ನೀತಿಕಥೆಗಳು

ದುರಾಸೆಯ ದಾರಿಹೋಕ

           ಬೋಧಿಸತ್ವನ ಅನೇಕ ಅವತಾರಗಳಲ್ಲಿ, ಬ್ರಹ್ಮದತ್ತ ಎಂಬ ಚಂದಿರನಂತೆ ಹೊಳೆವ ಬಿಳಿ ಬಣ್ಣದ ಆನೆಯೂ ಒಂದು. ತನ್ನ ಸಹಪಾಟಿ ಆನೆಗಳು ಮರವನ್ನು ಮುರಿಯುವುದು, ಇತರ ಪ್ರಾಣಿಗಳನ್ನು ಹಿಂಸಿಸುವುದು ಮುಂತಾದ ಕಾರ್ಯಗಳನ್ನು ಮಾಡುತಿದ್ದರೆ, ಬ್ರಹ್ಮದತ್ತ ಮಾತ್ರ ಯಾರಿಗೂ ತೊಂದರೆ ಕೊಡದೆ, ಬದಲಿಗೆ ಎಲ್ಲರಿಗೂ ತನ್ನ ಕೈಲಾದ ಸಹಾಯ ಮಾಡುತ್ತಾ ಬದುಕುತಿತ್ತು.
       ಒಮ್ಮೆ ದಾರಿಹೋಕನೊಬ್ಬ ಬ್ರಹ್ಮದತ್ತನಿದ್ದ ಕಾಡನ್ನು ದಾಟಬೇಕಾಗಿತ್ತು. ಕಾಡನ್ನು ದಾಟುವಾಗ ದಾರಿ ತಪ್ಪಿದ ದಾರಿಹೋಕ, ಭಯಭೀತನಾಗಿ ದಾರಿ ಹುಡುಕುತಿದ್ದಾಗ, ಬ್ರಹ್ಮದತ್ತ ಎದುರಿಗೆ ಬಂದ. ಬ್ರಹ್ಮದತ್ತನನ್ನು ಕಂಡ ದಾರಿಹೋಕ, ಎದ್ನೋ ಬಿದ್ನೋ ಎಂದು ಓಡಲು ಆರಂಭಿಸಿದ. ಬ್ರಹ್ಮದತ್ತ ಕೂಡಾ ದಾರಿಹೋಕನನ್ನು ಹಿಂಬಾಲಿಸಿದ.
ಸ್ವಲ್ಪ ಹೊತ್ತಿಗೆ ಅನೆ ತನ್ನನ್ನು ಅಟ್ಟಿಸಿಕೊಂಡು ಬರುತ್ತಿಲ್ಲ ಬದಲಿಗೆ ಹಿಂಬಾಲಿಸುತ್ತಿದೆ ಎಂಬುದು ದಾರಿಹೋಕನ ಅರಿವಿಗೆ ಬಂತು. ಪರೀಕ್ಷಿಸಲು ದಾರಿಹೋಕ ನಿಂತ, ಆನೆ ಕೂಡಾ ನಿಂತಿತು. ದಾರಿಹೋಕ ನಡೆದರೆ ಅನೆ ಕೂಡಾ ನಡೆಯಲಾರಂಭಿಸಿತು. ಕೊನೆಗೆ ಧೈರ್ಯ ಮಾಡಿ ದಾರಿಹೋಕ ಆನೆಗೆ ಎದುರಾಗಿ ನಿಂತ. ಅವನ ಆಶ್ಚರ್ಯಕ್ಕೆ ಪಾರವೇ ಇಲ್ಲದಂತೆ, ಆನೆ ಮಾತಾಡಿತು.
“ನೀನು ಹೆದರಿರುವಂತಿದೆ, ನನ್ನಿಂದ ಏನಾದರೂ ಸಹಾಯ ಬೇಕೇ?” ಎಂದು ಆನೆ ಕೇಳಿತು.
ದಾರಿಹೋಕ, “ಈ ಕಾಡಿನಲ್ಲಿ ನನ್ನ ದಾರಿ ತಪ್ಪಿದೆ, ನಾನು ಕಾಶಿಗೆ ಹೋಗಬೇಕಾಗಿದೆ”, ಎಂದನು.
“ನನ್ನ ಜೊತೆ ನನ್ನ ಮನೆಗೆ ಬಂದು ವಿಶ್ರಾಂತಿ ತೆಗೆದುಕೋ, ನಂತರ ನಾನು ನಿನ್ನ ಕಾಶಿಯ ದಾರಿಯನ್ನು ತೋರಿಸುವೆ”, ಎಂದಿತು ಬಿಳಿ ಆನೆ.
        ಅನೆ ತನ್ನ ಗುಹೆಯಲ್ಲಿ ದಾರಿಹೊಕನಿಗೆ ಹಣ್ಣು ಹಂಪಲು ಗಳನ್ನೂ ಇತ್ತು, ಆತನ ಉಟವಾದ ಮೇಲೆ ಮಲಗಲು ಏರ್ಪಾಟು ಮಾಡಿಕೊಟ್ಟಿತು. ಸ್ವಲ್ಪ ದಿನ ಆನೆಯ ಗುಹೆಯಲ್ಲಿ ವಾಸವಾಗಿದ್ದು, ನಂತರ ನಾನು ವಾರಣಾಸಿಗೆ ಹೋರಾಡಬೇಕು ಎಂದು ಹೇಳಿದಾಗ, ಆನೆ ತನ್ನ ಬೆನ್ನ ಮೇಲೆ ಆತನನ್ನು ಕೂರಿಸಿಕೊಂಡು, ವಾರಣಾಸಿಯ ದಾರಿಯ ತನಕ ಕರೆದೊಯ್ದು ದಾರಿಹೋಕನನ್ನು ಬೀಳ್ಕೊಟ್ಟಿತು.ದಾರಿಹೋಕ ಆನೆಯ ಬೆನ್ನ ಮೇಲೆ ಸವಾರಿ ಮಾಡುತ್ತಾ, ಆನೆಯ ಗುಹೆಯ ಮಾರ್ಗವನ್ನು ಮನಸ್ಸಿನಲ್ಲಿ ಗುರುತು ಹಾಕಿಕೊಂಡಿದ್ದ. ಆನೆಗೆ ಧನ್ಯವಾದಗಳನ್ನು ತಿಳಿಸುತ್ತ ಹೊರಡಲು ಅನುವಾದಾಗ, ಆನೆ, “ನನ್ನ ಇರುವನ್ನು ಬೇರೆ ಯಾರಿಗೂ ತಿಳಿಸಬೇಡ” ಎಂದು ಕೇಳಿಕೊಂಡಿತು. ಆಗಲಿ ಎಂದು ದಾರಿಹೋಕ ವಾರಣಾಸಿಯ ದಾರಿ ಹಿಡಿದ.
ವಾರಣಾಸಿಯಲ್ಲಿ ದಾರಿಹೋಕ ಒಮ್ಮೆ ದಂತದ ವ್ಯಾಪಾರಿಯೊಬ್ಬನನ್ನು ಭೇಟಿಯಾಗಬೇಕಾದ ಪ್ರಸಂಗ ಒದಗಿತು.ಮಾತು ಮಾತಿನಲ್ಲಿ ದಂತದ ಬೆಲೆಯನ್ನು ಅರಿತ ದಾರಿಹೋಕ, ವ್ಯಾಪರಿಯನ್ನು, ಜೀವಂತ ಆನೆಯ ದಂತಕ್ಕೆ ಎಷ್ಟು ಬೆಲೆ, ಎಂದು ಕೇಳಿದಾಗ, ವ್ಯಾಪಾರಿಯು, ಜೀವಂತ ಆನೆಯ ದಂತ ಸತ್ತ ಆನೆಯ ದಂತಕ್ಕಿಂತ ಹೆಚ್ಚು ಬೆಲೆಬಾಳುತ್ತದೆ ಎಂದು ಉತ್ತರಿಸಿದನು.
ಆ ರಾತ್ರಿಯೆಲ್ಲಾ ದಾರಿಹೊಕನಿಗೆ ನಿದ್ದೆ ಬರಲಿಲ್ಲ, ಬರಿ ಆನೆಯ ದಂತ, ಹಾಗು ಅದನ್ನು ಮಾರಿದರೆ ಬರುವ ಹಣ, ಹಣದಿಂದ ತಾನು ಕೊಳ್ಳಬಹುದಾದ ವಸ್ತುಗಳು, ಇವು ಆತನ ಮನಸ್ಸಿನಲ್ಲಿ ಕೊರೆಯಲಾರಂಭಿಸಿದವು. ಬೆಳಿಗ್ಗೆ ಎದ್ದವನೇ, ಗರಗಸವನ್ನು ತನ್ನ ಜೋಳಿಗೆಗೆ ಹಾಕಿಕೊಂಡು ಕಾಡಿನ ಹಾದಿ ಹಿಡಿದ.
          ದಾರಿಹೋಕನನ್ನು ಕಂಡ ಬ್ರಹ್ಮದತ್ತ, ಆಶ್ಚರ್ಯದಿಂದ, “ಏನಿಲ್ಲಿ ಮತ್ತೆ?” ಎಂದು ಕೇಳಿದಾಗ, ದಾರಿಹೋಕ, “ಏನು ಹೇಳಲಿ, ಮೈತುಂಬಾ ಸಾಲ, ನಿನ್ನಿಂದ ಸ್ವಲ್ಪ ಸಹಾಯ ವಾಗಬೇಕಲ್ಲಾ” ಎಂದು ಕೇಳಿಕೊಂಡನು
ಅದಕ್ಕೆ ಬ್ರಹ್ಮದತ್ತ, “ಏನು ಬೇಕಾಗಿತ್ತು?” ಎಂದು ಕೇಳಿದಾಗ,
ದಾರಿಹೋಕ, “ನಿನ್ನ ದಂತ ಒಂದು ಚೂರು ಬೇಕಾಗಿತ್ತು” ಎಂದು ಕೇಳುತ್ತಾನೆ.
ಅದಕ್ಕುತ್ತರವಾಗಿ ಬ್ರಹ್ಮದತ್ತ,”ನನಗೇನು ತೊಂದರೆಯಿಲ್ಲ, ಆದರೆ ನೀನೆ ನನ್ನ ದಂತವನ್ನು ಕತ್ತರಿಸಿ ಕೊಳ್ಳಬೇಕು” ಎಂದಾಗ, ದಾರಿಹೋಕ, “ಓಹೋ ನಾನಾಗಲೇ ಅದಕ್ಕೆ ಸಜ್ಜಾಗಿ ಬಂದಿದ್ದೇನೆ” ಎಂದು ಜೋಳಿಗೆಯಿಂದ ಗರಗಸವನ್ನು ತೆಗೆದು ಎರಡೂ ದಂತಗಳಿಂದ ಚೂರು ಭಾಗವನ್ನು ಕತ್ತರಿಸಿಕೊಂಡು, ವಾರಣಾಸಿಯ ದಾರಿ ಹಿಡಿಯಲು ಅನುವಾದ. ಆತ ಹೊರಡುವ ಮುನ್ನ ಆನೆ, “ಇದು ಬರಿ ದಂತದ ಚೂರಲ್ಲ, ಇದರಲ್ಲಿ ಸಮಸ್ತ ವಿವೇಕವೂ ಅಡಗಿದೆ”, ಎಂದು ಹೇಳಿ ಬೀಳ್ಕೊಟ್ಟಿತು.
ವಾರಣಾಸಿಯಲ್ಲಿ ದಂತವನ್ನು ಮಾರಿದಾಗ, ತಾನು ಎಣಿಸಿದ್ದಕ್ಕಿಂತ ಹೆಚ್ಚು ಹಣ ದೊರೆತಾಗ ಕುಶಿಯಾಗಿ, ತನಗೆ ಬೇಕಾದಂತೆ ಹಣವನ್ನು ಕರ್ಚು ಮಾಡಲಾರಂಭಿಸಿದ. ಕುಳಿತು ಉಣ್ಣುವವನಿಗೆ ಕುಡಿಕೆ ಹಣ ಸಾಲದು ಎಂಬಂತೆ, ದಾರಿಹೋಕ, ಕೆಲವು ದಿನಗಳಲ್ಲಿ ತನ್ನಲ್ಲಿದ್ದ ಹಣವನ್ನು ಕಳೆದುಕೊಂಡಿದ್ದ. ಆ ದಿನ ರಾತ್ರಿ ದಾರಿಹೂಕನಿಗೆ ಮತ್ತೆ ನಿದ್ರೆ ಬರಲಿಲ್ಲ, ದುರಾಸೆಯಿಂದ ಆನೆಯ ಉಳಿದ ದಂತವನ್ನು ಪಡೆಯುವ ಹಂಚಿಕೆ ಹೂಡಿದ. ಬೆಳಿಗ್ಗೆ ಎದ್ದು ಕಾಡಿನ ಹಾದಿ ಹಿಡಿದ.
       ದಾರಿಹೋಕನನ್ನು ಕಂಡು ಬ್ರಹ್ಮದತ್ತ, ಮತ್ತೆ ಬರಲು ಕಾರಣ ಕೇಳಿತು. ದಾರಿಹೋಕ ಎಂದಿನಂತೆ, ತನ್ನ ಸಾಲದ ಮಾತನ್ನು ಮುಂದೊಡ್ಡಿ, ಆನೆಯ ಉಳಿದ ದಂತವನ್ನು ಬೇಡಿದ. ಅನೆ ಸಂತೋಷದಿಂದ, ತನ್ನ ದಂತವನ್ನು ದಾರಿಹೋಕನ ಗರಗಸಕ್ಕೆ ಒಡ್ಡಿಕೊಂಡಿತು. ಆನೆಗೆ ನೋವಾಗುತಿದ್ದರೂ, ಕೊಂಚವೂ ದಂತವನ್ನು ಬಿಡದಂತೆ, ಅದರ ಬುಡದವರೆಗೆ ಕತ್ತರಿಸಿದ. ಇನ್ನು ಕೊಡಲು ಏನೂ ಇಲ್ಲದ ಅನೆಯಿಂದ ತನಗೇನೂ ಲಾಭವಿಲ್ಲದುದನ್ನು ಅರಿತು, ನೋವಿನಿಂದ ಮಲಗಿದ್ದ ಆನೆಗೆ ಧನ್ಯವಾದ ಕೂಡಾ ಹೇಳದೆ ಮನೆಯ ಹಾದಿ ಹಿಡಿದ.
          ಆದರೆ, ದಾರಿಹೋಕನ ಸಂತೋಷ ಹೆಚ್ಚು ಕ್ಷಣ ಉಳಿಯಲಿಲ್ಲ. ಕಾಡಿನ ಹಾದಿಯಲ್ಲಿ, ಇದ್ದಕ್ಕಿದ್ದಂತೆ ಹರಡಿದ ಕಾಳ್ಗಿಚ್ಚಿನಲ್ಲಿ ಸಿಕ್ಕಿದ. ತಾನು ಮಾಡಿದ ಪಾಪ ಅರಿವಾದರೂ ಸಮಯ ಮೀರಿದ್ದರಿಂದ ಕಾಳ್ಗಿಚ್ಚಿನಲ್ಲಿ ಸುಟ್ಟು ಭಸ್ಮವಾಗಿ ಹೋದ.
ಇತ್ತ ಬ್ರಹ್ಮದತ್ತ, ಕೆಲ ದಿವಸ ನೋವಿನಲ್ಲಿ ಕಳೆದು ನಂತರ ತನ್ನ ಎಂದಿನ ದೈನಂದಿನ ಜೀವನಕ್ಕೆ ಮರಳಿ ಸುಖವಾಗಿತ್ತು. 
 
