ಯೆ

  • ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು. ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು. ಆ ನಂತರ ಸೇವಕನೊಬ್ಬನು ಬಂದು ಗಾಂಧಿಯವರ ತಂದೆಯವರು ಆಗಷ್ಟೇ ನಿಧನರಾದದ್ದನ್ನು ತಿಳಿಸಿದನು.
  • ಗಾಂಧಿಯವರಿಗೆ ಅತೀವ ಪಾಪಪ್ರಜ್ಞೆ ಉಂಟಾಗಿ, ಸ್ವತ: ತಮ್ಮನ್ನು ತಾವು ಕ್ಷಮಿಸಲಾಗದ ಸ್ಥಿತಿಯಲ್ಲಿದ್ದರು. ಈ ಘಟನೆಯನ್ನು ಅವರು "ದುಪ್ಪಟ್ಟು ಅವಮಾನ" ಎಂದು ಉಲ್ಲೇಖಿಸಿದರು. ವಿವಾಹಿತರಾಗಿದ್ದರೂ ಸಹ, ತಮ್ಮ ೩೬ನೆಯ ವಯಸ್ಸಿನಲ್ಲಿಯೇ ಬ್ರಹ್ಮಚರ್ಯೆಯನ್ನಾಚರಿಸುವಲ್ಲಿ ಈ ಘಟನೆಯು ಗಾಂಧಿಯವರ ಮೇಲೆ ಬಹಳಷ್ಟು ಪ್ರಭಾವ ಬೀರಿತು.[೪೭]
  • ಸಂಭೋಗತ್ಯಾಗ ಮತ್ತು ಸಂನ್ಯಾಸದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ ಬ್ರಹ್ಮಚರ್ಯೆಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು.
  • ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು ಕಸ್ತೂರಬಾ ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.[೪೮]

ಸರಳತೆ


  • ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ ನಡೆಸತಕ್ಕದ್ದು, ಇದು ಬ್ರಹ್ಮಚರ್ಯೆಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು.[೪೯]
  • ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.[೫೦] ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ ಆಂತರಿಕ ಶಾಂತಿಯು ತುಂಬಿಕೊಂಡಿದೆ ಎಂದು ಅವರು ನಂಬಿದ್ದರು.
  • ಹಿಂದೂ ತತ್ವಗಳಾದ ಮೌನ (ಸಂಸ್ಕೃತ:मौनं — ನಿಶ್ಯಬ್ದ) ಮತ್ತು ಶಾಂತಿ (ಸಂಸ್ಕೃತ:शांति — ಶಾಂತಿ) ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ ೩೭ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು.
  • ಜಾನ್ ರಸ್ಕಿನ್‌ರವರ ಅನ್‌ಟು ದಿಸ್‌ ಲಾಸ್ಟ್‌ ಕೃತಿಯನ್ನು ಓದಿದ ನಂತರ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಹಾಗೂ ಫಿನಿಕ್ಸ್ ಸೆಟ್ಲ್‌ಮೆಂಟ್‌ ಎಂಬ ಸಮುದಾಯವೊಂದನ್ನು ರೂಪಿಸಲು ಅವರು ನಿರ್ಧರಿಸಿ ದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಮರಳಿದ ನಂತರ ಗಾಂಧಿಯವರು ತಮ್ಮಲ್ಲಿದ್ದ ಸಂಪತ್ತು ಹಾಗೂ ಯಶಸ್ಸನ್ನು ಬಿಂಬಿಸುವಂತಹ ಪಾಶ್ಚಾತ್ಯ ಶೈಲಿಯ ಉಡುಪುಗಳನ್ನು ಧರಿಸಿವುದನ್ನು ಬಿಟ್ಟರು.
  • ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು, ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (ಖಾದಿ )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
  • ನಿರುದ್ಯೋಗದ ಕಾರಣದಿಂದಾಗಿ ಭಾರತೀಯ ಕೆಲಸಗಾರರು ಕೆಲಸವಿಲ್ಲದೆ ಕೂರಬೇಕಾಗಿ ಬರುತ್ತಿದ್ದಾಗ ಬ್ರಿಟಿಷ್ ಹಿತಾಸಕ್ತಿಗಳ ಸ್ವಾಮ್ಯತೆಯಲ್ಲಿದ್ದ ಕೈಗಾರಿಕಾ ತಯಾರಕರಿಂದ ತಮ್ಮ ಉಡುಪುಗಳನ್ನು ಆಗಾಗ್ಗೆ ಖರೀದಿಸುತ್ತಿದ್ದರು. ಭಾರತೀಯರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿ ದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಪೆಟ್ಟು ನೀಡಬಹುದೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ, ನೂಲುವ ರಾಟೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಧ್ವಜದಲ್ಲಿ ಅಳವಡಿಸಲಾಯಿತು. ಆ ನಂತರ, ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನವುದ್ದಕ್ಕೂ ಧೋತಿಯನ್ನು ಉಡುತ್ತಿದ್ದರು.