 

ಏಡಿಮರಿ ಮತ್ತು ಅದರ ಅಮ್ಮ

    ಏಡಿಮರಿ ನಡಿಯುತ್ತಿರುವದನ್ನು ನೋಡಿ, “ಯಾಕೊ ಹಾಗೆ ಸೊಟ್ಟ ಕಾಲು ಹಾಕ್ಕೊಂಡು ಒಂದು ಪಕ್ಕಾ ವಾಲಿಕೊಂಡು ನಡಿತೀಯಾ, ಯಾವಾಗಲೂ ನೇರವಾಗಿ ಹೆಜ್ಜೆಹಾಕಬೇಕು ಕಾಲಿನ ಬೆರಳುಗಳನ್ನು ಹೊರಗೆ ಚಾಚಿರಬೇಕು” ಎಂದು ಅಮ್ಮ ಏಡಿ ತನ್ನ ಮಗನಿಗೆ ಬುದ್ದಿ ಹೇಳಿದಾಗ,
     "ಪ್ರೀತಿಯ ಅಮ್ಮ, ಹೇಗೆ ನಡೀಬೇಕು ಅಂತ ಸ್ವಲ್ಪ ತೋರಿಸ್ತಿಯಾ, ನಿನ್ನನ್ನು ನೋಡಿ ನಾನು ನಡೆಯುವುದನ್ನು ಕಲಿತುಕೊಳ್ಳುತ್ತೇನೆ” ಎಂದು ಏಡಿಮರಿ ಅಮ್ಮನಿಗೆ ಉತ್ತರಿಸಿತು.
       ಸರಿ ಎಂದು ಅಮ್ಮ ಏಡಿ ತಾನು ಹೇಳಿದಂತೆ ನೇರವಾಗಿ ನಡೆಯಲು ಪ್ರಯತ್ನಿಸಿತು, ಆದರೆ ಏನೂ ಪ್ರಯೊಜನವಾಗಲಿಲ್ಲ, ಮಗ ಏಡಿ ಹೇಗೆ ಒಂದು ಕಡೆ ವಾಲಿಕೊಂಡು ನಡೆದಾಡುತಿತ್ತೊ  ಹಾಗೆ ಅಮ್ಮ ಏಡಿ ಕೂಡ ನಡೆಯಿತು. ಅಮ್ಮ ಏಡಿ ಇನ್ನೂ ಮುಂದುವರೆಸಿ ತನ್ನ ಕಾಲ ಬೆರಳುಗಳನ್ನು ಹೊರಕ್ಕೆ ಚಾಚಲು ಪ್ರಯತ್ನಿಸಿ ಮಕಾಡೆ ಮುಗ್ಗರಿಸಿ ಬಿತ್ತು.
ನೀತಿ:  ಬೇರೆಯವರಿಗೆ ಬುದ್ದಿ ಹೇಳುವ ಮೊದಲು ಹೇಳಿದ್ದನ್ನು ಸ್ವತಃ ಮಾಡಿತೊರಿಸಬಲ್ಲ ಶಕ್ತಿಯಿರಬೇಕು
 

ತೋಳ ಮತ್ತು ಸಿಂಹ

ಕುರುಮರಿಯೊಂದನ್ನು ಕದ್ದ ತೋಳ, ಅದನ್ನು ಜೋಪಾನವಾಗಿ ತನ್ನ ಮನೆಗೆ ಕೊಂಡೊಯ್ದು ವಾರಗಟ್ಟಲೆ ತಿನ್ನಬಹುದೆಂದು ಯೊಚಿಸಿ, ಕುರಿಮರಿಯನ್ನು ಎಳೆದೊಯ್ಯುತಿದ್ದಾಗ ಮಾರ್ಗ ಮಧ್ಯದಲ್ಲಿ ಸಿಂಹವೊಂದು ಎದುರಾಗಿ ತೋಳನ ಯೊಚನೆಗಳೆಲ್ಲ ತಲಕೆಳಕಾಗಿಸಿತ್ತು. ಹಸಿದಿದ್ದ ಸಿಂಹ ಕಾರಣವನ್ನೇನೂ ಕೊಡದೆ ಕುರಿಮರಿಯನ್ನು ತೋಳನಿಂದ ಕಸಿದುಕೊಂಡು ತಿನ್ನಲಾರಂಭಿಸಿತು. ಹೆದರಿದ ತೊಳ ಸಿಂಹ ನಿಂದ ಸುಮಾರು ದೂರಸರಿದು, ಮುನಿಸಿಕೊಂಡ ದನಿಯಲ್ಲಿ, “ನನ್ನ ಆಸ್ತಿಯನ್ನು ಕಸಿದುಕೊಳ್ಳುವುದಕ್ಕೆ ನಿನಗೇನು ಹಕ್ಕಿರಲಿಲ್ಲ” ಎಂದಿತು. ಇದನ್ನು ಕೇಳಿದ ಸಿಂಹ ತೋಳನೆಡೆಗೆ ದುರುಗುಟ್ಟಿ ನೋಡಿತು, ಸರಿಯಾಗಿ ಬುದ್ದಿಕಲಿಸೋಣವೆಂದರೆ ತೋಳ ತುಂಬಾ ದೂರದಲ್ಲಿ ನಿಂತಿದ್ದರಿಂದ, ತೊಂದರೆತೆಗೆದುಕೊಳ್ಳದೆ ಅನಾಯಾಸವಾಗಿ ಹೇಳಿತು, “ಇದು ನಿನ್ನ ಆಸ್ತಿಯೆ? ನೀನೇನು ಇದನ್ನು ಕೊಂಡುಕೊಂಡೆಯಾ? ಅಥವಾ ರೈತ ನಿನಗೆ ಉಡುಗೊರೆಯಾಗಿ ನೀಡಿದನೇ? ಹೇಳಪ್ಪ ಹೇಳು ನಿನಗೆ ಈ ಆಸ್ತಿ ಹೇಗೆ ಸಿಕ್ಕಿತು ಎಂದು ಹೇಳು”. ತೋಳ ಮರುಮಾತಿಲ್ಲದೆ ತನ್ನ ಹಾದಿ ತಾನು ಹಿಡಿಯಿತು.
ನೀತಿ: ಮೋಸದಿಂದ ಸಿಕ್ಕಿದ್ದು ಮೋಸದಿಂದಲೇ ಹೋಯಿತು.
 

ಸಿಂಹದ ಪಾಲು

        ಒಮ್ಮೆ ಒಂದು ಸಿಂಹ, ನರಿ, ಗುಳ್ಳೆ ನರಿ ಹಾಗು ತೋಳದೊಡನೆ ಬೇಟೆಯಾಡಲು ಹೊರಟಿತು. ಬಹಳ ಹೊತ್ತಿನ ಹುಡುಕಾಟದ ನಂತರ, ಇವುಗಳ ಕಣ್ಣಿಗೆ ಜಿಂಕೆ ಯೊಂದು ಕಾಣಿಸಿತು. ಎಲ್ಲರು ಸೇರಿ ಜಿಂಕೆಯನ್ನು ಕೊಂದವು. ಸರಿ ಈಗ ಜಿಂಕೆಯ ಮಾಂಸದ ಪಾಲನ್ನು ಹೇಗೆ ವಿಂಗಡಿಸುವುದು ಎಂದು ಎಲ್ಲರೂ ಯೋಚಿಸುತಿದ್ದಾಗ, ಸಿಂಹ ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿ ಎಂದು ಗುಡುಗಿತು. ಇತರರಿಗೆ ಕುಶಿಯಾಯಿತು, ಎಲ್ಲರಿಗು ಒಂದೊಂದು ಪಾಲು ಸಿಗುತ್ತದೆ ಎಂದು ಕೊಂದು ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿದವು.
         ಸಿಂಹ ಮುಂದೆ ಬಂದು, ” ಮೊದಲನೇ ಭಾಗ ಕಾಡಿನ ರಾಜನಾದ ನನ್ನ ಪಾಲು, ಎರಡನೇ ಭಾಗ ಈ ವಿಭಾಗವನ್ನು ಮಾಡುವ ನ್ಯಾಯಾಧೀಶನಾದ ನನ್ನ ಪಾಲು, ಮೂರನೆಯ ಭಾಗ ವೇಗವಾಗಿ ಓಡಿ ಜಿಂಕೆಯನ್ನು ಹಿಡಿದ್ದಿದ್ದಕ್ಕಾಗಿ ನನ್ನ ಪಾಲು, ಇನ್ನು ನಾಲ್ಕನೇ ಪಾಲನ್ನು ಮುಟ್ಟುವ ಧೈರ್ಯ ನಿಮ್ಮಲ್ಲಿ ಯಾರಿಗಾದರು ಇದ್ದಾರೆ ಮುಂದೆ ಬನ್ನಿ ನೋಡೋಣ” ಎಂದು ತನ್ನ ನ್ಯಾಯವನ್ನು ಘೋಷಿಸಿತು.
          ಆಗ ನರಿ ತನ್ನ ಬಾಲವನ್ನು ಹಿಂಬದಿಯ ಕಾಲುಗಳ ನಡುವೆ ಸಿಕ್ಕಿಸಿ ಕೊಂಡು, ಗುಳ್ಳೆನರಿ ಹಾಗು ತೋಳದೊಡನೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾಡಿನ ಹಾದಿ ಹಿಡಿಯುತ್ತ , “ದೊಡ್ಡವರ ಜೊತೆ ಕೆಲಸ ಹಂಚಿಕೊಬಹುದು, ಆದರೆ ಫಲ ಹಂಚಿ ಕೊಳ್ಳೋಕಾಗಲ್ಲ” ಎಂದು ಗೊಣಗಿಕೊಂಡಿತು.
 
 

ಸಿಂಹದ ಪಾಲು

        ಒಮ್ಮೆ ಒಂದು ಸಿಂಹ, ನರಿ, ಗುಳ್ಳೆ ನರಿ ಹಾಗು ತೋಳದೊಡನೆ ಬೇಟೆಯಾಡಲು ಹೊರಟಿತು. ಬಹಳ ಹೊತ್ತಿನ ಹುಡುಕಾಟದ ನಂತರ, ಇವುಗಳ ಕಣ್ಣಿಗೆ ಜಿಂಕೆ ಯೊಂದು ಕಾಣಿಸಿತು. ಎಲ್ಲರು ಸೇರಿ ಜಿಂಕೆಯನ್ನು ಕೊಂದವು. ಸರಿ ಈಗ ಜಿಂಕೆಯ ಮಾಂಸದ ಪಾಲನ್ನು ಹೇಗೆ ವಿಂಗಡಿಸುವುದು ಎಂದು ಎಲ್ಲರೂ ಯೋಚಿಸುತಿದ್ದಾಗ, ಸಿಂಹ ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿ ಎಂದು ಗುಡುಗಿತು. ಇತರರಿಗೆ ಕುಶಿಯಾಯಿತು, ಎಲ್ಲರಿಗು ಒಂದೊಂದು ಪಾಲು ಸಿಗುತ್ತದೆ ಎಂದು ಕೊಂದು ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿದವು.
         ಸಿಂಹ ಮುಂದೆ ಬಂದು, ” ಮೊದಲನೇ ಭಾಗ ಕಾಡಿನ ರಾಜನಾದ ನನ್ನ ಪಾಲು, ಎರಡನೇ ಭಾಗ ಈ ವಿಭಾಗವನ್ನು ಮಾಡುವ ನ್ಯಾಯಾಧೀಶನಾದ ನನ್ನ ಪಾಲು, ಮೂರನೆಯ ಭಾಗ ವೇಗವಾಗಿ ಓಡಿ ಜಿಂಕೆಯನ್ನು ಹಿಡಿದ್ದಿದ್ದಕ್ಕಾಗಿ ನನ್ನ ಪಾಲು, ಇನ್ನು ನಾಲ್ಕನೇ ಪಾಲನ್ನು ಮುಟ್ಟುವ ಧೈರ್ಯ ನಿಮ್ಮಲ್ಲಿ ಯಾರಿಗಾದರು ಇದ್ದಾರೆ ಮುಂದೆ ಬನ್ನಿ ನೋಡೋಣ” ಎಂದು ತನ್ನ ನ್ಯಾಯವನ್ನು ಘೋಷಿಸಿತು.
          ಆಗ ನರಿ ತನ್ನ ಬಾಲವನ್ನು ಹಿಂಬದಿಯ ಕಾಲುಗಳ ನಡುವೆ ಸಿಕ್ಕಿಸಿ ಕೊಂಡು, ಗುಳ್ಳೆನರಿ ಹಾಗು ತೋಳದೊಡನೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾಡಿನ ಹಾದಿ ಹಿಡಿಯುತ್ತ , “ದೊಡ್ಡವರ ಜೊತೆ ಕೆಲಸ ಹಂಚಿಕೊಬಹುದು, ಆದರೆ ಫಲ ಹಂಚಿ ಕೊಳ್ಳೋಕಾಗಲ್ಲ” ಎಂದು ಗೊಣಗಿಕೊಂಡಿತು. 
 