ಧರ್ಮಶ್ರದ್ಧೆ

ಗಾಂಧಿ ಸ್ಮೃತಿ (ನವ ದೆಹಲಿಯಲ್ಲಿ ಗಾಂಧಿಯವರು ತಮ್ಮ ಕೊನೆಯ 4 ನಾಲ್ಕು ತಿಂಗಳುಗಳು ಉಳಿದುಕೊಂಡಿದ್ದ ಮನೆಯು ಈಗ ಸ್ಮಾರಕವಾಗಿದೆ)

  • ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನವುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು:
ನನಗೆ ತಿಳಿದಿರುವಂತೆ ಹಿಂದೂ ಧರ್ಮವು ನನ್ನ ಆತ್ಮಕ್ಕೆ ತೃಪ್ತಿ ನೀಡಿ, ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ...ಸಂಶಯಗಳು ನನ್ನನ್ನು ಕಾಡಿದಾಗ, ನಿರಾಶೆಗಳು ನನ್ನತ್ತ ದುರುಗುಟ್ಟಿ ನೋಡಿದಾಗ ಮತ್ತು ಕ್ಷಿತಿಜದಲ್ಲಿ ಬೆಳಕಿನ ಒಂದೇ ಒಂದು ಕಿರಣವನ್ನೂ ನಾನು ಕಾಣದಾದಾಗ, ನಾನು ಭಗವದ್ಗೀತೆ ಯ ಮೊರೆ ಹೋಗಿ, ನನಗೆ ಸಾಂತ್ವನ ನೀಡುವ ಒಂದು ಪಂಕ್ತಿಯನ್ನು ಕಂಡು, ತಡೆಯಲಾಗದಂತಹ ದುಃಖದ ನಡುವೆಯೂ ಮುಗುಳ್ನಗಲಾರಂಭಿಸುವೆ. ನನ್ನ ಜೀವನದ ತುಂಬ ದುರಂತಗಳೇ ತುಂಬಿಕೊಂಡಿವೆ. ಒಂದು ವೇಳೆ ಗೋಚರಿಸುವ ಮತ್ತು ಅಳಿಸಲಾಗದ ಯಾವುದೇ ಪರಿಣಾಮವನ್ನು ನನ್ನಲ್ಲಿ ಅವು ಉಳಿಸಿಲ್ಲವಾದಲ್ಲಿ ಅದಕ್ಕೆ ಭಗವದ್ಗೀತೆಯಲ್ಲಿನ ಉಪದೇಶಗಳೇ ಕಾರಣ."
  • ಗಾಂಧಿಯವರು ಭಗವದ್ಗೀತೆ ಯ ಕುರಿತು ಗುಜರಾತಿಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದರು. ಗುಜರಾತಿ ಭಾಷೆಯಲ್ಲಿದ್ದ ಹಸ್ತಪ್ರತಿಯನ್ನು ಮಹದೇವ್ ದೇಸಾಯಿಯವರು ಆಂಗ್ಲಭಾಷೆ‌ಗೆ ಭಾಷಾಂತರಿಸಿ ಹೆಚ್ಚುವರಿ ಪ್ರಸ್ತಾವನೆ ಮತ್ತು ವ್ಯಾಖ್ಯಾನಗಳನ್ನು ಸೇರಿಸಿದರು. ಗಾಂಧಿಯವರ ಮುನ್ನುಡಿಯೊಂದಿಗೆ ಅದು ೧೯೪೬ರಲ್ಲಿ ಪ್ರಕಟಗೊಂಡಿತು.[೫೧][೫೨]