ತೋಳ ಮತ್ತು ಕುರಿ

            ಒಮ್ಮೆ ಬೆಟ್ಟದ ಮಧ್ಯದಲ್ಲಿ ಹರಿಯುತ್ತಿದ್ದ ತೊರೆಯ ಬಳಿ ತೋಳವೊಂದು ನೀರು ಕುಡಿಯಲು ಬಂತು. ನೀರು ಕುಡಿದು ತಲೆಯೆತ್ತಿದ ತೋಳನಿಗೆ, ಕುರಿ ಮರಿಯೊಂದು ಕೆಳಗಡೆ ನೀರು ಕುಡಿಯುತಿದ್ದು ಕಾಣಿಸಿತು. ತೋಳನ ಬಾಯಲ್ಲಿ ನೀರು, ನನ್ನ ರಾತ್ರಿ ಊಟ ಸಿಕ್ಕಿತೆಂದುಕೊಂಡು, ಕುರಿಗೆ “ನೀನು ನಾನು ಕುಡಿಯುವ ನೀರನ್ನು ಗಲೀಜು ಮಾಡುತಿದ್ದೀಯ” ಎಂದು ಗದರಿ ಕೇಳಿತು.
           ಅದಕ್ಕೆ ಕುರಿ ಮರಿ, “ಇಲ್ಲಪ್ಪ ದೊರೆ ಇಲ್ಲ, ನೀರು ನೀನು ಇರುವಲ್ಲಿಂದ ನನ್ನ ಕಡೆ ಬರುತ್ತಿದೆ, ಹಾಗಾಗಿ ನಾನು ನಿನ್ನ ನೀರನ್ನು ಗಲೀಜು ಮಾಡುತ್ತಿಲ್ಲ” ಎಂದು ಉತ್ತರಿಸಿತು.
“ಸರಿ ಹಾಗಾದರೆ, ಹೋದ ವರ್ಷ ನನ್ನನ್ನ ಕೆಟ್ಟವ ಎಂದು ಯಾಕೆ ಕರೆದೆ” ಎಂದು ಕಿರುಚಿತು ತೋಳ .
“ನಾನು ನಿನ್ನನ್ನು ಕೆಟ್ಟವ ಎಂದು ಕಳೆದ ವರ್ಷ ಕರೆದಿರುವುದು ಸಾಧ್ಯವೇ ಇಲ್ಲಾ, ಯಾಕೆಂದರೆ ನನ್ನ ವಯಸ್ಸು ಆರು ತಿಂಗಳು ಅಷ್ಟೇ” ಎಂದು ಕುರಿ ಉತ್ತರಿಸಿತು.
“ನಂಗೊತ್ತಿಲ್ಲ, ನೀನಲ್ಲ ಅಂದರೆ ನಿಮ್ಮಪ್ಪ ಅಂದಿರಬಹುದು” ಎಂದು ತೋಳ, ಕೆಳಗಡೆ ಹಾರಿ ಕುರಿ ಮರಿಯನ್ನು ಕೊಂದು ತಿಂದಿತು. ಸಾಯುವ ಮೊದಲು ಕುರಿ ಬಾಯಿಂದ, “ಕೆಟ್ಟವರಿಗೆ ಇನ್ನೊಬ್ಬರನ್ನು ಹಾಳುಗೆಡವಲು ಯಾವುದೇ ಕಾರಣ ಬೇಕಿಲ್ಲ” ಎಂಬ ಉದ್ಗಾರ ಹೊರಬಿತ್ತು
 
 

ತೋಳ ಮತ್ತು ಮೇಕೆಯ ಮರಿ

      ಒಂದೂರಲ್ಲಿ ಒಂದು ಮೇಕೆ ಮರಿ ಇತ್ತು. ಆಗ ತಾನೆ ಮೂಡುತಿದ್ದ ತನ್ನ ಕೊಂಬಗಳನ್ನು ನೋಡಿ, ತಾನಾಗಲೇ ದೊಡ್ಡವನಾದೆ ಎಂದು ಜಂಬದಿಂದ ಮೆರೆದಿತ್ತು. ಒಂದು ದಿನ ಸಂಜೆ, ಹುಲ್ಲು ಮೇಯ್ದಾದ ನಂತರ ಎಲ್ಲಾ ಮೇಕೆಗಳು ಮನೆಯಕಡೆ ಹೊರಟವು. ತಾಯಿ ಮೇಕೆ ಮನೆಗೆ ಹೊಗಲು ಕರೆದದ್ದು ಕೇಳಿಸಿದರೂ ಕೇಳಿಸದಂತೆ, ಇನ್ನೂ ತಿನ್ನುತ್ತಿರುವಂತೆ ನಟಿಸಿತು. ಸ್ವಲ್ಪ ಹೊತ್ತಿನ ನಂತರ ತಲೆ ಎತ್ತಿ ನೋಡಿದರೆ, ಎಲ್ಲ ಮೇಕೆಗಳೂ ಆಗಲೇ ಮನೆಗೆ ಹೊರಟುಹೋಗಿದ್ದವು. ಮರಿ ಮೇಕೆಯೊಂದೆ ಹಿಂದೆ ಉಳಿದಿತ್ತು, ಸೂರ್ಯ ಆಗಲೆ ಮುಳುಗಲು ತಯಾರಿ ನಡೆಸಿದ್ದ, ಮರಗಳ ಉದ್ದುದ್ದ ನೆರಳನ್ನು ನೋಡಿ, ತೋಳನ ಭೀತಿಯಿಂದ ತರತರನೆ ನಡುಗಲಾರಂಭಿಸಿತು ಮೇಕೆ ಮರಿ. ಹೆದರಿಕೆಯಿಂದಲೇ ಅಮ್ಮಾ ಅಮ್ಮಾ ಎಂದು ಕೂಗುತ್ತಾ ಮನೆಯದಾರಿ ಹಿಡಿಯಿತು. ಮಾರ್ಗ ಮಧ್ಯದಲ್ಲಿ ಗಿಡಗಳ ಪೊದೆಯಿಂದ ತೋಳವೊಂದು ದುತ್ತನೆ ಮೇಕೆ ಮರಿಯ ಎದುರಿಗೆ ಬಂದು ನಿಂತಿತು. ತೋಳನನ್ನು ನೊಡಿದ ಮೇಕೆ ಮರಿ ತನ್ನ ಜೀವದ ಮೇಲಿನ ಆಸೆಯನ್ನು ಬಿಟ್ಟುಬಿಟ್ಟಿತು. ಆದರೂ ಸ್ವಲ್ಪ ದೈರ್ಯ ಮಾಡಿ, ನಡುಗುವ ದನಿಯಲ್ಲಿ, ತೋಳಣ್ಣ ನನ್ನನ್ನು ತಿನ್ನುವ ಮೊದಲು, ನಿನ್ನ ತುತ್ತೂರಿಯ ದನಿಗೆ ನನ್ನ ಕಾಲು ನೋಯುವಷ್ಟು ನೃತ್ಯ ಮಾಡಬೇಕೆಂಬದು ನನ್ನ ಕೊನೆ ಆಸೆ, ದಯವಿಟ್ಟು ನೆರೆವೇರಿಸಿಕೊಡುತ್ತೀಯಾ ಎಂದಿತು. ತೋಳನಿಗೂ ಮೇಕೆ ಮರಿಯನ್ನು ತಿನ್ನುವ ಮೊದಲು ಸ್ವಲ್ಪ ಮನರಂಜನೆ ಇರಲಿ ಎನಿಸಿ, ಆಗಲಿ ನಿನ್ನ ಆಸೆಯನ್ನು ನೆರವೇರಿಸುತ್ತೇನೆ ಎಂದು ಮೇಕೆ ಮರಿಗೆ ಹೇಳಿ, ತನ್ನ ತುತ್ತೂರಿ ತೆಗೆದು ನಿಧಾನವಾಗಿ ತಾನು ಊಟಮಾಡುವ ಮೊದಲು ಬಾರಿಸುವ ರಾಗವನ್ನು ಬಾರಿಸತೊಡಗಿತು.
         ಇತ್ತ, ಮನೆಯ ಹಾದಿ ಹಿಡಿದಿದ್ದ ಮೇಕೆಗಳ ಗುಂಪು ತುಂಬಾ ಹೆಚ್ಚು ದೂರ ಹೋಗಿರಲಿಲ್ಲ, ಕುರುಬನ ನಾಯಿಗಳು ತೋಳನ ತುತ್ತೂರಿಯ ರಾಗವನ್ನು ಗುರುತಿಸಿ, ತೋಳ ಯಾವುದೊ ಮೇಕೆಯನ್ನು ಹಿಡಿದಿರಬೇಕೆಂದು ಒಡನೆಯೆ ಶಬ್ಧಬಂದ ಕಡೆ ನಾಯಿಗಳು ನುಗ್ಗಿದವು. ಇದ್ದಕ್ಕಿದ್ದಂತೆ ನಾಯಿಗಳ ದಾಳಿಯನ್ನು ಕಂಡು, ತೋಳ ತುತ್ತೂರಿಯನ್ನು ನಿಲ್ಲಿಸಿ ತನ್ನ ಕಾಲಿಗೆ ಬುದ್ದಿಹೇಳಿತು. ಜೀವ ಉಳಿಸಿಕೊಂಡ ತೋಳ, ಮೇಕೆ ಮರಿ ಕಂಡ ತಕ್ಷಣ ಮೊದಲು ಅದನ್ನು ತಿನ್ನದೇ,  ತುತ್ತೂರಿ ಊದಿದ್ದಕ್ಕೆ ತನ್ನನ್ನು ತಾನೇ ಹಳಿದು ಕೊಂಡಿತು. ಇತ್ತ ಮೇಕೆ ಮರಿ ಮತ್ತೆ ಯಾವತ್ತೂ ಜಂಬ ಮಾಡದೇ, ತನ್ನ ತಾಯಿಯೊಡನೆ ಇರುವುದನ್ನು ಕಲಿಯಿತು.
             ನೀತಿ: ನಾವು ಮಾಡಬೇಕಾದ ಕಾರ್ಯದಿಂದ ನಮ್ಮನ್ನು ಬೇರೆ ಯಾವುದೇ ಕಾರಣಗಳು ತಡೆಯಬಾರದು
 
 

ಆಮೆ ಮತ್ತು ಬಾತುಕೋಳಿಗಳು

ನಿಮಗೆ ಗೊತ್ತೆ, ಅಮೆ ತನ್ನ ಮನೆಯನ್ನು ತನ್ನ ಬೆನ್ನ ಮೇಲೆ ಯಾವಗಲೂ ಹೊತ್ತು ತಿರುಗುತ್ತದೆ. ಅದು ಎಷ್ಟು ಪ್ರಯತ್ನಿಸಿದರೂ ಮನೆಯನ್ನು ಬಿಟ್ಟು ಇರಲಾರದು. ಒಮ್ಮೆ ಜ್ಯೂಪಿಟರ್ (ಗುರು ಗ್ರಹ) ಮದುವೆಗೆ ಅಮೆಗೆ ಅಮಂತ್ರಣ ಕಳಿಸಿದ್ದರೂ, ಅಮೆ ಮದುವೆಗೆ ಹೊಗದೆ ಸೋಮಾರಿಯಾಗಿ ಮನೆಯಲ್ಲೇ ಕುಳಿತಿತ್ತಂತೆ ಅದಕ್ಕೆ ಗುರು ಕೊಂಪಗೊಂಡು ನೀನು ಎಲ್ಲೇ ಹೊದರೂ ನಿನ್ನ ಮನೆಯನ್ನು ಜೊತೆಗೆ ಕರೆದೊಯ್ಯಿ ಎಂದು ಅಮೆಗೆ ಶಾಪ ಕೊಟ್ಟನಂತೆ.
      ಬಹಳ ವರುಷಗಳ ನಂತರ, ಆಮೆಗೆ ಅಯ್ಯೊ ನಾನು ಗುರುವಿನ ಮದುವೆಗೆ ಹೋಗಬೇಕಾಗಿತ್ತು, ಹೊಗಿದ್ದರೆ ನಾನೂ ಮೊಲದ ಹಾಗೆ ವೇಗವಾಗಿ ಓಡಾಡಬಹುದಿತ್ತು, ಇಡೀ ಪ್ರಪಂಚವನ್ನು ಸುತ್ತಬಹುದಿತ್ತು. ಆಮೆಗೆ ತಾನೂ ಇಡೀ ಪ್ರಪಂಚವನ್ನು ಸುತ್ತಬೇಕೆಂಬ ಆಸೆ ಅದರೆ ತನ್ನ ಮನೆಯನ್ನು ಬೆನ್ನ ಮೇಲೆ ಮನೆಯನ್ನು ಹೊತ್ತುಕೊಂಡು ಪ್ರಪಂಚವನ್ನು ಎಲ್ಲಿ ಸುತ್ತಲು ಸಾದ್ಯ ಎಂದು ನಿರಾಶೆಯಾಯಿತು.
     ಹೀಗಿರಬೇಕಾದರೆ ಒಂದು ದಿನ ಅಮೆಗೆ ಎರಡು ಬಾತುಕೋಳಿಗಳ ಪರಿಚಯವಾಯಿತು. ಆಮೆ ಬಾತುಕೋಳಿಗಳಿಗೆ ತನ್ನ ದುಃಖವನ್ನು ಹೇಳಿಕೊಂಡಿತು. ಅದಕ್ಕೆ ಬಾತುಕೋಳಿಗಳು, ನೀನೇನು ಯೋಚನೆ ಮಾಡಬೇಡ, ನಾವು ನಿನಗೆ ಸಹಾಯ ಮಾಡುತ್ತೇವೆ ಎಂದವು. ಅಲ್ಲಿಯೆ ಬಿದ್ದಿದ ಒಂದು ಕೋಲನ್ನು ತೋರಿಸಿ, ನಿನ್ನ ಬಾಯಿಂದ ಈ ಕೋಲನ್ನು ಕಚ್ಚಿ ಹಿಡಿದುಕೊ, ನಾವಿಬ್ಬರೂ ಈ ಕೋಲನ್ನು ಹಿಡಿದುಕೊಂಡು ಆಕಾಶದಲ್ಲಿ ಹಾರಿ, ನಿನಗೆ ಇಡೀ ಪ್ರಪಂಚವನ್ನು ತೋರಿಸುತ್ತೇವೆ. ಆದರೆ ಒಂದು ನೆನಪಿನಲ್ಲಿಡು, ಯಾವುದೇ ಕಾರಣಕ್ಕೂ ಮಾತಾಡಲು ಬಾಯಿತೆರೆಯಬೇಡ ಎಂದು ಬಾತುಕೋಳಿಗಳು ಹೇಳಿದ್ದನ್ನು ಕೇಳಿ, ಸಂತೋಷದಿಂದ ಅಮೆ ಅವರು ಹೇಳಿದ್ದಕ್ಕೆ ಒಪ್ಪಿಗೆಸೂಚಿಸಿತು.
        ಆಮೆ ತನ್ನ ಬಾಯಿಂದ ಕೋಲನ್ನು ಕಚ್ಚಿ ಹಿಡಿಯಿತು, ಬಾತುಕೋಳಿಗಳು ಕೋಲಿನ ಎರಡು ತುದಿಗಳನ್ನು ಹಿಡಿದುಕೊಂಡು ಆಕಾಶಕ್ಕೆ ಹಾರಿದವು. ಆಗ ಅದೇ ತಾನೆ ಅಲ್ಲಿ ಹಾರುತಿದ್ದ ಕಾಗೆಯೊಂದು ಈ ದೃಶ್ಯವನ್ನು ನೊಡಿ, “ಖಂಡಿತ ಇದು ಅಮೆಗಳಿಗೆಲ್ಲಾ ರಾಜನಿರಬೇಕು” ಎಂದು ಉದ್ಗರಿಸಿತು. ಇದನ್ನು ಕೇಳಿಸಿಕೊಂಡ ಆಮೆ ಸುಮ್ಮನಿರಲಾರದೆ “ಯಾಕೆ ಖಂಡಿತವಾಗಿ…” ಎಂದು ಮಾತಾಡಲಾರಂಬಿಸಿದಾಗ ಕೋಲಿನ ಹಿಡಿತ ತಪ್ಪಿ ದೊಪ್ಪೆಂದು ಕೆಳಗೆ ಬಿದ್ದು ಸತ್ತು ಹೋಯಿತು.
ನೀತಿ: ಮೂರ್ಖ ಕುತೂಹಲ ಮತ್ತು ಜಂಬ ನಮ್ಮನ್ನು ದುರದೃಷ್ಟದತ್ತ ನೂಕುತ್ತವೆ.
 