  • ಪ್ರತಿಯೊಂದು ಧರ್ಮದ ತಿರುಳಲ್ಲಿಯೂ ಸತ್ಯ ಮತ್ತು ಪ್ರೀತಿ (ಸಹಾನುಭೂತಿ, ಅಹಿಂಸೆ ಮತ್ತು ಸನ್ಮಾರ್ಗ ಸೂತ್ರ) ಇರುತ್ತವೆಂದು ಗಾಂಧಿಯವರು ನಂಬಿದ್ದರು. ತಮ್ಮ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳಲ್ಲಿನ ಆಷಾಢಭೂತಿತನ, ದುರಾಚಾರ ಹಾಗೂ ಮತತತ್ವಗಳನ್ನು ಅವರು ಪ್ರಶ್ನಿಸಿದರು ಮತ್ತು ಧರ್ಮದಲ್ಲಿನ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿ ಅವರು ಓರ್ವ ದಣಿವರಿಯದ ಸಮರ್ಥಕರಾಗಿದ್ದರು. ವಿವಿಧ ಧರ್ಮಗಳ ಬಗ್ಗೆ ಅವರ ಕೆಲ ಟಿಪ್ಪಣಿಗಳು ಹೀಗಿವೆ:
"ನಾನು ಕ್ರೈಸ್ತ ಧರ್ಮವನ್ನು ಪರಿಪೂರ್ಣವೆಂದಾಗಲೀ ಅಥವಾ ಮಹೋನ್ನತ ಧರ್ಮವೆಂದಾಗಲೀ ಒಪ್ಪಲು ಸಾಧ್ಯವಾಗದಿದ್ದಲ್ಲಿ, ಅದೇ ರೀತಿಯಲ್ಲಿ ಹಿಂದೂ ಧರ್ಮವೂ ನನ್ನ ಮನವೊಪ್ಪಿಸಲಾರದು.ಹಿಂದೂ ಧರ್ಮದಲ್ಲಿನ ದೋಷಗಳು ತುರ್ತಾಗಿ ನನಗೆ ಎದ್ದು ಕಾಣುತ್ತಿದ್ದವು. ಅಸ್ಪೃಶ್ಯತೆಯು ಹಿಂದೂ ಧರ್ಮದ ಒಂದು ಭಾಗವಾಗಿರಬಹುದಾಗಿದ್ದಲ್ಲಿ ಅದೊಂದು ಕೊಳೆತ ಭಾಗ ಅಥವಾ ದುರ್ಮಾಂಸವಾಗಿರಬಹುದು. ಒಳಪಂಗಡ ಮತ್ತು ಜಾತಿಗಳ ಬಾಹುಳ್ಯದ ಮೂಲೋದ್ದೇಶ ವನ್ನು ನನಗೆ ಅರ್ಥಮಾಡಿಕೊಳ್ಳಲಾಗಿಲ್ಲ. ವೇದಗಳು ದೇವರ ಸ್ಪೂರ್ತಿಯುತ ವಚನಗಳು ಎಂದು ಹೇಳುವುದರ ಅರ್ಥವೇನಿತ್ತು? ಒಂದು ವೇಳೆ ಪ್ರೇರಿತವಾಗಿದ್ದಲ್ಲಿ, ಬೈಬಲ್‌ ಮತ್ತು ಕೊರಾನ್ ಸಹ ಯಾಕಾಗಿರಬಾರದು? ಕ್ರಿಶ್ಚಿಯನ್ ಸ್ನೇಹಿತರಂತೆಯೇ ಮುಸ್ಲಿಮ್‌ ಸ್ನೇಹಿತರೂ ಸಹ ನನ್ನನ್ನು ಮತಾಂತರಗೊಳಿಸಲು ಯತ್ನಿಸಿದರು. ಇಸ್ಲಾಮ್‌ ಧರ್ಮವನ್ನು ಅಧ್ಯಯನ ಮಾಡಲು ಅಬ್ದುಲ್ಲಾ ಸೇಠ್‌ ನನಗೆ ಒತ್ತಾಯಿಸುತ್ತಲೇ ಇರುತ್ತಿದ್ದ ಮತ್ತು ಅದರ ವಿಶಿಷ್ಟ ಗುಣಗಳ ಬಗ್ಗೆ ಹೇಳಲು ಅವನ ಬಳಿ ಏನಾದರೊಂದು ಇರುತ್ತಿತ್ತು." (ಮೂಲ: ಅವರ ಆತ್ಮಚರಿತ್ರೆ)
ಸಪ್ತ ಪಾತಕಗಳು
  • ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಗಾಂಧಿಜೀಯವರು ಅವುಗಳನ್ನು ಪರಿಹರಿಸಲು ಸಪ್ತಪಾತಕಗಳಿಂದ ದೂರವಿರಬೇಕೆಂದು ಹೇಳದ್ದರು. ಆ ಸಪ್ತ ಪಾತಕಗಳು ಇಂತಿವೆ.
  1. ತತ್ವ ರಹಿತ ರಾಜಕಾರಣ,
  2. ದುಡಿಮೆ ಇಲ್ಲದ ಸಂಪತ್ತು,
  3. ಆತ್ಮಸಾಕ್ಷಿ ಇಲ್ಲದ ಸಂತೋಷ,
  4. ಚಾರಿತ್ರ್ಯವಿಲ್ಲದ ಶಿಕ್ಷಣ,
  5. ನೀತಿ ಇಲ್ಲದ ವ್ಯಾಪಾರ,
  6. ಮಾನವೀಯತೆ ಇಲ್ಲದ ಜ್ಞಾನ,
  7. ತ್ಯಾಗವಿಲ್ಲದ ಪೂಜೆ.
  • ಈಗ ಇದಕ್ಕೆ ತದ್ವಿರುದ್ಧವಾದ ಕ್ರಿಯೆಗಳು ನೆದೆಯುತ್ತಿವೆಯೆಂಬ ದೂರಿದೆ , ಅದನ್ನು ತಿದ್ದಿ ಸರಿಪಡಿಸುವ ಕಾಲ ನಾಯಕತ್ವ ಈ ದೇಶಕ್ಕೆ ಬರಬಹುದೆಂದು ಸಜ್ಜನರ ಆಸೆ.
(ಸಂಗತ: ಪ್ರಜಾವಾಣಿ 12-12-2014)
"ನಾವು ನೈತಿಕ ಆಧಾರವನ್ನು ಕಳೆದುಕೊಂಡಕೂಡಲೇ ನಮ್ಮ ಧಾರ್ಮಿಕತೆ ಕೊನೆಗೊಂಡಂತೆಯೇ."ನೈತಿಕತೆಯನ್ನು ಮೀರಿಸುವಂಥಾದ್ದು ಧರ್ಮದಲ್ಲಿ ಏನೂ ಇಲ್ಲ. ಉದಾ
ಹರಣೆಗೆ, ಮಾನವನು ಸುಳ್ಳನಾಗಿ, ಕ್ರೂರಿಯಾಗಿ ಅಥವಾ ಅಸಂಯಮಿಯಾಗಿದ್ದುಕೊಂಡು, ದೇವರು ತನ್ನೊಂದಿಗಿದ್ದಾನೆಂದು ಹೇಳಿಕೊಳ್ಳಲಾಗದು."
"ಮಹಮ್ಮದ್‌ರ ನುಡಿಗಳು ಕೇವಲ ಮುಸ್ಲಿಮರಿಗೆ ಮಾತ್ರವೇ ಅಲ್ಲದೇ ಇಡೀ ಮಾನವ ಕುಲಕ್ಕೇ ಬುದ್ಧಿವಂತಿಕೆಯ ನಿಧಿಯಾಗಿವೆ."
"ನಿಮ್ಮ ಕ್ರಿಸ್ತನನ್ನು ನಾನು ಇಷ್ಟಪಡುವೆ, ಆದರೆ ನಿಮ್ಮ ಕ್ರಿಶ್ಚಿಯನ್ನರನ್ನು ನಾನು ಇಷ್ಟಪಡುವುದಿಲ್ಲ."