ಕಪ್ಪೆ ರಾಜಕುಮಾರಿಯ ಕತೆ

ಕಪ್ಪೆ ರಾಜಕುಮಾರಿಯ ಕತೆ
ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಗಂಡು ಮಕ್ಕಳು. ರಾಜಕುಮಾರರು ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಮದುವೇ ಮಾಡಲು ರಾಜ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಮೂರೂ ರಾಜಕುಮಾರರಿಗೂ ಒಂದೊಂದು ಬಿಲ್ಲು ಬಾಣ ಕೊಟ್ಟು, ಯಾರು ಯಾರ ಮನೆಗೆ ಬಾಣವನ್ನು ಕಳಿಸುತ್ತಾರೊ ಅವರ ಮನೆಯಿಂದ ಹೆಣ್ಣನ್ನು ತಂದು ಮದುವೆ ಮಾಡಲಾಗುವುದು ಎಂದು ಹೇಳುತ್ತಾನೆ.
       ಮೊದಲನೇ ರಾಜಕುಮಾರ ಅಗಸರ ಮನೆಗೆ ಬಾಣ ಕಳಿಸುತ್ತಾನೆ. ಸರಿ ಅವನಿಗೆ ಅಗಸರ ಮಗಳೊಡನೆ ಮದುವೆ ಅಗುತ್ತದೆ. ಎರಡನೇ ರಾಜಕುಮಾರ ಕುಂಬಾರನ ಮನೆಗೆ ಬಾಣ ಕಳಿಸುತ್ತಾನೆ. ಅವನಿಗೆ ಕುಂಬಾರನ ಮಗಳೊಡನೆ ಮದುವೆ ಆಗುತ್ತದೆ. ಕಿರಿಯ ರಾಜಕುಮಾರ ಕಪ್ಪೆ ಮನೆಗೆ ಬಾಣ ಕಳಿಸುತ್ತಾನೆ. ರಾಜ ಆಡಿದ ಮಾತಿನಂತೆ, ಕೊನೆಯವನಿಗೆ ಕಪ್ಪೆಯ ಮಗಳೊಡನೆ ಮದುವೆ ಮಾಡುತ್ತಾನೆ. ಕಿರಿಯ ರಾಜಕುಮಾರ ಕಪ್ಪ್ದೆಗಾಗಿ ಒಂದು ಗೂಡನ್ನು ಕಟ್ಟಿ ಅಲ್ಲಿ ಕಪ್ಪೆ ವಾಸಿಸುವಂತೆ ಎರ್ಪಾಡು ಮಾಡುತ್ತಾನೆ.
       ಒಮ್ಮೆ ರಾಜ ತನ್ನ ಮೂರು ಪುತ್ರರನ್ನು ಕರೆದು ನಾಳೆ ನೀವೆಲ್ಲರೂ ನಿಮ್ಮ ಹೆಂಡತಿಯರಿಂದ ಒಂದು ಮಗುವಿನ ಉಡುಗೆಯನ್ನು ತಯಾರಿಸಿಕೊಂಡು ಬರಬೇಕು ಎಂದು ಅಪ್ಪಣೆಯಿತ್ತ. ಅಗಸ ಮತ್ತು ಕುಂಬಾರನ ಮಗಳು ಹೇಗೊ ತಮಗೆ ತಿಳಿದ ಹಾಗೆ ಉಡುಗೆಯನ್ನು  ತಯಾರಿಸಿದರು. ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಮಕ್ಕಳ ಉಡುಪನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಉಡುಪನ್ನು ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಉಡುಗೆ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಸುಂದರ ಉಡುಗೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ. ಸಂತೋಷದಿಂದ ನಾಳೆ ಆಸ್ತಾನಕ್ಕೆ ಉಡುಗೆಯನ್ನು ಕೊಂಡೊಯುತ್ತಾನೆ. ರಾಜ ಮೊದಲಿಗೆ ಅಗಸನ ಮಗಳ ಉಡುಗೆ ನೋಡುತ್ತಾನೆ, ಅಷ್ಟೇನೂ ನಯಗಾರಿಕೆಯಿಲ್ಲದ ಉಡುಗೆ ಎಂದು ತಿರಸ್ಕರಿಸುತ್ತಾನೆ. ನಂತರ ಕುಂಬಾರನ ಮಗಳ ಉಡುಗೆಯನ್ನು ಕೂಡ ತಿರಸ್ಕರಿಸುತ್ತಾನೆ. ಕಿರಿಯ ರಾಜಕುಮಾರ ಉಡುಗೆಯನ್ನು ತೋರಿದಾಗ ರಾಜನ ಕಣ್ಣುಗಳು ಅಗಲವಾಗಿ, ವಾಹ್ ಎಂಬ ಉದ್ಗಾರದೊಂದಿಗೆ ಕಿರಿಯ ಮಗನನ್ನು ಆಲಂಗಿಸಿ ಕಪ್ಪೆ ತಯಾರಿಸಿದ ಉಡುಗೆ ಅತ್ಯುತ್ತಮವಾದುದೆಂದು ಬಹುಮಾನವನ್ನು ಕೊಡುತ್ತಾನೆ.
        ಇನ್ನೂ ಕೆಲವು ದಿನಗಳಾದ ಮೇಲೆ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಿಮ್ಮ ಹೆಂಡಂದಿರಿಂದ ಒಂದು ಒಳ್ಲೆಯ ಸಿಹಿತಿಂಡಿಯನ್ನು ಮಾಡಿಸಿ ತನ್ನಿ ಎಂದು ಅಪ್ಪಣೆ ಕೊಡುತ್ತಾನೆ. ಈ ಬಾರಿ ಅಗಸನ ಮಗಳು ಮತ್ತು ಕುಂಬಾರನ ಮಗಳು ಕಪ್ಪೆ ಇಷ್ಟು ಸುಂದರವಾಗಿ ಉಡುಗೆ ಹೊಲಿದುಕೊಟ್ಟಿದೆ ಎಂದರೆ, ಈ ಬಾರಿ ಕಪ್ಪೆ ಏನು ಮಾಡುವುದೋ ಅದನ್ನೇ ನಾವೂ ಮಾಡುವುದು ಎಂದು ತೀರ್ಮಾನಿಸಿ ಕಪ್ಪೆ ಸಿಹಿತಿಂಡಿ ಮಾಡುವುದನ್ನೇ ಕಾಯುತ್ತಾ ಕುಳಿತಿದ್ದರು.
ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಮತ್ತೇ ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಈ ಬಾರಿ ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ  ಸಿಹಿ ತಿಂಡಿಯನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಸಿಹಿ ತಿಂಡಿ ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಸಿಹಿತಿಂಡಿ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಕೇಕಿನಿಂದ ಮಾಡಿದ ಅರಮನೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ ಜೊತೆಗೆ ಸಂತೋಷವೂ ಅಯಿತು. ಕಪ್ಪೆ ಅಗಸನ ಮಗಳು ಕುಂಬಾರನ ಮಗಳು ನನ್ನ ಸಿಹಿತಿಂಡಿಯನ್ನು ಕಾಪಿ ಮಾಡಲು ಕಾಯುತ್ತಿರುವುದು ತಿಳಿದು ಎಲ್ಲರಿಗೂ ಕಾಣುವಂತೆ ಕೇಕ್ ಮಾಡಲು ಶುರುಮಾಡಿತು. ಮರೆಯಲ್ಲಿ ಅವಿತು ಅಗಸನ ಮಗಳು ಕುಂಬಾರನ ಮಗಳು ಕಪ್ಪೆ ಮಾಡುವರೀತಿಯಲ್ಲಿ ತಾವು ಕೇಕ್ ಮಾಡಲು ಪ್ರಾರಂಭಿಸಿದರು. ಎಲ್ಲಾಮಾಡಿ ಬೇಯಿಸುವಮುನ್ನ ಕಪ್ಪೆ ಸ್ವಲ್ಪ  ಹಸುವಿನ ಸೆಗಣಿಯನ್ನು ಕೇಕ್ ಮಿಶ್ರಣಕ್ಕೆ ಹಾಕಿತು. ಅಗಸನ ಮಗಳು ಕುಂಬಾರನ ಮಗಳು  ಸಗಣಿಯ ಬಗ್ಗೆ ಸ್ವಲ್ಪ ಅನುಮಾನಿತರಾದರೂ, ಅದನ್ನು ಹಾಕದೇ ಹೊದರೆ ಕೇಕ್ ಚೆನ್ನಾಗಿ ಬರುವುದಿಲ್ಲವೇನೊ ಎಂದುಕೊಂಡು ತಾವು ಸೆಗಣಿಯನ್ನು ಹಾಕಿ ಕೇಕ್ ಮುಗಿಸಿದರು.
          ಮಾರನೇ ದಿನ ಮೊದಲು ಅಗಸನ ಮಗಳ ಕೇಕ್ ತರಿಸಿದ ರಾಜ, ಅದರಿಂದ ಬರುತಿದ್ದ ಸೆಗಣಿ ವಾಸನೇ ನೊಡಿಯೆ ಕೇಕನ್ನು ಕಸದ ಬುಟ್ಟಿಗೆ ಎಸೆದ. ಕುಂಬಾರನ ಮಗಳ ಕೇಕ್ ಕೂಡಾ ಕಸದ ಬುಟ್ಟಿ ಸೇರಿತು. ಕಪ್ಪೆಯ ಕೇಕ್ ನೊಡಿ ರಾಜ ಸಂತೊಷಭರಿತನಾಗಿ ಕಿರಿಯಮಗನಿಗೆ ಮತ್ತೆ ಬಹುಮಾನ ಕೊಟ್ಟ.
ಸ್ವಲ್ಪ ದಿನಗಳ ನಂತರ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಾಳೆ ನಿಮ್ಮ ಹೆಂಡತಿಯರು ಸಭಾಂಗಣದಲ್ಲಿ ನೃತ್ಯ ಮಾಡಬೇಕು ಎಂದು ಅಪ್ಪಣೆ ಕೊಟ್ಟನು.ಅಗಸನ ಮಗಳು ಮತ್ತು ಕುಂಬಾರನ ಮಗಳು ತಮಗೆ ಕುಣಿಯುವುದಕ್ಕೆ ಬರದೇ ಇದ್ದರೂ ನಮಗೆ ಕಾಲುಗಳಿವೆ ಮನಸ್ಸಿಗೆ ಬಂದ ಹಾಗೆ ಕುಣಿಯುವುದು ಎಂದು ನಿರ್ಧರಿಸಿದರು. ಕಿರಿಯ ರಾಜಕುಮಾರ ಎಂದಿನಂತೆ ಮನಗೆ ಬಂದು ಅಳುತ್ತಾ ಕುಂತನು. ಕಪ್ಪೆ ತನ್ನ ಗೂಡಿನಿಂದ ಹೊರಬಂದು ಮತ್ತೆ ಯಾಕೆ ಅಳುತಿದ್ದೀಯ ಎಂದಿತು. ಅದಕ್ಕೆ ರಾಜಕುಮಾರನು ’ನೀನು ಬಟ್ಟೆಯನ್ನು ಹೊಲಿದೆ, ಸಿಹಿತಿಂಡಿಯನ್ನೂ ಮಾಡಿದೆ ಆದರೆ ನನ್ನ ತಂದೆ ನಾಳೆ ನೀನು ನೃತ್ಯ ಮಾಡಬೇಕೆಂದು ಹೇಳಿದ್ದಾರೆ ಏನು ಮಾಡುವುದೆಂದು ತಿಳಿಯದೆ ಅಳುತಿದ್ದೇನೆ” ಎಂದ ಹೇಳಿದ. ಇದನ್ನು ಕೇಳಿದ ಕಪ್ಪೆ, ಹೇಳಿತು, ನಾನು ಒಬ್ಬ ಋಶಿಯ ಶಾಪದಿಂದಾಗಿ ಕಪ್ಪೆ ಯಾಗಿದ್ದೇನೆ, ನಾಳೆ, ನೃತ್ಯದ ಸಮಯಕ್ಕೆ ಸರಿಯಾಗಿ ನಾನು ಚಿನ್ನದ ರಥದಲ್ಲಿ ಬಂದಿಳಿದು ನೃತ್ಯವನ್ನು ಮಾಡುತ್ತೆನೆ ಆದರೆ ಒಂದನ್ನು  ನೆನಪಿನಲ್ಲಿಡು ನನ್ನ ಈ ಕಪ್ಪೆ ಯ ಗೂಡನ್ನು ಮಾತ್ರಾ ಸುಟ್ಟು ಹಾಕಬೇಡ. ಇದನ್ನು ಕೇಳಿದ ರಾಜಕುಮಾರನ ಸಂತೊಷಕ್ಕೆ ಎಣೆಯೆಇಲ್ಲ.
ಮಾರನೇದಿನ, ಕುಂಬಾರನ ಮಗಳು ನೃತ್ಯ ಮಾಡಲು ಬಂದಳು, ಅವಳ ನೃತ್ಯವನ್ನು ನೋಡಿ ಎಲ್ಲರೂ ನಗಲಾರಂಬಿಸಿದರು. ಇದೇ ಗತಿ ಅಗಸನ ಮಗಳಿಗೂ ಅಯಿತು. ಆಗ ಭೂಮಿ ನಡುಗಿದಂತಾಗೆ ಎಲ್ಲರೂ ಸದ್ದು ಬಂದ ಕಡೆ ತಿರುಗಿದಾಗ ಬಂಗಾರದ ರಥದಿಂದ ಸುಂದರ ರಾಜಕುಮಾರಿ ಸಭಾಂಗಣಕ್ಕೆ ಬಂದಳು. ಮೂರನೇ ರಾಜಕುಮಾರ ಇವಳೇ ನನ್ನ ಹೆಂಡತಿ ಎಂದು ತಿಳಿಸಿದಾಗ ಎಲ್ಲರಿಗೂ ಸಂತೊಷವಾಯಿತು. ಕಪ್ಪೆ ರಾಜಕುಮಾರಿ ಅದ್ಭುತವಾಗಿ ನೃತ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದಳು. ಮೂರನೇ ರಾಜಕುಮಾರ ಅತಿಯಾದ ಸಂತೋಷದಿಂದ ಮನೆಗೆ ಹೊದ ಅಲ್ಲಿದ್ದ ಕಪ್ಪೆ ಗೂಡನ್ನು ನೋಡಿ, ಇನ್ನು ಇದು ಯಾಕೆ ಬೇಕು ಎಂದು ಅದನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟನು. ಅತಿಯಾದ ಸಂತೋಷದಲ್ಲಿ ಕಪ್ಪೆ ಹೇಳಿದ್ದ ಮಾತು ಮರೆತುಬಿಟ್ಟಿದ್ದನು. ಮನೆಗೆ ಹಿಂದಿರುಗಿದ ರಾಜಕುಮಾರಿ ಕಪ್ಪೆ ಗೂಡು ಸುಟ್ಟಿದ್ದನ್ನು ನೊಡಿದ ತಕ್ಷಣ ಪಾರಿವಾಳವಾಗಿ ಹಾರಿಹೊದಳು.
          ರಾಜಕುಮಾರನ ಸಂತೋಷ ಒಮ್ಮೆಲೆ ಇಳಿದು ದುಃಖಪೂರಿತನಾದನು. ರಾಜಕುಮಾರಿಯನ್ನು ಬಿಟ್ಟಿರಲಾರದೆ, ಅವಳನ್ನು ಹುಡಿಕಿ ತರುವೇನೆಂದು ರಾಜಕುಮಾರ ಹೊರಟನು. ಬಹಳಾ ದೂರ ನಡೆದಮೇಲೆ ಅವನಿಗೆ ಆಯಾಸವಾಗಿತ್ತು. ಹತ್ತಿರದಲ್ಲೇ ಒಂದು ಮನೆ ಕಾಣಿಸಿತು, ಒಳಗೆ ಹೊದ ರಾಜಕುಮಾರ ಅಲ್ಲಿ ಮುರು ಮೊಳದುದ್ದದ ಮೂಗಿರುವ ಒಬ್ಬ ಅಜ್ಜಿ ಕುಳಿತಿದ್ದುದು ಕಂಡು ತಿನ್ನಲು ಎನಾದರು ಸಿಗುವುದೇ ಎಂದು ಕೇಳಿದ. ಆ ಅಜ್ಜಿ ಅತನನ್ನು ಕೂಡಿಸಿ ಊಟ ಬಡಿಸಿದಳು. ಅಜ್ಜಿ  ನೀನು ಯಾರಪ್ಪ ಎಂದು ಕೇಳಿದಾಗ, ರಾಜಕುಮಾರ ತನ್ನ ಕತೆಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಕೇಳಿದ ಅಜ್ಜಿ, ನನಗೆ ನಿನ್ನ ಹೆಂಡತಿ ಎಲ್ಲಿದ್ದಾಳೆ ಎಂಬುದು ತಿಳಿದಿದೆ ಎಂದಳು. ಆಶ್ಚರ್ಯದಿಂದ ಎಲ್ಲಿದ್ದಾಳೆ ಹೇಳಜ್ಜಿ ಎಂದು ದಂಬಾಲು ಬಿದ್ದ. ಆಗ ಅಜ್ಜಿ, ನೀನು ಏಳು ಸಮುದ್ರವನ್ನು ದಾಟಿ ನಂತರ ಏಳು ಬೆಟ್ಟವನ್ನು  ಏರಿ, ಏಳನೇ ಬೆಟ್ಟದ ಮೇಲೆ ಒಂದು ಮರವಿರುತ್ತದೆ, ಅ ಮರವನ್ನು ಕಡಿದರೆ ನಿನಗೆ ಒಂದು ಪೆಟ್ಟಿಗೆ ಕಾಣುತ್ತದೆ, ಪೆಟ್ಟಿಗೇ ತೆರೆದರೆ ಒಂದು ಮೊಲವಿರುತ್ತದೆ, ಹುಷಾರಿಅಗಿರು ಮೊಲ ಓಡಿಹೊಗಬಹುದು. ಮೊಲವನ್ನು ಕತ್ತರಿಸಿದರೆ ಒಳಗೆ ಒಂದು ಪಾರಿವಾಳವಿರುತ್ತದೆ. ಹುಷಾರಾಗಿ ಪಾರಿವಾಳವನ್ನು ಹಿಡಿದಿಕೊ, ಪಾರಿವಾಳವನ್ನು ಕತ್ತರಿಸಿದರೆ ಒಂದು ಮೀನಿರುತ್ತದೆ. ಹುಷಾರಾಗಿ ಮೀನನ್ನು ಹಿಡಿದುಕೊ. ಮೀನನ್ನು ಕತ್ತರಿಸಿದರೆ ಒಳಗೆ ಒಂದು ಮೊಟ್ಟೆ ಕಾಣಿಸುತ್ತದೆ. ಆ ಮೊಟ್ಟೆಯನ್ನು ಒಡೆದರೆ ಒಳಗೆ ಒಂದು ಅರಮನೆಯಿರುತ್ತದೆ. ಅರಮನೆಯ ಮುಂದೆ ಓಂದು ಸೂಜಿಯಿರುತ್ತದೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೊದರೆ ಅಲ್ಲಿ ನಿನ್ನ ಹೆಂಡತಿಯನ್ನು ಒಬ್ಬ ರಾಕ್ಷಸ ಚಾಟಿಯಿಂದ ಹೊಡಿಯುತ್ತಿರುತ್ತಾನೆ, ನಿನ್ನಲ್ಲಿರುವ ಸೂಜಿಯಲ್ಲಿ ರಾಕ್ಷಸನ ಪ್ರಾಣವಿರುತ್ತದೆ. ಸೂಜಿಯನ್ನು ಮುರಿ ರಾಕ್ಷಸ ಸಾಯುತ್ತಾನೆ. ನಂತರ ನೀನು ನಿನ್ನ ಹೆಂಡತಿಯನ್ನು ಮನೆಗೆ ಕರೆದೊಯ್ಯಬಹುದು. ಎಲ್ಲವನ್ನೂ ಕೇಳಿದ ರಾಜಕುಮಾರ ಅಜ್ಜಿಯನ್ನು ಕೇಳಿದ ಏಳನೇ ಬೆಟ್ಟದ ಮೇಲೆ ಎಷ್ಟೊಂದು ಮರಗಳಿರುತ್ತವೆ ಅದರಲ್ಲಿ ನೀನು ಹೇಳಿದ ಮರವನ್ನು ಹೇಗೆ ಕಂಡುಹಿಡಿಯುವುದು ಎಂದು ಕೇಳಿದಾಗ ಅಜ್ಜಿ, ನಾನು ನಿನಗೆ ಒಂದು ಮಂತ್ರಿಸಿದ ದಾರದ ಉಂಡೆಯನ್ನು ಕೊಡುತ್ತೇನೆ, ಅ ಉಂಡೆಯನ್ನು ಏಳನೇ ಬೆಟ್ಟದ ಮೇಲೆ ಬಿಡು, ಅ ಉಂಡೆ ಉರುಳಿಕೊಂಡು ಹೋಗಿ ನಿನಗೆ ಮರವನ್ನು ತೋರಿಸುತ್ತದೆ. ಅತಿಯಾದ ಸಂತೋಷದಿಂದ ಅಜ್ಜಿಗೆ ನಮಸ್ಕ್ಚರಿಸಿ ರಾಜಕುಮಾರ ಹೊರಡುತ್ತಾನೆ.