ಅವರ ಜೀವನದ ಆ ನಂತರದ ಹಂತದಲ್ಲಿ, ತಾವು ಹಿಂದೂ ಧರ್ಮದವರೇ ಎಂದು ಅವರನ್ನು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ:
"ಹೌದು. ನಾನೊಬ್ಬ ಹಿಂದು. ನಾನು ಒಬ್ಬ ಕ್ರೈಸ್ತ, ಒಬ್ಬ ಮುಸ್ಲಿಮ್‌, ಒಬ್ಬ ಬೌದ್ಧ ಮತ್ತು ಒಬ್ಬ ಯಹೂದಿ ಸಹ." ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ)
ಪರಸ್ಪರ ಗೌರವಾದರವಿದ್ದರೂ ಸಹ, ಗಾಂಧಿಯವರು ಮತ್ತು ರವೀಂದ್ರನಾಥ್ ಟ್ಯಾಗೂರ್‌ರು ಒಂದಕ್ಕಿಂತಲೂ ಹೆಚ್ವು ಬಾರಿ ಸುದೀರ್ಘ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಈ ಚರ್ಚೆಗಳು ಅಂದಿನ ಇಬ್ಬರು ಅತ್ಯಂತ ಪ್ರಖ್ಯಾತ ಭಾರತೀಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಉದಾಹರಣೆಯಾಗಿವೆ. ೧೯೩೪ರ ಜನವರಿ ೧೫ರಂದು ಬಿಹಾರದಲ್ಲಿ ಭೂಕಂಪವೊಂದು ಸಂಭವಿಸಿ ಬೃಹತ್ ಪ್ರಮಾಣದ ನಷ್ಟ ಹಾಗೂ ಪ್ರಾಣಹಾನಿಯನ್ನು ಉಂಟುಮಾಡಿತು. ಅಸ್ಪೃಶ್ಯರನ್ನು ತಮ್ಮ ದೇವಾಲಯಗಳೊಳಗೆ ಬಿಟ್ಟುಕೊಳ್ಳದಿರುವ ಮೂಲಕ ಮೇಲು ಜಾತಿಯ ಹಿಂದೂಗಳು ಮಾಡಿದ ಪಾಪದ ಫಲವಿದು ಎಂದು ಗಾಂಧಿಯವರು ಇದನ್ನು ಸಮರ್ಥಿಸಿದರು (ಅಸ್ಪೃಶ್ಯರನ್ನು ಹರಿಜನರು, ಕೃಷ್ಣನ ಜನರು ಎಂದು ಉಲ್ಲೇಖಿಸುವ ಮೂಲಕ ಅಸ್ಪೃಶ್ಯರ ಭವಿತವ್ಯವನ್ನು ಸುಧಾರಿಸುವ ಉದ್ದೇಶಕ್ಕೆ ಗಾಂಧಿಯವರು ಬದ್ಧರಾಗಿದ್ದರು). ಅಸ್ಪೃಶ್ಯತೆಯ ಪದ್ಧತಿಯು ಅದೆಷ್ಟೇ ಅಸಂಗತವಾಗಿರಲಿ, ಭೂಕಂಪವು ಕೇವಲ ನೈಸರ್ಗಿಕ ಶಕ್ತಿಗಳಿಂದ ಮಾತ್ರ ಆಗಬಲ್ಲದೇ ಹೊರತು, ನೈತಿಕತೆಯ ಕಾರಣಗಳಿಂದಲ್ಲ ಎಂದು ಹೇಳಿದ ಟ್ಯಾಗೂರ್‌ರು ಗಾಂಧಿಯವರ ನಿಲುವನ್ನು ಭಾವೋದ್ವೇಗದಿಂದ ವಿರೋಧಿಸಿದರು.[೫೩]