          ಹೋಗುವಾಗ ದಾರಿಯಲ್ಲಿ ಒಂದು ಮೊಲವನ್ನು ಒಂದು ನರಿ ಅಟ್ಟಿಸಿಕೊಂಡು ಹೋಗುತಿದ್ದುದನ್ನು ನೋಡಿ ರಾಜಕುಮಾರ ನರಿಯನ್ನು ಹೆದರಿಸಿ ಒಡಿಸಿ ಮೊಲವನ್ನು ರಕ್ಷಿಸಿದನು. ಮೊಲ ರಾಜನಿಗೆ ನೀನು ನನ್ನ್ನ ಪ್ರಾಣವನ್ನು ಉಳಿಸಿದ್ದರಿಂದ ನಿನ್ನ ಕಷ್ಟಕಾಲದಲ್ಲ್ನಿ ನನ್ನನ್ನು ನೆನೆಸಿಕೊ, ನಾನು ಬಂದು ನಿನಗೆ ಸಹಾಯ ಮಾಡುತ್ತೇನೇ ಎಂದು ಹೇಳಿತು. ರಾಜಕುಮಾರ ಹಾಗೆ ಅಗಲಿ ಎಂದು ತನ್ನ ಪ್ರಯಾಣ ಮುಂದುವರೆಸಿದ. ಸ್ವಲ್ಪ ದೂರದಲ್ಲಿ ಅತಿಯಾದ ಗಾಳಿಯಿಂದಾಗಿ ಒಂದು ಪಾರಿವಾಳದ ಗೂಡು ಮರದ ಮೇಲಿಂದ ಕೆಳಗೆ ಬಿದ್ದು, ಪಾರಿವಾಳಗಳು ದುಃಖಿತಗೊಂಡಿರುವುದನ್ನು ನೋಡಿ ರಾಜಕುಮಾರ, ಪಾರಿವಾಳದ ಗೂಡನ್ನು ಸುರಕ್ಷಿತವಾಗಿ ಎತ್ತಿ ಮರದಮೇಲಿಟ್ಟನು. ಅದನ್ನು ನೋಡಿದ ಪಾರಿವಾಳಗಳು ಸಂತೋಷದಿಂದ, ನಮ್ಮ ಕಷ್ಟಕಾಲದಲ್ಲಿ ನೀನು ಸಹಾಯಮಾಡಿದ್ದೀಯ ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ, ನಾವು ಬಂದು ನಿನಗೆ ಸಹಾಯಮಾಡುತ್ತೇವೆ ಎಂದವು. ಹಾಗೆ ಆಗಲಿ ಎಂದು ರಾಜಕುಮಾರ ತನ್ನ ಪ್ರಯಾಣಮುಂದುವರೆಸಿದ. ತಾನು ದಾಟಬೇಕಾಗಿದ್ದ ಏಳು ಸಮುದ್ರಗಳಲ್ಲಿ ಮೊದಲನೇ ಸಮುದ್ರದ ಸಮೀಪ ಬಂದಾಗ, ಕೆಲವು ಮೀನುಗಳು ದಡದಲ್ಲಿ ನೀರಿನಿಂದ ಹೊರಗಡೆ ಒದ್ದಾಡುತ್ತಿರುವುದನ್ನು ಕಂಡು ರಾಜಕುಮಾರ ಎಲ್ಲ ಮೀನುಗಳನ್ನು ಎತ್ತಿ ಸಮುದ್ರದಲ್ಲಿ ಬಿಟ್ಟನು. ಆಗ ಆ ಮೀನುಗಳು ರಾಜಕುಮಾರನಿಗೆ, ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ ನಾವು ಬಂದು ಸಹಾಯ ಮಾಡುತ್ತೇವೆ ಎಂದು ಹೇಳಿದವು.
ನಂತರ, ರಾಜಕುಮಾರ ಅಜ್ಜಿ ಹೇಳಿದಂತೆ, ಏಳು ಸಮುದ್ರ ದಾಟಿ ಮತ್ತೆ ಏಳು ಬೆಟ್ಟಗಳನ್ನು ಹತ್ತಿ, ಕೊನೆಯ ಬೆಟ್ಟದ ಮೇಲೆ ಅಜ್ಜಿ ಕೊಟ್ಟಿದ್ದ ದಾರದ ಉಂಡೆಯನ್ನು ಉರುಳಿಬಿಟ್ಟನು. ಆ ದಾರದ ಉಂಡೆ ಉರುಳಿಕೊಂಡು ಹೊಗಿ ಒಂದು ಮರದ ಕೆಳಗೆ ನಿಂತು ಕೊಂಡಿತು. ಆಗ ರಾಜಕುಮಾರನು ಆ ಮರವನ್ನು ಕತ್ತರಿಸಿದನು, ಓಳಗೆ ಅಜ್ಜಿ ಹೇಳಿದ್ದಂತೆ ಒಂದು ಪೆಟ್ಟಿಗೆ ಇತ್ತು. ಪೆಟ್ಟಿಗೆಯ ಮುಚ್ಚಳವನ್ನು ತೇರೆದಾಗ, ಅಲ್ಲಿದ್ದ ಮೊಲ ಚಂಗನೆ ಎಗರಿ ಕಾಡಿನೊಳಗೆ ಓಡಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಮೊಲಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಮೊಲಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಪೆಟ್ಟಿಗೆಯಲ್ಲಿದ್ದ ಮೊಲವನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು. ಆಗ ಮೊಲಗಳು ಹೋಗಿ ರಾಜಕುಮಾರನಿಗೆ ಬೇಕಿದ್ದ ಮೊಲವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಮೊಲಗಳಿಗೆ ಧನ್ಯವಾದವನ್ನು ಹೇಳಿ, ಮೊಲವನ್ನು ಕತ್ತರಿಸಿದನು, ಆಗ ಒಳಗಿದ್ದ ಪಾರಿವಾಳವು ರೊಯ್ಯನೆ ಹಾರಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಪಾರಿವಾಳಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಪಾರಿವಾಳಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಮೊಲದೊಳಗಿದ್ದ ಪಾರಿವಾಳವು ಹಾರಿಹೊಗಿದೆ ಅದನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು.ಆಗ ಪಾರಿವಾಳಗಳು ಹಾರಿ ಹೋಗಿ ರಾಜಕುಮಾರನಿಗೆ ಬೇಕಿದ್ದ ಪಾರಿವಾಳವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಪಾರಿವಾಳಗಳಿಗೆ ಧನ್ಯವಾದವನ್ನು ಹೇಳಿ, ಪಾರಿವಾಳವನ್ನು ಕತ್ತರಿಸಿದನು, ಅದರೊಳಗಿದ್ದ ಮೀನು ರಾಜಕುಮಾರನ ಕೈನಿಂದ ಜಾರಿ ನೀರಿನಲ್ಲಿ ಮರೆಯಾಗಿ ಹೋಯಿತು. ಚಿಂತಾಕ್ರಾಂತನಾದ ರಾಜಕುಮಾರ ತಾನು ರಕ್ಷಿಸಿದ್ದ ಮೀನುಗಳನ್ನು ನೆನೆಪಿಸಿಕೊಂಡನು. ಒಡನೆಯ ಮೀನುಗಳು ರಾಜಕುಮಾರನಿದ್ದ ಬಳಿಗೆ ಬಂದು ತಮ್ಮನ್ನು ನೆನೆಪಿಸಿಕೊಂಡ ಕಾರಣ ಕೇಳಿದವು. ರಾಜಕುಮಾರ, ತಪ್ಪಿಸಿಕೊಂಡ ಮೀನಿನ ಬಗ್ಗೆ ತಿಳಿಸಿದಾಗ, ಇತರ ಮೀನುಗಳು ಕ್ಷಣಮಾತ್ರದಲ್ಲಿ ರಾಜಕುಮಾರನಿಗೆ ಬೇಕಿದ್ದ ಮೀನನ್ನು ಹುಡುಕಿ ತಂದೊಪ್ಪಿಸಿದವು. ಹರ್ಷಚಿತ್ತನಾದ ರಾಜಕುಮಾರ ಮೀನನ್ನು ಕತ್ತರಿಸಿದಾಗ, ಅದರೊಳಗೆ ಅಜ್ಜಿ ಹೇಳಿದ್ದ ಹಾಗೆ ಒಂದು ಮೊಟ್ಟೆಯಿತ್ತು. ಅದನ್ನು ಒಡೆದನು, ಮೊಟ್ಟೆಯೊಳಗೆ ಒಂದು ಅರಮನೆಯಿತ್ತು. ಅರಮನೆಯ ಮುಂದೆ ಓಂದು ಸೂಜಿ ಬಿದ್ದಿದ್ದುದನ್ನು ನೊಡಿ ಅಜ್ಜಿ ಹೇಳಿದಂತೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೋದನು. ಅಲ್ಲಿ ಒಬ್ಬ ರಾಕ್ಷಸ ತನ್ನ ಹೆಂಡತಿಯಾದ ಕಪ್ಪೆ ರಾಜಕುಮಾರಿಯನ್ನು ಹೊಡೆಯುತಿದ್ದುದನ್ನು ನೋಡಿ, ಆ ರಾಕ್ಷಸನಿಗೆ ತನ್ನ ಹೆಂಡತಿಯನ್ನು ಬಿಟ್ಟು ಬಿಡು ಎಂದು ಹೇಳಿದನು, ಅದಕ್ಕೆ ರಾಕ್ಷಸ ನನಗೆ ಹೇಳಲು ನೀನು ಯಾರು ಎಂದಾಗ, ರಾಜಕುಮಾರನು ತನ್ನ ಕೈಯಲ್ಲ್ಲಿದ್ದ ಸೂಜಿಯನ್ನು ತೊರಿಸಿದನು, ಆಗ ರಾಕ್ಷಸ ಹೆದರಿ, ನನಗೇನು ಮಾಡಬೇಡ ನಿನ್ನ ಹೆಂಡತಿಯನ್ನು ಬಿಟ್ಟುಬಿಡುತ್ತೇನೆ ಎಂದು ಅಂಗಲಾಚಿದ. ರಾಜಕುಮಾರ ಆ ಸೂಜಿಯನ್ನು ಮುರಿದು ರಾಕ್ಷಸನ್ನು ಸಾಯಿಸಿ ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನ ಅರಮನೆಗೆ ಹಿಂದುರಿಗೆ, ಸುಖವಾಗಿ ನೂರು ವರ್ಷಗಳಕಾಲ ಬದುಕಿದನು.