************************************************


ಮಹಾತ್ಮ ಗಾಂಧಿ
ಮೋಹನ್ ದಾಸ್ ಕರಮ್‍ಚಂದ್ ಗಾಂಧಿ (ಅಕ್ಟೋಬರ್ ೨, ೧೮೬೯ಜನವರಿ ೩೦, ೧೯೪೮), ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ.

ಪ್ರಾರಂಭಿಕ ಜೀವನ

ಮೋಹನದಾಸ್ ಕರಮ್‍ಚಂದ್ ಗಾಂಧಿಯವರು ಅಕ್ಟೋಬರ್ ೨, ೧೮೬೯ ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಆಗಿನ ಪೋರಬಂದರಿನ ದಿವಾನರಾಗಿದ್ದ ಕರಮ್ಚಂದ್ ಗಾಂಧಿ ಇವರ ತಂದೆ, ಮತ್ತು ತಾಯಿ ಪುತಲೀಬಾಯಿ. ೧೩ ನೆಯ ವಯಸ್ಸಿನಲ್ಲಿ ಗಾಂಧೀಜಿ ಅದೇ ವಯಸ್ಸಿನ ಕಸ್ತೂರ್ಬಾ ರನ್ನು ವಿವಾಹಗೊಂಡರು. ನಂತರ ಇವರಿಗೆ ನಾಲ್ಕು ಮಕ್ಕಳು: ಹರಿಲಾಲ್ ಗಾಂಧಿ (ಜ: ೧೮೮೮), ಮಣಿಲಾಲ್ ಗಾಂಧಿ (ಜ: ೧೮೯೨), ರಾಮದಾಸ್ ಗಾಂಧಿ (ಜ: ೧೮೯೭) ಮತ್ತು ದೇವದಾಸ್ ಗಾಂಧಿ (ಜ: ೧೯೦೦). ೧೯ ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತು ಪಡೆಯಲು ತೆರಳಿದರು. ಭಾರತಕ್ಕೆ ಮರಳಿದ ನಂತರ ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಹೆಚ್ಚು ಯಶಸ್ಸು ಕಾಣದಿದ್ದರೂ, ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಕ್ಕೆ ಕೆಲಸದ ಮೇಲೆ ತೆರಳಿದರು. ಅಲ್ಲಿ ಭಾರತೀಯ ಮೂಲದ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ ೬, ೧೯೧೩ ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ೧೯೧೦ರಲ್ಲಿ ಟಾಲ್‍ಸ್ಟಾಯ್ ಅವರ ನಿಧನದವರೆಗೂ ಗಾಂಧೀಜಿ ಅವರೊಂದಿಗೆ ಪತ್ರವ್ಯವಹಾರವನ್ನು ಇಟ್ಟುಕೊಂಡಿದ್ದರು. ಟಾಲ್‍ಸ್ಟಾಯ್ ಅವರು ೧೯೦೮ರಲ್ಲಿ ಭಾರತದ ತೀವ್ರವಾದಿ ಸ್ವಾತಂತ್ರ್ಯಹೋರಾಟಗಾರರಿಗೆ ಬರೆದ ಪತ್ರವನ್ನು (ಹಿಂದೂ ಮಿತ್ರನಿಗೊಂದು ಪತ್ರ) ಗಾಂಧೀಜಿಯವರೇ ಭಾಷಾಂತರಿಸಿದರು. ಈ ಪತ್ರದಲ್ಲಿ ಟಾಲ್‍ಸ್ಟಾಯ್ ಅವರು ವೇದಗಳಲ್ಲಿನ ಹಿಂದೂ ತತ್ವಶಾಸ್ತ್ರ ಮತ್ತು ಕೃಷ್ಣನ ಕಥೆಗಳ ಮೂಲಕ ಅಂದಿನ ಭಾರತೀಯ ರಾಷ್ಟ್ರೀಯವಾದದ ಬಗೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಗಾಂಧೀಜಿಯವರು ಅಮೆರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.

ಭಾರತೀಯ ಸ್ವಾತಂತ್ರ್ಯ ಚಳುವಳಿ

ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. ಅಮೃತಸರದಲ್ಲಿ ೧೯೨೦ ರಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ ೧೨, ೧೯೩೦ ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ೧೯೩೧ ರಲ್ಲಿ ಇಂಗ್ಲೆಂಡಿಗೆ ಒಮ್ಮೆ ಭೇಟಿಯಿತ್ತರು. ಮೇ ೮, ೧೯೩೩ ರಂದು ಆರಂಭಗೊಂಡು ೨೧ ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ವ್ರತವನ್ನು ನಡೆಸಿದರು. ಮಾರ್ಚ್ ೩, ೧೯೩೯ ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.

ಎರಡನೆ ಮಹಾಯುದ್ಧ

೧೯೩೯ ರಲ್ಲಿ ಜರ್ಮನಿ ಪೋಲೆಂಡ್ ದೇಶವನ್ನು ಆಕ್ರಮಿಸಿಕೊಂಡಾಗ ಎರಡನೆ ಮಹಾಯುದ್ಧ ಆರಂಭವಾಯಿತು. ಹಿಟ್ಲರನ ತುಳಿತಕ್ಕೆ ಒಳಗಾದ ಜನರಿಗೆ ಸಾಂತ್ವನವನ್ನು ಗಾಂಧೀಜಿ ವ್ಯಕ್ತಪಡಿಸಿದರು. ಆದರೆ ಬ್ರಿಟಿಷರು ಭಾರತೀಯರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವಾಗ ಅವರ ಪರವಾಗಿಯೇ ಹೋರಾಡುವುದರಲ್ಲಿ ಗಾಂಧೀಜಿಯವರು ಅರ್ಥ ಕಾಣಲಿಲ್ಲ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾದಲ್ಲಿ ಅವರ ಸಹಾಯಕ್ಕೆ ತಾವು ನಿಲ್ಲುವುದಾಗಿ ತಿಳಿಸಿದರು. ಆದರೆ ಇದಕ್ಕೆ ಬ್ರಿಟಿಷರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಇದೇ ಕಾಲದಲ್ಲಿಯೇ ಸ್ವಾತಂತ್ರ್ಯ ಚಳುವಳಿಯು ಇನ್ನೂ ತೀವ್ರಗೊಂಡು “ಭಾರತ ಬಿಟ್ಟು ತೊಲಗಿರಿ” ಚಳುವಳಿ ೧೯೪೨ ರಲ್ಲಿ ಆರಂಭವಾಯಿತು. ಆಗಸ್ಟ್ ೯, ೧೯೪೨ ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿದರು.

ಭಾರತದ ವಿಭಜನೆ ಮತ್ತು ಹತ್ಯೆ

ಭಾರತದ ಸ್ವಾತಂತ್ರ್ಯ ಸಮಯದಲ್ಲಿ ಭಾರತವನ್ನು ಎರಡು ದೇಶಗಳಾಗಿ ಒಡೆಯಬೇಕೆಂಬ ಪ್ರಸ್ತಾಪ ಬಂದಿತು. ಈ ಪ್ರಸ್ತಾಪಕ್ಕೆ ಗಾಂಧೀಜಿ ವಿರುದ್ಧವಾಗಿದ್ದರೂ ಭಾರತವನ್ನು ಜಾತ್ಯತೀತ ಭಾರತ ಮತ್ತು ಮುಸ್ಲಿಮ್ ದೇಶವಾದ ಪಾಕಿಸ್ತಾನವಾಗಿ ಒಡೆಯಲಾಯಿತು. ಸ್ವಾತಂತ್ರ್ಯ ದಿನದಂದು ಗಾಂಧೀಜಿ ಮಿಕ್ಕೆಲ್ಲರಂತೆ ಸಮಾರಂಭದಲ್ಲಿ ಉಪಸ್ಥಿತರಾಗಲಿಲ್ಲ. ಭಾರತದ ಬೇರ್ಪಡೆಯ ಬಗ್ಗೆ ಶೋಕಾಚರಣೆ ನಡೆಸಿದರು. ಜನವರಿ ೩೦ ರಂದು, ನಾಥೂರಾಮ್ ಗೋಡ್ಸೆ ಎಂಬ ಹಿಂದೂ ತೀವ್ರವಾದಿ, ಪಾಕಿಸ್ತಾನಕ್ಕೆ ೫೫ ಕೋಟಿ ರೂಪಾಯಿಗಳ ಮೊತ್ತವನ್ನು ಭಾರತ ಸಂದಾಯಿಸಬೇಕೆಂದು ಗಾಂಧೀಜಿ ಒತ್ತಾಯಿಸಿದ್ದಕ್ಕಾಗಿ ಅವರನ್ನು ದೂಷಿಸಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದನು. ಗಾಂಧೀಜಿಯವರ ಕೊನೆಯ ಮಾತುಗಳು “ಹೇ ರಾಮ್!”. ನಂತರ ನಾಥೂರಾಮ್ ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು.

ತತ್ವಗಳು

ಗಾಂಧೀಜಿಯವರ ತತ್ವಗಳು ಭಗವದ್ಗೀತೆ ಮತ್ತು ಜೈನ ಧರ್ಮದಿಂದ ರೂಪುಗೊಂಡಂಥವು. ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ತಮ್ಮ ಆತ್ಮಚರಿತ್ರೆಯಾದ ಸತ್ಯದೊಂದಿಗೆ ನನ್ನ ಪ್ರಯೋಗಗಳು ಪುಸ್ತಕದಲ್ಲಿ ಗಾಂಧಿಜಿ ತಮ್ಮ ತತ್ವಗಳನ್ನು ವಿಶದವಾಗಿ ವಿವರಿಸಿದ್ದಾರೆ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. ೩೬ ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು.ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ.

ನೊಬೆಲ್ ಪ್ರಶಸ್ತಿ

ಶಾಂತಿಗಾಗಿ ಕೊಡಲ್ಪಡುವ ನೊಬೆಲ್ ಬಹುಮಾನ ಗಾಂಧೀಜಿಯವರಿಗೆ ಎಂದಿಗೂ ಲಭಿಸಲಿಲ್ಲ. ೧೯೩೭ ಮತ್ತು ೧೯೪೮ ರ ನಡುವೆ ಗಾಂಧೀಜಿಯವರು ಈ ಪ್ರಶಸ್ತಿಗಾಗಿ ಐದು ಬಾರಿ ಪರಿಗಣಿತರಾಗಿದ್ದರು. ೧೯೮೯ ರಲ್ಲಿ ದಲಾಯ್ ಲಾಮಾ ಅವರಿಗೆ ನೊಬೆಲ್ ಬಹುಮಾನವನ್ನು ಕೊಟ್ಟಾಗ ನೊಬೆಲ್ ಪ್ರಶಸ್ತಿ ಸಮಿತಿಯವರು ಗಾಂಧೀಜಿಯವರಿಗೆ ಈ ಪ್ರಶಸ್ತಿ ಕೊಡದ್ದಕ್ಕಾಗಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಲ್ಲದೆ ದಲಾಯ್ ಲಾಮಾ ಅವರಿಗೆ ಕೊಟ್ಟ ಪ್ರಶಸ್ತಿ ಭಾಗಶಃ ಗಾಂಧೀಜಿಯವರ ಸ್ಮರಣೆಗಾಗಿ ಎಂದು ಘೋಷಿಸಿದರು.

ಸಂಬಂಧಪಟ್ಟ ಲೇಖನಗಳು

ಬಾಹ್ಯ ಸಂಪರ್ಕಗಳು